ಎರಡು ಪ್ರತ್ಯೇಕ ಪ್ರಕರಣ:  ಮನೆ ಕನ್ನ ಕಳವು ಮತ್ತು ದ್ವಿಚಕ್ರವಾಹನ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ.

ಮೈಸೂರು,ಜುಲೈ,26,2022(www.justkannada.in): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕನ್ನ ಕಳವು ಮತ್ತು ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಮೈಸೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ಪೊಲೀಸ್ ಠಾಣಾ ಕನ್ನಾ ಕಳುವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 18 ರಂದು ಮೈಸೂರು ನಗರ ಸಿಟಿ ಬಸ್‌ ನಿಲ್ದಾಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿತ್ತು, ಬಂಧಿತ ಆರೋಪಿಯು ತನ್ನ ಇನ್ನಿಬ್ಬರು ಸಹಚರರೊಂದಿಗೆ ಸೇರಿಕೊಂಡು ಮೈಸೂರು ನಗರ, ಮೈಸೂರು ಜಿಲ್ಲೆ, ಮಂಡ್ಯ ಜಿಲ್ಲೆ, ಬೆಂಗಳೂರು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮನೆ ಕನ್ನ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈತನು ನೀಡಿದ ಮಾಹಿತಿ ಮೇರೆಗೆ ಈ ಕಳುವು ಪ್ರಕರಣಗಳಲ್ಲಿ, ಮಾಲುಗಳನ್ನು ಸ್ವೀಕರಿಸಿ ವಿಲೇವಾರಿ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.

ಈ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಒಟ್ಟು 09 ಮನೆ ಕನ್ನ ಕಳುವು ಪ್ರಕರಣಗಳಿಗೆ ಸಂಬಂಧಪಟ್ಟಂತೆ, ರೂ. 10,15,000/- ಮೌಲ್ಯದ 191 ಗ್ರಾಂ ತೂಕದ ಚಿನ್ನಾಭರಣಗಳು, ಕೆ.8.330 ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳು  ಏರ್‌ಗನ್ ಅನ್ನು ವಶಪಡಿಸಿಕೊಳ್ಳಲಾಗಿದೆ. 1ನೇ ಆರೋಪಿಯು ತನ್ನ ಬಾಲ್ಯಾವಸ್ಥೆಯಿಂದಲೂ ಮನೆಗಳ್ಳತನ ಮಾಡಿ, ಬಾಲ ಮಂದಿರದಲ್ಲಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೋಗಿ. ನಂತರ ಪ್ರಾಪ್ತ ವಯಸ್ಕನಾದ ನಂತರವು ತನ್ನ ಕಳ್ಳತನದ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುವುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

ಈ ಪತ್ತೆ ಕಾರ್ಯದಿಂದ ಮೈಸೂರು ನಗರ ವಿಜಯನಗರ ಠಾಣೆಯ-01, ಮೇಟಗಳ್ಳಿ-01, ಇಲವಾಲ – 02, ಮೈಸೂರು ದಕ್ಷಿಣ ಠಾಣೆ-03, ಕೆ.ಆರ್.ಎಸ್. ಠಾಣೆ-01, ಬೆಂಗಳೂರು ಜಿಲ್ಲೆಯ ಕುಂಬಳಗೋಡು ಠಾಣೆ-01 ಮನೆ ಕನ್ನ ಕಳುವು ಪ್ರಕರಣಗಳು ಪತ್ತೆಯಾಗಿವೆ.

ಮತ್ತೊಂದು ಪ್ರಕರಣದಲ್ಲಿ ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸಿ.ಸಿ.ಬಿ, ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನ ವಿಚಾರಣೆ ಮಾಡಿದಾಗ ಈತನು ಮೈಸೂರು ನಗರ, ಬೆಂಗಳೂರು, ರಾಮನಗರ ಜಿಲ್ಲೆಯ ವಿವಿಧ ಕಡೆಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಈ ಮೇರೆಗೆ ಆರೋಪಿ ಬಳಿ ರೂ. 9,00,000/ ಮೌಲ್ಯದ ವಿವಿಧ ಕಂಪನಿಯ 06 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಪತ್ತೆ ಕಾರ್ಯದಿಂದ ಮೈಸೂರು ನಗರ ಲಕ್ಷ್ಮೀಪುರಂ ಠಾಣೆಯ-02, ಬೆಂಗಳೂರು ಬ್ಯಾಟರಾಯನಪುರ-01, ರಾಜರಾಜೇಶ್ವರಿ ನಗರ-01, ಚಾಮರಾಜಪೇಟೆ-01, ರಾಮನಗರ ಜಿಲ್ಲೆಯ ಚನ್ನಪಟ್ಟಣ ಠಾಣೆ-01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

2 ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಡಿ.ಸಿ.ಪಿ ಗೀತ ಎಂ.ಎಸ್‌. ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಎ.ಸಿ.ಪಿಯಾದ  ಸಿ.ಕೆ.ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ಸಿ.ಸಿ.ಬಿ. ಹೆಚ್ ಅಂಡ್ ಬಿ ವಿಭಾಗದ ಪೊಲೀಸ್ ಇನ್ಸ್‌ ಪೆಕ್ಟರ್‌ರವರಾದ ಶೇಖರ್.ಜಿ ರವರು ಮತ್ತು ಇತರೇ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Key words: Two -separate- cases-Arrest -mysore