‘’ಗೌರಿಬಿದನೂರು-ಚಿಕ್ಕಬಳ್ಳಾಪುರ ಹೆದ್ದಾರಿ ಕಾಮಗಾರಿ ಮೇ ಒಳಗೆ ಪೂರ್ಣಗೊಳಿಸಿ’’ : ಸಚಿವ ಡಾ.ಕೆ.ಸುಧಾಕರ್ ಸೂಚನೆ…!

ಚಿಕ್ಕಬಳ್ಳಾಪುರ,ಜನವರಿ,03,2021(www.justkannada.in) :  ರಾಷ್ಟ್ರೀಯ ಹೆದ್ದಾರಿ 234 ರ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರವರೆಗಿನ 50.66 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯನ್ನು 2021 ರ ಮೇ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.jk-logo-justkannada-mysore

ಶನಿವಾರ ಸಂಜೆ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಡಾ.ಕೆ.ಸುಧಾಕರ್, ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಕಾಮಗಾರಿಗೆ ಚುರುಕು ನೀಡುವಂತೆ ಸೂಚಿಸಿದರು.

106.50 ಕೋಟಿ ರೂ. ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸೆಲ್ ಅಸೈನಿಯ ಎಂಬ ಕಂಪನಿಗೆ ಗುತ್ತಿಗೆ ನೀಡಿದ್ದು, 2015 ರ ಜುಲೈ ನಲ್ಲಿ ಕಾಮಗಾರಿ ಆರಂಭವಾಗಿ 2017 ರ ಜುಲೈ ನಲ್ಲಿ ಪೂರ್ಣಗೊಳ್ಳಬೇಕಿತ್ತು. ಈ ಕಂಪನಿಯು ಕಾಮಗಾರಿಯನ್ನು ಅಸಮರ್ಪಕವಾಗಿ ಮಾಡಿ 2018 ರ ಜುಲೈನಲ್ಲಿ ಕೈ ಬಿಟ್ಟಿತ್ತು.

2018 ರ ಜುಲೈ ನಿಂದ 2019 ರವರೆಗೆ ರಸ್ತೆ ಕಾಮಗಾರಿ ನಡೆದಿರಲಿಲ್ಲ. ಇದರಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರು ಸಂಚರಿಸಲು ಸಾಧ್ಯವಾಗದೆ ಪರದಾಡುತ್ತಿದ್ದರು. ಈ ಭಾಗದ ರೈತರು, ಕಾರ್ಮಿಕರು ನಿತ್ಯದ ಚಟುವಟಿಕೆಗಳಿಗೆ ಸಂಚಾರ ಮಾಡಬೇಕಿದ್ದು, ಅಪೂರ್ಣ ಕಾಮಗಾರಿಯಿಂದಾಗಿ ಸಂಚಾರ ಕಷ್ಟವಾಗಿತ್ತು.

ಸಚಿವ ಡಾ.ಕೆ.ಸುಧಾಕರ್ ಅವರು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, 2020 ರ ಫೆಬ್ರವರಿಯಲ್ಲಿ ಉಪ ಗುತ್ತಿಗೆದಾರರನ್ನು ನಿಯೋಜಿಸುವಂತೆ ಕ್ರಮ ಕೈಗೊಂಡಿದ್ದರು. ನಂತರ 2020 ರ ಜೂನ್ ನಲ್ಲಿ ಕಾಮಗಾರಿ ಪುನರಾರಂಭಗೊಂಡು ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದರು.

ಶನಿವಾರ ಪರಿಶೀಲನೆ ನಡೆಸಿದ ಸಚಿವ ಡಾ.ಕೆ.ಸುಧಾಕರ್, ಕಾಮಗಾರಿಗೆ ಚುರುಕು ನೀಡಿ ವೇಗವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಪರಿಶೀಲನೆ ವೇಳೆ ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಕಾಮಗಾರಿ ಪ್ರಗತಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು.

ಇದಲ್ಲದೆ, ಚಿಕ್ಕಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಬೇಕು. ಹಾಗೆಯೇ ಎರಡೂ ಬದಿ ಚರಂಡಿ ನಿರ್ಮಿಸಬೇಕು. ಬಾಕಿ ಉಳಿದ ಯಾವುದೇ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

Gauribidanur-Chikkaballapur-Highway-Complete-work-May-Minister-Dr.K.Sudhakar-NOTE ...!

ರಾಷ್ಟ್ರೀಯ ಹೆದ್ದಾರಿ ಮುಖ್ಯ ಎಂಜಿನಿಯರ್ ಗೋವಿಂದರಾಜು, ಕೇಂದ್ರ ಭೂ ಸಾರಿಗೆಯ ಮುಖ್ಯ ಎಂಜಿನಿಯರ್ ವಿಜಯಕುಮಾರ್, ಅಧೀಕ್ಷಕ ಎಂಜಿನಿಯರ್ ಸದಾನಂದ ಬಾಬು, ರಾಷ್ಟ್ರೀಯ ಹೆದ್ದಾರಿಯ ಅಧೀಕ್ಷಕ ಎಂಜಿನಿಯರ್ ಸತೀಶ್, ಕಾರ್ಯನಿರ್ವಾಹಕ ಎಂಜಿನಿಯರ್ ಹೇಮಲತಾ ಪರಿಶೀಲನೆ ವೇಳೆ ಹಾಜರಿದ್ದರು.

key words : Gauribidanur-Chikkaballapur-Highway-Complete-work-May-
Minister-Dr.K.Sudhakar-NOTE …!