ಪ್ರೀತಿ ನಿರಾಕರಿಸಿದ ಗಗನಸಖಿಗೆ ನಡುರಸ್ತೆಯಲ್ಲೇ ಕೆನ್ನೆ, ಕಿವಿ ಕೊಯ್ದು ಪರಾರಿಯಾಗಿದ್ದ ರೌಡಿಶೀಟರ್ ಅರೆಸ್ಟ್

ಬೆಂಗಳೂರು:ಮೇ-17:(www.justkannada.in) ಪ್ರೀತಿಸಲು ನಿರಾಕರಿಸಿದ್ದ ಗಗನಸಖಿಯೊಬ್ಬರಿಗೆ ನಡುರಸ್ತೆಯಲ್ಲಿ ಅಡ್ಡಗಟ್ಟಿ ಆಕೆಯ ಕೆನ್ನೆ, ಕಿವಿಯನ್ನು ಚಾಕುವಿನಿಂದ ಕುಯ್ದು ಪರಾರಿಯಾಗಿದ್ದ ರೌಡಿಶೀಟರ್ ನನ್ನು ಬಂಧಿಸುವಲ್ಲಿ ಕೊಡಿಗೇನಹಳ್ಳಿ ಮತ್ತು ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾಲಹಳ್ಳಿ ಠಾಣೆ ರೌಡಿಶೀಟರ್‌ ಜಾಕಿ ಅಲಿಯಾಸ್‌ ಅಜಯ್‌ ಬಂಧಿತ ಆರೋಪಿ. ಪ್ರಕರಣ ಸಂಬಂಧ ಆರೋಪಿ ವಿರುದ್ಧ 302, 392 ಮತ್ತು 397 c ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಲಹಳ್ಳಿ ಆಂಜಿನಪ್ಪ ರಸ್ತೆಯಲ್ಲಿ ನೆಲೆಸಿರುವ ಇಂಡಿಗೋ ಏರ್​ಲೈನ್ಸ್​ನ 27 ವರ್ಷದ ಗಗನಸಖಿ ಹಲ್ಲೆಗೆ ಒಳಗಾದ ಯುವತಿ. ಮೇ 12 ರಂದು ಯುವತಿ ಕೆಲಸ ಮುಗಿಸಿಕೊಂಡು ಸಂಜೆ 4.30ರಲ್ಲಿ ಕ್ಯಾಬ್​ನಲ್ಲಿ ಹೆಬ್ಬಾಳ ಫ್ಲೈ ಓವರ್ ಬಳಿಗೆ ಬಂದು ಸಿಗ್ನಲ್ ನಲ್ಲಿ ನಿಂತಿದ್ದಾಗ ಡೋರ್ ತೆಗೆದು ಕಾರಿ ನೊಳಗೆ ನುಗ್ಗಿದ್ದ . ಆಗ ಪ್ರತಿರೋಧ ವ್ಯಕ್ತಪಡಿಸಿದ ಗಗನಸಖಿಗೆ ಚಾಕುವಿನಿಂದ ಕೆನ್ನೆ ಮತ್ತು ಕಿವಿಗೆ ಹಲ್ಲೆ ನಡೆಸಿದ್ದ. ರಕ್ಷಣೆಗೆ ಮುಂದಾದಾಗ ಕ್ಯಾಬ್ ಚಾಲಕನ ಭುಜಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದ. ಘಟನೆ ಬಳಿಕ ರೌಡಿಶೀಟರ್ ತಲೆಮರೆಸಿಕೊಂಡಿದ್ದ.

ಹಲ್ಲೆಳಗಾದ ಗಗನಸಖಿ ದೂರಿನ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್​ಕುಮಾರ್ ಸೂಚನೆ ಮೇರೆಗೆ ಆರೋಪಿ ಪತ್ತೆಗೆ ಪೊಲೀಸರು ಮೂರು ತಂಡ ರಚಿಸಿದ್ದರು. ಅಂತಿಮವಾಗಿ ಆರೋಪಿ ರೌಡಿಶೀಟರ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರೀತಿ ನಿರಾಕರಿಸಿದ ಗಗನಸಖಿಗೆ ನಡುರಸ್ತೆಯಲ್ಲೇ ಕೆನ್ನೆ, ಕಿವಿ ಕೊಯ್ದು ಪರಾರಿಯಾಗಿದ್ದ ರೌಡಿಶೀಟರ್ ಅರೆಸ್ಟ್
Rowdy sheeter arrested who stabbed air hostess