“ಸಂಶೋಧನಾ ಚಟುವಟಿಕೆಗಳ ಚುರುಕುಗೊಳಿಸಲು ಕಾರ್ಯಪ್ರವೃತ್ತರಾಗಿದ್ದೇವೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಫೆಬ್ರವರಿ,22,2021(www.justkannada.in) : ವಿಶ್ವವಿದ್ಯಾನಿಲಯದ ಎಲ್ಲ ವಿಭಾಗಗಳಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಚುರುಕುಗೊಳಿಸಲು ಹಾಗೂ ಸೌಲಭ್ಯಗಳನ್ನು ಒದಗಿಸಿಕೊಡುವುದರ ಕುರಿತು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲ ಸಂಶೋಧಕರು ಗಂಭೀರವಾಗಿ ತಮ್ಮ ಸಂಶೋಧನೆಯಲ್ಲಿ ತೊಡಗಿಕೊಳ್ಳಲಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

Research-activities-accelerate-Active-Chancellor-Prof.G.Hemant Kumar

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಪ್ರಚಾರೋಪನ್ಯಾಸ” ಹಾಗೂ ಡಾ.ಆರ್.ಲೋಕೇಶ್ ಅವರ ಸಂಶೋಧನಾ ಕೃತಿ “ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವಿ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ. ನನಗೆ ಕೆಲಸ ಮಾಡುವ ಸಿಬ್ಬಂದಿ ಬೇಕು. ವ್ಯರ್ಥವಾಗಿ ಕಾಲಹರಣ ಮಾಡುವುದನ್ನು ಬಿಟ್ಟು ವಿವಿ ಎಲ್ಲ ಉದ್ಯೋಗಿಗಳು ಸಮರ್ಥವಾಗಿ ತಮ್ಮನ್ನು ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮವಾಗಿ ಕೆಲಸ ಮಾಡುವುದರಿಂದ ಆತ್ಮತೃಪ್ತಿ ದೊರೆಯುತ್ತದೆ. ವಿವಿಯು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಮೈಸೂರು ವಿವಿ ಪ್ರಚಾರೋಪನ್ಯಾಸಕ್ಕೆ ವಿಶ್ವಮಟ್ಟದಲ್ಲಿ ಮೈಸೂರು ವಿವಿ ಎಕ್ಸಪೀರಿಮೆಂಟ್

ಪ್ರಚಾರೋಪನ್ಯಾಸ ಕಾರ್ಯಕ್ರಮವು ಅಪರೂಪ ಕಾರ್ಯಕ್ರಮವಾಗಿದ್ದು, ವಿಶ್ವಮಟ್ಟದಲ್ಲಿ ಮೈಸೂರು ವಿವಿ ಎಕ್ಸಪೀರಿಮೆಂಟ್ ಎಂದು ಪ್ರಸಿದ್ಧಿ ಪಡೆದಿದೆ. ಪ್ರೊ.ಎನ್.ಎಂ.ತಳವಾರ ವರ್ಷದ ಅವಧಿಗೆ 25 ಪ್ರಚಾರೋಪನ್ಯಾಸಗಳಿಗೆ ಮನವಿ ಸಲ್ಲಿಸಿದ್ದರು. ಅವರ ಕ್ರಿಯಾಶೀಲತೆಯ ಮೇಲೆ ಭರವಸೆಯಿಟ್ಟು 25 ಉಪನ್ಯಾಸ ಕಾರ್ಯಕ್ರಮ ನಡೆಸಲು ಆಡಳಿತಾತ್ಮಕ ಮತ್ತು ಹಣಕಾಸಿನ ಅನುಮೋದನೆ ನೀಡಿದೆವು. ಈ ಯೋಜನೆ ಪ್ರಾಯಶಃ ಮುಕ್ಕಾಲುಪಾಲು ಯಶಸ್ವಿಯಾಗಿ ಪೂರೈಸಿದಿದ್ದಾರೆ. ಇನ್ನು ಐದಾರು ಕಾರ್ಯಕ್ರಮ ಬಾಕಿ ಉಳಿದಿರಬಹುದು ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ನಿಯತಕಾಲಿಕೆಗಳ ಶತಮಾನೋತ್ಸವ, ಸುವರ್ಣ ಮಹೋತ್ಸವಕ್ಕೆ ತಾತ್ವಿಕ ಒಪ್ಪಿಗೆ

