ಮೈಸೂರಿನಲ್ಲಿ ಗುಂಡಿನ ದಾಳಿ ಪ್ರಕರಣ ಭೇಧಿಸಲು ಸಹಕರಿಸಿದ್ರೆ 5 ಲಕ್ಷ ರೂ. ನಗದು ಬಹುಮಾನ: ಪೊಲೀಸ್ ಇಲಾಖೆ ಘೋಷಣೆ.

ಮೈಸೂರು,ಆಗಸ್ಟ್,24,2021(www.justkannada.in): ಚಿನ್ನದ ಅಂಗಡಿ ದರೋಡೆ ವೇಳೆ ಗುಂಡಿನ ದಾಳಿ ನಡೆಸಿ ಅಮಾಯಕ ಯುವಕನ ಸಾವಿಗೆ ಕಾರಣರಾದ ಆರೋಪಿಗಳನ್ನ ಪತ್ತೆ ಹಚ್ಚಲು ಸಹಕರಿಸಿದರೇ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಮೈಸೂರು ಪೊಲೀಸ್ ಇಲಾಖೆ ಘೋಷಣೆ ಮಾಡಿದೆ.

ಮೈಸೂರು ಪೊಲೀಸ್ ಆಯಕ್ತರ ಕಚೇರಿಯಿಂದ ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ದಿನಾಂಕ: 23-8-2021ರಂದು ಮೈಸೂರು ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿ ಶಾಪ್‌ ಗೆ ನಾಲ್ಕು ಜನರು ನುಗ್ಗಿ ಮಾರಕಾಸ್ತ್ರದಿಂದ ಬೆದರಿಸಿ ದರೋಡೆ ನಡೆಸಿದ್ದು. ಈ ಸಂದರ್ಭದಲ್ಲಿ ಅಮಾಯಕನೊಬ್ಬ ಗುಂಡಿಗೆ ಬಲಿಯಾಗಿರುತ್ತಾನೆ. ಸದರಿ ಪ್ರಕರಣವನ್ನು ನಗರ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು. ಪ್ರಕರಣದ ಪತ್ತೆಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ.

ಸುಮಾರು 25 ಪೊಲೀಸ್ ಅಧಿಕಾರಿಗಳು ಮತ್ತು 80 ಜನ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ವಿವಿಧ ತಂಡಗಳು ಈ ಪ್ರಕರಣವನ್ನು ಭೇಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಯಾವುದೇ ಸಾರ್ವಜನಿಕರು ಈ ಪ್ರಕರಣದ ಪತ್ತೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿ ಈ ಪ್ರಕರಣ ಭೇಧಿಸುವಲ್ಲಿ ಸಹಕರಿಸಿದಲ್ಲಿ ಅಂತಹವರಿಗೆ ಪೊಲೀಸ್ ಇಲಾಖೆಯಿಂದ 5 ಲಕ್ಷ ರೂ. ನಗದು ಬಹುಮಾನವನ್ನು ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾಗೆಯೇ ಸಾರ್ವಜನಿಕರು ತಮ್ಮ ಮಾಹಿತಿಯನ್ನು ಯಾವ ಸಮಯದಲ್ಲಾದರೂ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ನೀಡಿ ಸಹಕರಿಸಬಹುದು. ಮೊಬೈಲ್ ದೂರವಾಣಿ ಸಂಖ್ಯೆ: 9480802200

Key words: Rs 5 Lakhs – Cash prize- help -firing case –Mysore-Police Department -announcement.