Saturday, August 8, 2026

BDA Apartments

Home Front Page ಬತ್ತಿದ ಕಬ್ಬಿನ ಗದ್ದೆ ವೀಕ್ಷಣೆ: ಬೆಳೆ ಹಾನಿಯ ವಾಸ್ತವಿಕ ಮಾಹಿತಿ ಆಧರಿಸಿ ಕ್ರಮ- ಸಚಿವ ಎನ್....

ಬತ್ತಿದ ಕಬ್ಬಿನ ಗದ್ದೆ ವೀಕ್ಷಣೆ: ಬೆಳೆ ಹಾನಿಯ ವಾಸ್ತವಿಕ ಮಾಹಿತಿ ಆಧರಿಸಿ ಕ್ರಮ- ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ,ಆಗಸ್ಟ್,8,2026 (www.justkannada.in): ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಮದ್ದೂರು ತಾಲ್ಲೂಕಿನ ದೇವರಹಳ್ಳಿ ಹಾಗೂ ಕುದುರುಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಬತ್ತಿದ ಕಬ್ಬಿನ ಗದ್ದೆಯನ್ನು ವೀಕ್ಷಿಸಿದರು.

ಮುಂಗಾರು ಮಳೆಯ ಕೊರತೆ ಹಾಗೂ ನೀರಿನ ಅಭಾವದಿಂದ ಕಬ್ಬಿನ ಬೆಳೆ ಒಣಗಿ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಸಚಿವ ಚಲುವರಾಯಸ್ವಾಮಿ ಸ್ಥಳದಲ್ಲೇ ಪರಿಶೀಲಿಸಿದರು. ರೈತರಿಂದ ಬೆಳೆ ನಷ್ಟ ಹಾಗೂ ನೀರಿನ ಕೊರತೆಯ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ರೈತರು ಮಳೆ ಕೊರತೆ, ನೀರಿನ ಅಭಾವದಿಂದ ಕಬ್ಬಿನ ಬೆಳೆ ಒಣಗಿರುವುದರಿಂದ ಉಂಟಾಗಿರುವ ನಷ್ಟ ಹಾಗೂ ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ರೈತರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಬೆಳೆಗಳ ವಾಸ್ತವಿಕ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳನ್ನು ಗುರುತಿಸಿ ಸರ್ಕಾರದ ನಿರ್ದೇಶನದಂತೆ ಜಂಟಿ ಸಮೀಕ್ಷೆ ನಡೆಸಿ, ಗ್ರೌಂಡ್ ಟ್ರೂಥಿಂಗ್ (Ground Truthing) ಪ್ರಕ್ರಿಯೆಯ ಮೂಲಕ ವಾಸ್ತವಿಕ ಬೆಳೆ ಹಾನಿಯ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಹಿತದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಗಳಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೆಳೆ ಹಾನಿಯ ವಾಸ್ತವಿಕ ಮಾಹಿತಿ ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ, ಮದ್ದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಎಮ್. ಉದಯ, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಆರ್. ನಂದಿನಿ ಸೇರಿದಂತೆ ಕೃಷಿ, ಕಂದಾಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ರೈತರು ಉಪಸ್ಥಿತರಿದ್ದರು.

Key words: crop damage, Mandya, Minister,  Chaluvarayaswamy