ಜಿ.ಎನ್.ಮೋಹನ್ ಸ್ಪೆಷಲ್: ನರಗುಂದದ ಆ ನಿಟ್ಟುಸಿರಿನೊಳಗೆ..

ನರಗುಂದದ
ಆ ನಿಟ್ಟುಸಿರಿನೊಳಗೆ..
—–
ನಾನು ಅಮ್ಮನ ಮುಂದೆ ಕುಳಿತಿದ್ದೆ.
ಅಮ್ಮ ಉರಿಯುತ್ತಿದ್ದ ಒಲೆಯ ಮೇಲೆ ಚಪಾತಿ ಸುಡುತ್ತಲೇ ಇದ್ದರು.
ಆ ಬೆಂಕಿಯ ಕುಣಿತದಲ್ಲಿ ಅಮ್ಮನ ಮುಖವೂ ಉರಿವ ಉಂಡೆಯಂತೆಯೇ ಕಾಣುತ್ತಿತ್ತು.
ಆ ಉರಿ ಅಲ್ಲಿಂದ ಹಾರಿ ನನ್ನನ್ನೂ ಸೇರಿಸಿಕೊಂಡು ಇಡೀ ಕೋಣೆಯನ್ನೇ ಆವರಿಸಿತ್ತು. ನನ್ನ ಮನೆಯೊಳಗೆ ಒಂದು ಸಿಟ್ಟಿನ, ರೋಷದ ಕುಣಿತ ನಡೆಯುತ್ತಿದೆಯೇನೋ ಎನ್ನುವಂತೆ.
ಅಮ್ಮ ಏನೊಂದೂ ಮಾತನಾಡದೆ ಚಪಾತಿ ಮಾಡುತ್ತಲೇ ಇದ್ದರು.
ಒಂದು.. ಎರಡು.. ಮೂರು.. ಹತ್ತು.. ಇಪ್ಪತ್ತು.. ಮೂವತ್ತು.. ಉಹುಂ, ನೂರು.. ಒಂದರ ಮೇಲೆ ಒಂದರಂತೆ ಚಪಾತಿಯ ಬೆಟ್ಟವೇ ಸೃಷ್ಟಿಯಾಗುತ್ತಿತ್ತು.
ಅಮ್ಮ ತನ್ನ ಅಸಹಾಯಕತೆಯನ್ನು, ತನ್ನೊಳಗಿದ್ದ ಕುದಿತವನ್ನು, ತನ್ನ ಅವಮಾನವನ್ನು, ತನ್ನ ರೋಷವನ್ನೆಲ್ಲಾ ಹೀಗೆ ಚಪಾತಿ ಮಾಡುವ ಮೂಲಕ ತೀರಿಸಿಕೊಳ್ಳುತ್ತಿದ್ದಂತೆ ಕಾಣುತ್ತಿತ್ತು .
ಅದು ನಮ್ಮೊಬ್ಬರ ಮನೆಯ ಕಥೆ ಮಾತ್ರವಾಗಿರಲಿಲ್ಲ. ಬೆಂಗಳೂರಿನ ಸಹಸ್ರಾರು ಮನೆಗಳಲ್ಲಿ ಆ ದಿನ ಎಷ್ಟೋ ಅಮ್ಮಂದಿರು ಹೀಗೆ ಚಪಾತಿ ಮಾಡುತ್ತಲೇ ಇದ್ದರು.
ಅಡುಗೆಮನೆಯಲ್ಲಿ ಚಪಾತಿಯ ರಾಶಿಯನ್ನೇ ಸೃಷ್ಟಿಸುವ ಮೂಲಕ ತಮ್ಮೊಳಗಿನ ನೋವಿಗೆ ದನಿ ನೀಡುತ್ತಿದ್ದರು.
ಅದು ಬೆಂಗಳೂರಿನ ಕಥೆ ಮಾತ್ರವಾಗಿರಲಿಲ್ಲ. ಬಯಲು ಸೀಮೆ, ಮಲೆನಾಡು, ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಎಂಬ ಯಾವ ಬೇಧಭಾವವೂ ಇಲ್ಲದಂತೆ ಸಹಸ್ರಾರು ಮನೆಗಳಲ್ಲಿ ಒಂದು ಸಿಟ್ಟು, ಅಡಗಿಸಿಟ್ಟ ಸಿಟ್ಟು ತಾನೇ ತಾನಾಗಿ ಚಪಾತಿಯಾಗಿ, ರೊಟ್ಟಿಯಾಗಿ, ಚಟ್ನಿಯಾಗಿ, ಎಣ್ಣೆಗಾಯಿಯಾಗಿ, ಚಟ್ನಿ ಪುಡಿಯಾಗಿ ನಾನಾ ಆಕಾರ ತಳೆಯುತ್ತಾ ಹೋಯಿತು
ಇದು ನರಗುಂದ ರೈತ ಬಂಡಾಯದ ಯಶಸ್ಸು.
