ಮೈಸೂರಿನಲ್ಲಿ ಪತ್ನಿಯಿಂದ ಪತಿ ಹತ್ಯೆ ಕೇಸ್: ಸಾಥ್ ಕೊಟ್ಟಿದ್ದ ನಾಲ್ವರು ಪೈಕಿ ಮೂವರ ಬಂಧನ

ಮೈಸೂರು,ಜುಲೈ,1,2026 (www.justkannada.in): ಮೈಸೂರಿನಲ್ಲಿ ಕಳೆದ ಮೂರ್ನಾಲ್ಕು ದಿನದ ಹಿಂದೆ ನಡೆದಿದ್ದ ಪತ್ನಿಯಿಂದ ಪತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸಾಥ್ ಕೊಟ್ಟಿದ್ದ ನಾಲ್ವರು ಪೈಕಿ ಮೂವರನ್ನು ಪೊಲೀಸರು  ಬಂಧಿಸಿದ್ದಾರೆ.

ಹರೀಶ್ ಹಾಗೂ ಇಬ್ಬರು ಕೂಲಿ ಕಾರ್ಮಿಕರನ್ನ ಬಂಧಿಸಲಾಗಿದ್ದು ಒಬ್ಬನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಪತ್ನಿ ಸುಶೀಲಾಳಿಂದ ಪತಿ ನಿತ್ಯಾನಂದ ಕೊಲೆಯಾಗಿದ್ದರು. ಮೈಸೂರಿನ ಕುವೆಂಪು ನಗರದಲ್ಲಿ ಕೊಲೆ ಪ್ರಕರಣ ನಡೆದಿತ್ತು. ಎರಡು‌ ದಿನಗಳ ಹಿಂದೆ‌ ಪತಿಯನ್ನು ಕೊಲೆ ಮಾಡಿ ಹೃದಯಾಘಾತ ಎಂದು ಪತ್ನಿ ಸುಶೀಲ ಬಿಂಬಿಸಲು ಹೊರಟಿದ್ದಳು. ಸಂಸಾರದಲ್ಲಿ ವಿರಸವೇ ಕೊಲೆಗೆ ಕಾರಣ ಎನ್ನಲಾಗಿತ್ತು.

ಈ ನಡುವೆ ಸುಶೀಲಾಗೆ ಹರೀಶ್ ಪರಿಚಯದವನಾಗಿದ್ದ. ಸುಶೀಲಾ ಹಾಗೂ ಹರೀಶ್ ಮೂವರ ಸಹಾಯ ಪಡೆದು ನಿತ್ಯಾನಂದರನ್ನು ಹತ್ಯೆ ಮಾಡಿದ್ದರು. ಒಟ್ಟು ಐವರು ನಿತ್ಯಾನಂದ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Key words: Mysore, Wife, husband murders, case. Three, arrested