ಹೆಚ್.ಡಿಕೆ ಅವರೇ ಮಂಗಳೂರಿನಲ್ಲಿ ಬೆಂಕಿ ಹಚ್ಚುವಂತಹ ಕೆಲಸ ಮಾಡಬೇಡಿ- ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ…

ಬೆಂಗಳೂರು,ಜ,10,2020(www.justkannada.in):  ಮಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ಮಾಡಿರುವ ಕುರಿತು ಕಿಡಿಕಾರಿರುವ ಸಂಸದೆ ಶೋಭಾ ಕರಂದ್ಲಾಜೆ, ಹೆಚ್.ಡಿಕೆ ಅವರೇ ಮಂಗಳೂರಿನಲ್ಲಿ ಬೆಂಕಿ ಹಚ್ಚುವಂತಹ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಹೆಚ್.ಡಿ ಕುಮಾರಸ್ವಾಮಿ ಸಿಡಿ ಪ್ರಿಯರು. ಆರೇಳು ವರ್ಷಗಳಲ್ಲಿ ಹಲವು ಸಿಡಿಗಳನ್ನ ಬಿಡುಗಡೆ ಮಾಡಿದ್ದಾರೆ. ಹೆಚ್.ಡಿಕೆಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹೆಚ್.ಡಿಕೆ ಯಾವ ಆಧಾರದಲ್ಲಿ ತನಿಖೆ ಮಾಡಿದ್ದಾರೆ ಗೊತ್ತಿಲ್ಲ. ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮಂಗಳೂರಿಗೆ ಏನು ಸಂಬಂಧ. ಜಿಲ್ಲೆಯಲ್ಲಿ ಸದ್ಯಕ್ಕೆ ಶಾಂತಿಯುತವಾದ ಪರಿಸ್ಥಿತಿ ಇದೆ. ಆದರೆ ಕುಮಾರಸ್ವಾಮಿಯವರು ಗಲಭೆಗೆ ಸಂಬಂಧಿಸಿದ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ  ಎಂದು ಶೋಭಾ ಕರಂದ್ಲಾಜೆ ಹರಿಹಾಯ್ದರು.

Key words: mangalore-golibar-case-former cm-HD kumaraswamy – cd release- MP Shobha Karandlaje