ಲೋಕಸಭಾ ಚುನಾವಣೆ: ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ.

ಮೈಸೂರು,ಫೆಬ್ರವರಿ,27,2024(www.justkannada.in): ಭಾರಿ ಕುತೂಹಲ ಮೂಡಿಸಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಹಾಲಿ ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೆಲವು ಮಾಧ್ಯಮಗಳಲ್ಲಿ  ಊಹಾಪೋಹಗಳ ಸುದ್ದಿ ಬರುತ್ತಿದೆ. ಅದೆಲ್ಲಾ ಸತ್ಯಕ್ಕೆ ದೂರವಾದದ್ದು. 2014 ರಿಂದ ಇಲ್ಲಿವರೆಗೆ ನಾನು  ಒಬ್ಬ ಸಂಸದನಾಗಿ ಏನು ಕೆಲಸ ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇನೆ. ಹಾಗಾಗಿ ಈ ಬಾರಿಯೂ ನನಗೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದರು.

ನನ್ನ ಬೆಂಗಾವಲಿಗೆ ಪಕ್ಷದ ಕಾರ್ಯಕರ್ತರು ಇದ್ದಾರೆ. ಕೇಂದ್ರದ ನಾಯಕರಿಗೆ ನನ್ನ ರಿಪೋರ್ಟ್ ಕಾರ್ಡ್ ಸಲ್ಲಿಸಿದ್ದೇನೆ. 2018 ರಲ್ಲಿ ಮೈಸೂರಿಗೆ ಪ್ರಧಾನಿ ಮೋದಿ ಅವರು ಬಂದಾಗ ನನ್ನ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚಿ ಬೆನ್ನು ತಟ್ಟಿ ಶ್ಲಾಘಿಸಿದ್ದಾರೆ. ಜೊತೆಗೆ ನಮ್ಮ‌ ಅಮಿಶಾ ಜೀ ಅವರು ಲೋಕಪ್ರಿಯ ಸಂಸದ ಎಂದು ಕರೆದಿದ್ದಾರೆ. ನಾನು ಏನು ಮಾಡಿದ್ದೇನೆ ಎಂದು ಪಕ್ಷದ ವರಿಷ್ಠರಿಗೂ ಗೊತ್ತಿದೆ. ಹಾಗಾಗಿ ಅವರ ಪ್ರೀತಿ ವಿಶ್ವಾಸ ಮತ್ತೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

Key words: Lok Sabha-Elections-MP Pratap Simha- expressed -confidence – ticket