ಮೈಸೂರು,ಆಗಸ್ಟ್,7,2026 (www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಮಂತ್ರಿಗಿರಿ ಕೈತಪ್ಪಿದ ಶಾಸಕರ ಅಸಮಾಧಾನ ಭುಗಿಲೆದ್ದಿದ್ದು ಕೊನೇ ಕ್ಷಣದಲ್ಲಿ ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಮಂಕಾಳ ವೈದ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಮಾಜಿ ಸಚಿವ ಮಂಕಾಳವೈದ್ಯ, ಯಾರಿಗೆ ಅನ್ಯಾಯ ಆಯಿತು, ಯಾವ ಭಾಗಕ್ಕೆ ಅನ್ಯಾಯ ಆಯಿತು. ಎಂಬುದನ್ನ ನಾವು ಹೇಳಿದರೂ, ಅದು ಬರಿ ಮಾತಲ್ಲಿ ಉಳಿಯುತ್ತದೆ. ಜನರೇ ಅದನ್ನ ತೀರ್ಮಾನ ಮಾಡುತ್ತಾರೆ ಬಿಡಿ ಎಂದು ಮಾರ್ಮಿಕವಾಗಿ ನುಡಿದರು.
ನನ್ನ ಅವಶ್ಯಕತೆ ಇರಲಿಲ್ಲವೇನೋ? ಅದಕ್ಕೆ ನನ್ನನ್ನು ಕಡೇ ಕ್ಷಣದಲ್ಲಿ ಕೈ ಬಿಟ್ಟಿದ್ದಾರೆ. ಇಂತಹದ್ದೇ ಉದ್ದೇಶಕ್ಕೆ ಕೈ ಬಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಮಂತ್ರಿಯಾಗಿ ಮೂರು ವರ್ಷ ಒಳ್ಳೆಯ ಕೆಲಸ ಮಾಡಿದ್ದೇನೆ. ಯಾವ ಕೆಟ್ಟ ಹೆಸರು ತೆಗೆದುಕೊಂಡಿಲ್ಲ. ನನಗೆ ಅಷ್ಟು ಸಾಕು. ಅಂದು 10 ಗಂಟೆಗೆ ಸಿಎಂ ಫೋನ್ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಬನ್ನಿ ಎಂದು ಹೇಳಿದರು. 11 ಗಂಟೆಗೆ ಮತ್ತೆ ಫೋನ್ ಮಾಡಿ ನಿಮ್ಮ ಹೆಸರು ಕೈ ಬಿಟ್ಟಿದ್ದೇವೆ, ಮಲ್ಲಣ್ಣಗೆ ಅವಕಾಶ ಕೊಟ್ಟಿದ್ದೇವೆ ಎಂದು ಹೇಳಿದರು. ಏನೇನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ಮಂಕಾಳ ವೈದ್ಯ ಅಸಮಾಧಾನ ವ್ಯಕ್ತಪಡಿಸಿದರು.
Key words: Cabinet expansion, last moment, Mysore, Former Minister, Mankalavaidya







