ಪುರಸಭೆ ಮುಖ್ಯಾಧಿಕಾರಿ ವಿರುದ್ಧ ತೀವ್ರಗೊಂಡ ಪತ್ರಕರ್ತರ ಆಕ್ರೋಶ

ಮೈಸೂರು, ಅಕ್ಟೋಬರ್ 16, 2020 (www.justkannada.in): ಕೆ.ಆರ್.ನಗರ ಪುರಸಭೆಯ ಮುಖ್ಯಾಧಿಕಾರಿ ವಿರುದ್ಧ ಕೆ.ಆರ್.ನಗರ ಹಾಗೂ ಹುಣಸೂರು ತಾಲೂಕು ಪತ್ರಕರ್ತರು ಆಕ್ರೋಶ ವ್ಯಕತಪಡಿಸಿದ್ದಾರೆ.
ಇತ್ತೀಚಿಗೆ ಕೆ‌.ಆರ್.ನಗರ ತಾಲೂಕು ಪತ್ರಕರ್ತರ ಸಂಘದ ಸದಸ್ಯರಾದ ಎಂ.ಎಸ್.ರವಿಕುಮಾರ್ ಹಾಗೂ ವಿ.ಸಿ.ಶಿವರಾಮ್ ಅವರ ಕರ್ತವ್ಯ ನಿರ್ವಹಣೆಗೆ ಪುರಸಭೆಯ ಮುಖ್ಯಾಧಿಕಾರಿ ಅಡ್ಡಿಪಡಿಸಿದ್ದರು. ಈ ಸಂಬಂಧ ಕೆ.ಆರ್.ನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದಿಂದ ದೂರು ದಾಖಲಿಸಲಾಗಿತ್ತು. ಜತೆಗೆ ಪುರಸಭೆ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಲಾಗಿತ್ತು.
ಹಿನ್ನೆಲೆ: ಸೋಮವಾರ ಪುರಸಭೆಗೆ ಸುದ್ದಿಗಾಗಿ ತೆರಳಿದ್ದ ವಿಜಯವಾಣಿ ಪತ್ರಿಕೆ ವರದಿಗಾರ ಎಂ.ಎಸ್.ರವಿಕುಮಾರ್ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ ವಿ.ಸಿ.ಶಿವರಾಮ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪುರಸಭೆಯಿಂದ ಆಚೆ ಹೋಗಿ. ಇಲ್ಲದಿದ್ದರೆ ಕತ್ತು ಹಿಡಿದು ಆಚೆಗೆ ನೂಕುವುದಾಗಿ ಬೆದರಿಕೆ ಪುರಸಭೆ ಮುಖ್ಯಾಧಿಕಾರಿ ನಿಂದಿಸಿದ್ದರು. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಭೇರ್ಯ ಮಹೇಶ್ ಒತ್ತಾಯಿಸಿದ್ದಾರೆ.
ಅಸಮಾಧಾನ: ತಾಲೂಕು ಪತ್ರಕರ್ತರರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದರೂ ಜಿಲ್ಲಾ ಮಟ್ಟದ ಪತ್ರಕರ್ತರು ಇದಕ್ಕೆ ದನಿಗೂಡಿಸದಿರುವುದಕ್ಕೆ ತಾಲೂಕು ಸಂಘದ ವಿನಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.