Tuesday, August 18, 2026

BDA Apartments

Home Front Page ಕೇವಲ ಹಾಸಿಗೆ, ದಿಂಬು ರೆಡಿ ಮಾಡಿದ್ರೆ ಸಾಲದು: ಅಗತ್ಯ ವೈದ್ಯಕೀಯ ಸಿಬ್ಬಂದಿ, ಸಲಕರಣೆ ನೀಡಿ- ಮಾಜಿ...

ಕೇವಲ ಹಾಸಿಗೆ, ದಿಂಬು ರೆಡಿ ಮಾಡಿದ್ರೆ ಸಾಲದು: ಅಗತ್ಯ ವೈದ್ಯಕೀಯ ಸಿಬ್ಬಂದಿ, ಸಲಕರಣೆ ನೀಡಿ- ಮಾಜಿ ಶಾಸಕ ವಾಸು ಆಗ್ರಹ…

ಮೈಸೂರು,ಜು,20,2020(www.justkannada.in): ರಾಜ್ಯದಲ್ಲಿ ಇದೀಗ ಸೋಂಕು ಸಮುದಾಯಕ್ಕೆ ಹರಡುವ ಭೀತಿ ಉಂಟಾಗಿದೆ. ಹೀಗಾಗಿ ಸರ್ಕಾರ ಕೇವಲ ಹಾಸಿಗೆ, ದಿಂಬು ರೆಡಿ ಮಾಢಿದ್ರೆ ಸಾಲದು. ಮೊದಲು ಆಸ್ಪತ್ರೆಗಳಿಗೆ ಅಗತ್ಯವಾಗಿರುವ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ನೀಡಬೇಕು ಎಂದು ಮಾಜಿ ಶಾಸಕ ಪಿ.ವಾಸು ಸಲಹೆ ನೀಡಿದರು.jk-logo-justkannada-logo

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ವಾಸು, ಕೋವಿಡ್ ನಂತಹ ಸನ್ನಿವೇಶವನ್ನು ನಾನೆಂದೂ ನೋಡಿರಲಿಲ್ಲ. ಅಂದಿನ ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲೇ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಯಾವುದೇ ಮಾರಕ ಖಾಯಿಲೆ ಬಂದರೂ ಜನರಿಗೆ ಅನುಕೂಲವಾಗಲೆಂದು ಆಸ್ಪತ್ರೆಗಳನ್ನು ನಿರ್ಮಿಸಲಾಗಿತ್ತು. ಪರಿಣಾಮ ಎಂತಹದೇ ಭೀಕರ ಖಾಯಿಲೆ ಬಂದರೂ ಸಮರ್ಥವಾಗಿ ಎದುರಿಸಲಾಗುತ್ತಿತ್ತು. ಆದರೀಗ ತಂತ್ರಜ್ಞಾನ ಸಾಕಷ್ಟು ಮುಂದವರಿದಿದೆ, ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದರೂ ಕೊರೊನಾ ನಿಯಂತ್ರಣ ವಿಚಾರದಲ್ಲಿ ಯಾಕಿಷ್ಟು ಹಿನ್ನಡೆಯಾಗುತ್ತಿದೆ  ಬಹಳಷ್ಟು ಸಂದರ್ಭಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದಿರುವುದು ವಿಪರ್ಯಾಸ ಎಂದು  ಕೊರೊನಾ ನಿಯಂತ್ರಣ ಕುರಿತು ಕಳವಳ ವ್ಯಕ್ತಪಡಿಸಿದರು.

