ಸಂಘರ್ಷವಾದರೂ ಸರಿ ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಅಪವಿತ್ರ ಮಾಡುವವರನ್ನ ತಡೆಯೋಣ- ಸಂಸದ ಪ್ರತಾಪ್ ಸಿಂಹ ಕರೆ.

ಮೈಸೂರು,ಅಕ್ಟೋಬರ್,10,2023(www.justkannada.in):  ಮಹಿಷಾ ದಸರಾ ವಿರೋಧಿಸಿ ಬಿಜೆಪಿಯು ಅಕ್ಟೋಬರ್ 13 ರಂದು ಚಾಮುಂಡಿಬೆಟ್ಟ ಚಲೋ ಜಾಥವನ್ನ ಹಮ್ಮಿಕೊಂಡಿದ್ದು  ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ವಾರ್ಡ್ ವಾರು ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ.

ಇಂದು ಮೈಸೂರಿನ ತಿಲಕ್ ನಗರದ ವಾರ್ಡ್ ನಂಬರ್ 25 ರಲ್ಲಿ ರಾಮಮಂದಿರದ ಮುಂಭಾಗ ಸಭೆ ನಡೆಸಿದ ಸಂಸದ ಪ್ರತಾಪ್ ಸಿಂಹ, ಸಂಘರ್ಷವಾದರೂ ಸರಿ ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಅಪವಿತ್ರ ಮಾಡುವವರನ್ನ ತಡೆಯೋಣ ಎಂದು ಜನರಿಗೆ ಕರೆ ಕೊಟ್ಟಿದ್ದಾರೆ.

ಅ.13 ರಂದು ನಡೆಯಲಿರುವ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಮಹಿಷಾ ದಸರಾ ಎಂಬ ಅನಾಚಾರವನ್ನು ಎಲ್ಲರೂ ಸೇರಿ ತಡೆಯಬೇಕು. ಯಾರೋ ಮೂರು ಮತ್ತೊಂದು ಜನ ಕಿಡಿಗೇಡಿಗಳು ಮಾಡಬೇಕು ಎಂದು ಹೊರಟಿರುವ ಈ ಮಹಿಷಾ ದಸರವನ್ನು ತಡೆಯಲೇಬೇಕು. ಅ.13 ರಂದು ಬೆಳಗ್ಗೆ 8 ಗಂಟೆಗೆ ತಾವರೆಕಟ್ಟೆ ಬಳಿ ಎಲ್ಲರೂ ಬನ್ನಿ ಎಲ್ಲರೂ ಬೆಟ್ಟಕ್ಕೆ ಹೋಗೋಣ. ನಗರದ ಹಲವು ಭಾಗಗಳಿಂದ ಸಾವಿರಾರು ಜನ ನಮ್ಮ ಪರವಾಗಿ ಬರುತ್ತಾರೆ. ಮಹಿಷಾ ಪ್ರತಿಮೆಯ ಬಳಿ ಎಲ್ಲರೂ ಕೂರೋಣ. ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ನಡೆಸುವ ಅನಾಚಾರವನ್ನ ಮಟ್ಟಹಾಕೋಣ. ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಅಪವಿತ್ರ ಮಾಡುವವರನ್ನ ವಿರುದ್ಧ ಸಂಘರ್ಷವಾದರೂ ಸರಿ ತಡೆಯೋಣ ಎಂದು ಜನರಿಗೆ  ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.

ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಸಭೆಯಲ್ಲಿ ಉಪಸ್ಥಿತರಿದ್ದರು.

Key words: mahisha dasara- stop –  MP Pratap Simha-  meeting