ಪುರುಷರಿಗೆ ಪ್ರತ್ಯೇಕ ವೈದ್ಯಕೀಯ ಸೇವೆ: ಸದ್ಯದಲ್ಲೇ ಪ್ರಾಯೋಗಿಕ ಚಾಲನೆ.

ಬೆಂಗಳೂರು,ಜುಲೈ.9,2022(www.justkannada.in): ಹಲವು ಬಗೆಯ ಸಂಕೀರ್ಣ ಅನಾರೋಗ್ಯಗಳಿಂದ ನರಳುತ್ತಿರುವ ಪುರುಷರಿಗೆ ಪ್ರತ್ಯೇಕವಾಗಿ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಸೌಲಭ್ಯವನ್ನು ಸದ್ಯದಲ್ಲೇ ಮಲ್ಲೇಶ್ವರಂ ಕ್ಷೇತ್ರದ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ದೇಶದಲ್ಲೇ ಅನನ್ಯವಾದ ಪುರುಷರಿಗೆ ಪ್ರತ್ಯೇಕವಾದ ವೈದ್ಯಕೀಯ ಪರೀಕ್ಷಾ ಸೇವಾ ಸೌಲಭ್ಯವನ್ನು ಆರಂಭಿಸುವ ಕುರಿತು ಅಂಕುರ ಹೆಲ್ತ್ ಕೇರ್ ನ ಡಾ.ವಾಸನ್ ಅವರ ಜತೆ ಸಚಿವ ಅಶ್ವಥ್ ನಾರಾಯಣ್ ಮಾತುಕತೆ ನಡೆಸಿದರು.

ಈ ಬಗ್ಗೆ ಮಾತನಾಡಿದ  ಅವರು, `ಪುರುಷರೂ ಹಲವು ಅನಾರೋಗ್ಯ ಸಮಸ್ಯೆಗನ್ನು ಎದುರಿಸುತ್ತಿರುತ್ತಾರೆ. ಆದರೆ ಇವರಲ್ಲಿ ಹೆಚ್ಚಿನವರು ಆಸ್ಪತ್ರೆಗೇ ಬರುವುದಿಲ್ಲ. ಹೀಗಾಗಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಡಿಯಲ್ಲಿ ಈ ವಿನೂತನ ಯೋಜನೆಯನ್ನು ಎರಡೂ ಕಡೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಇದಕ್ಕೆ ಸಿಕ್ಕುವ ಸ್ಪಂದನವನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಇದನ್ನು ಎಲ್ಲೆಡೆಗೂ ವಿಸ್ತರಿಸಲಾಗುವುದು. ಈ ಯೋಜನೆಯಡಿ ಅಂಕುರ ಹೆಲ್ತ್ ಕೇರ್ ನ ಡಾ.ವಾಸನ್ ಅವರು ವೈದ್ಯಕೀಯ ಪರೀಕ್ಷೆಗಳ ಸೌಲಭ್ಯ ಕಲ್ಪಿಸುತ್ತಾರೆ’ ಎಂದಿದ್ದಾರೆ.

ಮಧುಮೇಹ, ಕ್ಯಾನ್ಸರ್, ನರಕ್ಕೆ ಸಂಬಂಧಿಸಿದ ಕಾಯಿಲೆಗಳು, ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಪುರುಷರನ್ನು ಹೆಚ್ಚಾಗಿ ಕಾಡುತ್ತಿವೆ. ಇದರ ಜತೆಗೆ ಒತ್ತಡದ ಜೀವನ, ಧೂಮಪಾನ, ಮದ್ಯಪಾನ, ಅವೈಜ್ಞಾನಿಕ ಆಹಾರ ಸೇವನೆಯ ಕ್ರಮ ಇತ್ಯಾದಿಗಳೂ ಪುರುಷರ ಅನಾರೋಗ್ಯಕ್ಕೆ ಕಾರಣಗಳಾಗಿವೆ. ಈಗ ಕೈಗೆತ್ತಿಕೊಂಡಿರುವ ಯೋಜನೆಯಲ್ಲಿ ಜೀವನಶೈಲಿ ಮತ್ತು ಆಹಾರ ಸೇವನೆಗೆ ಸಂಬಂಧಿಸಿದ ದೋಷಗಳನ್ನು ಪರಿಹರಿಸಲು ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಕುಟುಂಬಗಳಿಗೆ ಪುರುಷರೇ ಆಧಾರಸ್ತಂಭದಂತೆ ಇರುತ್ತಾರೆ. ಆದ್ದರಿಂದ ಇಂತಹ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇದರಿಂದಾಗಿ ಸಂಭವನೀಯ ಅನಾರೋಗ್ಯವು ಸೃಷ್ಟಿಸುವ ಆರ್ಥಿಕ ಹೊರೆ ಮತ್ತಿತರ ಸಮಸ್ಯೆಗಳಿಂದ ಪಾರಾಗಬಹುದು ಎಂದು ಸಚಿವ ಅಶ್ವಥ್ ನಾರಾಯಣ್ ವಿವರಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Key words: Separate-medical-service-men-minister-ashwath narayan