ಪ್ರಬುದ್ಧ ಕರ್ನಾಟಕ ನಿಯತಕಾಲಿಕೆಯ ಶತಮಾನೋತ್ಸವ, ಪ್ರಬುದ್ಧ ಕರ್ನಾಟಕ ಮತ್ತು ಮಾನವಿಕ ಕರ್ನಾಟಕ ನಿಯತಕಾಲಿಕೆಗಳ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅವರು ಉತ್ಸುಕರಾಗಿದ್ದಾರೆ. ಅವರು ಸಲ್ಲಿಸಿದ ಕ್ರಿಯಾಯೋಜನೆಗೆ ಈಗಾಗಲೇ, ತಾತ್ವಿಕ ಒಪ್ಪಿಗೆ ನೀಡಿದ್ದೇನೆ ಎಂದು ಹೇಳಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಾಧನೆಗಳಿಂದ ವಿವಿಗೆ ಅಪಾರ ಕೀರ್ತಿ ಬಂದಿದೆ. ಇಲ್ಲಿಯ ವಿಶ್ವಕೋಶ ಎಪಿಗ್ರಾಫಿಯಾ ಕರ್ನಾಟಕ, ಭಾಷಾಂತರ ಮತ್ತು ಗ್ರಂಥಸಂಪಾದನೆ ಯೋಜನೆಗಳು ಯಶಸ್ವಿಯಾಗಿ ನಡೆಯಲಿ. ಕನ್ನಡ ಅಧ್ಯಯನ ಸಂಸ್ಥೆಯ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ವಿವಿ ಸಂಪೂರ್ಣ ಪ್ರೋತ್ಸಾಹ ನೀಡುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬಹಳಷ್ಟು ಸಂಶೋಧಕರು ಪಿಎಚ್.ಡಿ.ಪದವಿ ಬಂದ ಮೇಲೆ ವಿಶ್ರಾಂತಿಗೆ ಜಾರುತ್ತಾರೆ

ಬಹಳಷ್ಟು ಸಂಶೋಧಕರು ಪಿಎಚ್.ಡಿ.ಪದವಿ ಬಂದ ಮೇಲೆ ವಿಶ್ರಾಂತಿಗೆ ಜಾರುತ್ತಾರೆ. ಸಂಶೋಧನ ಪ್ರಬಂಧವನ್ನು ಪ್ರಕಟಿಸುವ ಗೊಡವೆಗೆ ಹೋಗುವುದಿಲ್ಲ. ಆದರೆ, ಲೋಕೇಶ್ ಅವರು ಹಾಗೇ ವಿಶ್ರಾಂತಿಗೆ ಜಾರದೇ, ತಮ್ಮ ಸಂಶೋಧನ ಮಹಾಪ್ರಬಂಧವನ್ನು ಪ್ರಕಟಣೆ ಮಾಡುವ ಪ್ರಯತ್ನ ಮಾಡಿರುವುದು ಉತ್ತಮ ಕಾರ್ಯ ಎಂದರು.

ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಆರ್‌.ಶಿವಪ್ಪ ಮಾತನಾಡಿ, ಮೈಸೂರು ವಿವಿ ದಾಖಲಿಸುವ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಬಹಳ ಹಿಂದೆಯೇ ನಿಯತಕಾಲಿಕೆಗಳ ಮೂಲಕ ವಿದ್ವತ್ ಜನರ ಅಭಿಪ್ರಾಯ, ಜ್ಞಾನವನ್ನು ದಾಖಲಿಸುವ, ಪ್ರಕಟಿಸುವ ಕಾರ್ಯವನ್ನು ಮಾಡಲಾಗಿದೆ ಎಂದರು.

ವಿವಿಯಲ್ಲಿ ಬೋಧನಾಂಗ, ಸಂಶೋಧನಾಂಗ, ಪ್ರಸಾರಾಂಗ ಬಹಳ ಪ್ರಮುಖ

ಯಾವುದೇ ವಿವಿಯಲ್ಲಿ ಬೋಧನಾಂಗ, ಸಂಶೋಧನಾಂಗ, ಪ್ರಸಾರಾಂಗ ಬಹಳ ಪ್ರಮುಖ. ಕಾಲಕಾಲಕ್ಕೆ ಬರವಣಿಗೆ ಹಾಗೂ ಸಂಶೋಧನಾ ಕೌಶಲ್ಯವು ಬದಲಾವಣೆಯಾಗುತ್ತಿರುತ್ತದೆ. ಇದನ್ನು ಅರಿತು ಹೊಸದನ್ನು ತಿಳಿಸುವ ಕಾರ್ಯವನ್ನು ಸಂಶೋಧಕರು ಮಾಡಬೇಕು ಎಂದು ಸಲಹೆ ನೀಡಿದರು.

ಎರಡು ವಿಶೇಷ ಉಪನ್ಯಾಸ

ಕಾರ್ಯಕ್ರಮದಲ್ಲಿ ಹರಿದಾಸರ ಮುಂಡಿಗೆಗಳು ವಿಷಯ ಕುರಿತು ಬಳ್ಳಾರಿಯ ತೆಕ್ಕಲಕೋಟೆ ಸ.ಪ್ರ.ದ‌.ಕಾಲೇಜು ಸಹ ಪ್ರಾಧ್ಯಾಪಕ ಡಾ.ಮಾನಕರಿ ಶ್ರೀನಿವಾಸಾಚಾರ್ಯ ಅವರು ಹಾಗೂ ಸಾವಯವ ಕೃಷಿ ಮತ್ತು ಬಹುಬೆಳೆ ಪದ್ಧತಿ ವಿಷಯ ಕುರಿತು ಸಂಸ್ಕೃತಿ‌‌ ಚಿಂತಕ ಡಾ.ಚಿನ್ನಸ್ವಾಮಿ ವಡ್ಡಗೆರೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕು.ಕ.ಅ.ಸಂಸ್ಥೆ ನಿರ್ದೇಶಕ ಪ್ರೊ‌.ಎಂ.ಬಿ.ಮಂಜುನಾಥ್, ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ‌.ತಳವಾರ ಇತರರು ಉಪಸ್ಥಿತರಿದ್ದರು.

key words : Research-activities-accelerate-Active-Chancellor-Prof.G.Hemant Kumar