ಪ್ರತಾಪ್ ಸಿಂಹ ಡೋಂಗಿ ರಾಜಕಾರಣಿ: ಮಹಿಷಾ ಪೂಜೆ ಮಾಡಿದ್ರೆ ನಿಮ್ಮ ಸಮಸ್ಯೆ ಏನು..?- ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ.

ಮೈಸೂರು,ಅಕ್ಟೋಬರ್,10,2023(www.justkannada.in):  ಮಹಿಷಾ ದಸರಾ ಆಚರಣೆ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಹಮ್ಮಿ ಕೊಂಡಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ಡೋಂಗಿ ರಾಜಕಾರಣಿ. ಕಿಡಿ ಹತ್ತಿಸುವ ಕೆಲಸ ಮಾಡುವ ರಾಜಕಾರಣಿ. ಲೋಕಸಭಾ ಚುನಾವಣೆ ಬರುತ್ತಿದೆ. ಅವರು ಕ್ಷೇತ್ರಕ್ಕೆ ಮಾಡಿರುವ ಕೆಲಸ ಶೂನ್ಯ. ಈಗ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೈಸೂರಿಗೆ 400 ಆರ್.ಎಸ್ .ಎಸ್ ಕಾರ್ಯಕರ್ತರು ವಿವಿಧ ರಾಜ್ಯದಿಂದ ಬಂದಿದ್ದಾರೆ. ಬೇರೆ ಕಡೆಯಿಂದ ಮೈಸೂರಿಗೆ ಕರೆದುಕೊಂಡು ಬಂದಿದ್ದು ಯಾಕೆ.? ಮಹಿಷಾ ಪೂಜೆ ಮಾಡಬೇಡ ಅಂತ ಹೇಳಲು ನಿನ್ಯಾರು.? ಹಿಂದುಳಿದ ದಲಿತ ಸಮುದಾಯದವರು ಮಹಿಷಾ ಪೂಜೆ ಮಾಡಿದರೆ ನಿಮ್ಮ ಸಮಸ್ಯೆ ಏನು ಎಂದು ಪ್ರಶ್ನಿಸಿದರು.

ಚಾಮುಂಡೇಶ್ವರಿ ವಿರುದ್ಧ ಏನಾದ್ರು‌ ಮಾಡಿದ್ರೆ ಹೇಳಿ  ಆಗ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಮ ಸರ್ಕಾರ ಇದ್ದಾಗ ಮಹಿಷಾ ಪ್ರತಿಮೆ ತೆಗೆಸಬೇಕಾಗಿತ್ತು. ಮಹಿಷಾ ಟೆರರಿಸ್ಟಾ, ಮಹಿಷಾ ನಿಮ್ಮ ಫ್ಯಾಮಿಲಿಗೆ, ಬಿಜೆಪಿಗೆ ಏನು ಸಮಸ್ಯೆ ಮಾಡಿದ್ರು.? ಮಹಿಷಾ ಒಬ್ಬ ರಾಜನಾಗಿದ್ದ, ಈಗ ಯಾಕೆ ಗೊಂದಲ ಸೃಷ್ಟಿ ಮಾಡ್ತಿದ್ದೀರಿ. ದಸರಾಕ್ಕೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ಲಾನ್ ಮಾಡಿದ್ದಾರೆ ಎಂದು ಎಂ.ಲಕ್ಷ್ಮಣ್ ಗುಡುಗಿದರು.

ನಿಮ್ಮ ಮಕ್ಕಳನ್ನು ಸಾಯಿಸುತ್ತಾರೆ. ನಿಮ್ಮ ಮಕ್ಕಳಿಗೆ ಚುಚ್ಚಿಸಿ ಇನ್ನೊಬ್ಬರ ಮೇಲೆ ಹಾಕುವ ಪ್ಲಾನ್ ಮಾಡ್ತಾರೆ. ಇದರಿಂದ ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗಬೇಡಿ ಎಂದು ಮನವಿ ಮಾಡಿದ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ದಲಿತ ವಿರೋಧಿ. 2015 ರಿಂದ ಮಹಿಷಾ ದಸರಾ ಶಾಂತಿಯುತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಹೇಳಿಕೆ‌ ಕೊಟ್ಟರು ಯಾಕೆ ಪೊಲೀಸರು ಪ್ರತಾಪ್ ಸಿಂಹ ಅರೆಸ್ಟ್ ಮಾಡ್ತಿಲ್ಲ. ಇಬ್ಬರ ಕೊಲೆ ಮಾಡಿಸುವ ಪ್ಲಾನ್ ಮಾಡಿದ್ದಾರೆ. ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ. ಕೊಲೆ ಮಾಡಿಸಿ ಗಲಭೆ ಎಬ್ಬಿಸಿ ದಸರಾ ನಿಲ್ಲಿಸುವ ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದರು.

ಶಾಸಕ ಜಿಟಿ ದೇವೇಗೌಡರ ಆತ್ಮಹತ್ಯೆ ಭಾಗ್ಯ ಹೇಳಿಕೆ: ವಾರ್ನ್ ಮಾಡಿದ ಎಂ.ಲಕ್ಷ್ಮಣ್

ಹಾಗೆಯೇ ಶಾಸಕ ಜಿ.ಟಿ ದೇವೇಗೌಡರ ಆತ್ಮಹತ್ಯೆ ಭಾಗ್ಯ ಹೇಳಿಕೆಗೆ ಟಾಂಗ್ ಕೊಟ್ಟ ಎಂ ಲಕ್ಷ್ಮಣ್, ಅಂಕಿ ಅಂಶಗಳ ಕೊರತೆ ಇದ್ರೆ ನಾನು ಸಹಾಯ ಮಾಡ್ತೀನಿ. ಯಾವ್ ಆಧಾರದಲ್ಲಿ ನೀವು ಈ ರೀತಿ ಆರೋಪ ಮಾಡ್ತೀರಿ? ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ನೇತೃತ್ವದ ಆಡಳಿತದಲ್ಲಿ 4457 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2013-2018ರ ಸಿದ್ದರಾಮಯ್ಯ ಅವಧಿಯಲ್ಲಿ 3500 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರ ನಂತರ  ಸಿದ್ದರಾಮಯ್ಯನವರ ಅವಧಿಯ ನಾಲ್ಕು ತಿಂಗಳಲ್ಲಿ 96ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹೀಗಾಗಿ ಸುಖಾಸುಮ್ಮನೆ ದಾಖಲೆ ರಹಿತ ಆರೋಪ ಮಾಡಬೇಡಿ  ಎಂದು ಜಿ.ಟಿ ದೇವೇಗೌಡರಿಗೆ ಎಂ. ಲಕ್ಷ್ಮಣ್ ವಾರ್ನ್ ಮಾಡಿದರು.

Key words: Pratap Simha -Dongi Politician-Congress spokesperson -M. Laxman