ಕೋವಿಡ್ ಬಂದಾಕ್ಷಣ ಸಾವು ಖಚಿತ ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ. ಈ ಬಗ್ಗೆ ವೈದ್ಯರು, ತಜ್ಣರು ಜನರಿಗೆ ಮನವರಿಕೆ ಕೊಡುವ ಅಗತ್ಯವಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಕೋವಿಡ್ ಆಸ್ಪತ್ರೆಗಳಿಗೆ ಬೆಡ್ ಗಳು, ಊಟ ನೀಡಿದ ಮಾತ್ರಕ್ಕೇ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಮೊದಲು ಆಸ್ಪತ್ರೆಗಳಿಗೆ ಅಗತ್ಯವಾಗಿರುವ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ನೀಡಬೇಕು. ಇದೀಗ ಸೋಂಕು ಸಮುದಾಯಕ್ಕೆ ಹರಡುವ ಭೀತಿ ಉಂಟಾಗಿದೆ. ಈ ಬಗ್ಗೆ ಸರ್ಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು  ಎಂದು ಮಾಜಿ ಶಾಸಕ ವಾಸು ಆಗ್ರಹಿಸಿದರು.

ಎನ.ಆರ್.ಕ್ಷೇತ್ರದ ಕೋವಿಡ್ ನಿಯಂತ್ರಣ ಉಸ್ತುವಾರಿಯನ್ನು ಸಂಸದ ಪ್ರತಾಪ್ ಸಿಂಹರಿಗೆ ವಹಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾಸು, ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಆರೋಗ್ಯವಾಗಿದ್ದಾರೆ. ಚೆನ್ನಾಗಿ ಓಡಾಡಿಕೊಂಡಿದ್ದಾರೆ. ಧ್ವನಿಯಲ್ಲಿ ಸ್ವಲ್ಪ ಬದಲಾವಣೆ ಹೊರತುಪಡಿಸಿದರೆ ದೈಹಿಕವಾಗಿ, ಮಾನಸಿಕವಾಗಿ ಸ್ಟ್ರಾಂಗ್ ಆಗಿದ್ದಾರೆ. ಆದರೂ ಯಾವ ಕಾರಣದಿಂದ ಎನ.ಆರ್.ಕ್ಷೇತ್ರದ ಕೋವಿಡ್ ನಿಯಂತ್ರಣ ಉಸ್ತುವಾರಿಯನ್ನು ಸಂಸದ ಪ್ರತಾಪ್ ಸಿಂಹರಿಗೆ ನೀಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

ಯುದ್ದಭೂಮಿಯಲ್ಲಿ ನಿಲ್ಲಿಸಿ ಮದ್ದು ಗುಂಡು ನೀಡದಿದ್ದರೆ ಹೇಗೆ..?

ಎಲ್ಲಾ ಸೌಲಭ್ಯಗಳಿದ್ದರೂ ಕೆಲವು ಅನಾನುಕೂಲ, ಅವ್ಯವಸ್ಥೆಗಳಾಗುತ್ತಿವೆ. ಕೊರೋನಾ ವಾರಿಯರ್ಸ್ ಗೆ ಸುಸಜ್ಜಿತವಾದ ಶಸ್ತ್ರಾಸ್ತ್ರ ವಿಲ್ಲ. ಯುದ್ದಭೂಮಿಯಲ್ಲಿ ನಿಲ್ಲಿಸಿ ಮದ್ದು ಗುಂಡು ನೀಡದಿದ್ದರೆ ಹೇಗೆ..? ಕೇವಲ ಹಾಸಿಗೆ, ದಿಂಬು ರೆಡಿ ಮಾಡಿದರೆ ಸಾಲದು. ಅಗತ್ಯವಿರುವಷ್ಟು ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಬೇಕು. ಸರಿಯಾದ ಪ್ರಮಾಣದಲ್ಲಿ ವೆಂಟಿಲೇಟರ್ ಗಳ ಪೂರೈಕೆ ಮಾಡಬೇಕು. ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಆರೋಗ್ಯ ರಕ್ಷಣಾ ಪರಿಕರಗಳನ್ನ ನೀಡಬೇಕು ಎಂದು ಮಾಜಿ ಶಾಸಕ ವಾಸು ಆಗ್ರಹಿಸಿದರು.

Key words: mysore- corona- congrol- former MLA-P.Vasu