ನರಗುಂದದಲ್ಲಿ ಮುಷ್ಠಿ ಹಿಡಿದೆತ್ತಿದ ರೈತ ಕೇವಲ ನರಗುಂದದ ಪ್ರತೀಕವಾಗಿ ಉಳಿಯಲಿಲ್ಲ. ಆತನ ಸಿಟ್ಟು, ಆತನ ಅವಮಾನ ಆತನೊಬ್ಬನದ್ದೇ ಅಗಿರಲಿಲ್ಲ.
ಅದು ನೋವಿನಿಂದ ಮುಖ ಮುಚ್ಚಿಕೊಂಡಿದ್ದ, ಅಸಹಾಯಕತೆಯಿಂದ ನರಳುತ್ತಿದ್ದ, ಬೆಂಕಿಯ ಕಿಚ್ಚನ್ನು ಅಡಗಿಸಿಟ್ಟುಕೊಂಡಿದ್ದ ಎಲ್ಲರ ಪ್ರತೀಕವಾಗಿ ಹೋಯ್ತು.
ಆ ಕಾರಣಕ್ಕಾಗಿಯೇ ನರಗುಂದದಲ್ಲಿ ಪೋಲೀಸರ ಗೋಲೀಬಾರಿಗೆ ಇನ್ನಿಲ್ಲವಾಗಿ ಹೋದ ಈರಪ್ಪ ಕಡ್ಲಿಕೊಪ್ಪ, ನವಲಗುಂದದಲ್ಲಿ ಇಲ್ಲವಾದ ಬಸಪ್ಪ ಶಿವಪ್ಪ ಲಕ್ಕುಂಡಿ ಅಲ್ಲಿನವರಾಗಿ ಮಾತ್ರ ಉಳಿಯಲಿಲ್ಲ.
ಎಲ್ಲರ ನೋವು, ಎಲ್ಲರ ಅವಮಾನದ ಪ್ರತೀಕವಾಗಿ ನರಗುಂದ ಎದ್ದು ನಿಂತುಬಿಟ್ಟಿತು.
ಇದೇ ಜುಲೈನಲ್ಲಿ ಮೂರು ದಶಕಗಳ ಹಿಂದೆ ನರಗುಂದವೆಂಬ ಪುಟ್ಟ ಊರಿನಿಂದ ಹೊರಟ ದನಿ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸುತ್ತಾ ನಾಡ ತುಂಬಾ ಹರಿಯಿತು.
ಕೇವಲ ಇನ್ನೂರು ಜನರ ಒಂದು ಮೆರವಣಿಗೆ ಸಹಸ್ರಾರು ಜನರ ಆಂದೋಲನವಾಯಿತು.
ಇದು ಸಾಲದೆಂಬಂತೆ ೨೦ ದಿನ ನಡೆದೇ ನ್ಯಾಯ ಕೇಳುತ್ತೇನೆ ಎಂದು ಹೊರಟ ರೈತನನ್ನು ಹುರಿದುಂಬಿಸಲು ಆ ರೈತರು ಚಲಿಸಿದ ಊರುಗಳಲ್ಲಿ ಜನ ದಂಡುಗಟ್ಟಿ ನಿಂತರು.
ಅವರ ಜೊತೆ ನಡೆದು ನೀವು ಒಬ್ಬಂಟಿಯಲ್ಲ ಎಂದು ಮನದಟ್ಟು ಮಾಡಿಕೊಟ್ಟರು. ರೈತ ಬಂಡಾಯಕ್ಕೆ ಇನ್ನಿಲ್ಲದ ಶಕ್ತಿ ಬಂತು
‘ಸರಿ ಸರಿ ಸರಿ ಹಿಂದಕ್ಕ, ನಾವು ಸಾಗಿ ಬರುತೇವ ಮುಂದಕ್ಕ’ ಎಂಬ ಘೋಷವಾಕ್ಯ ಮೊಳಗಿಯೇಬಿಟ್ಟಿತು
ಚಂದ್ರಶೇಖರ ಕಂಬಾರರ ಆ ಬೆಳಗಾವಿ, ಆ ಶಿವಾಪುರ, ಆ ಘೋಡಗೇರಿ ಎಲ್ಲವನ್ನೂ ಒಮ್ಮೆ ಕಣ್ಣಿಂದ ಕಂಡೇ ಬಿಡಬೇಕು ಎಂದು ಹೊರಟಿದ್ದ ನಮ್ಮ ಕಿವಿಯಲ್ಲಿ ಕಂಬಾರರ ಹಾಡುಗಳದ್ದೇ ದರ್ಬಾರು.
‘ಹೇಳತೇನ ಕೇಳ ಗೆಳೆಯ ನಿನ ಮುಂದ ಕತಿಯೊಂದ ನನ ಮುಂದ ಕೂಂಡ್ರ ಹಿಂಗ ತೆರೆದ ಮನಾ’ ಹಾಡು ಮೊರೆಯುತ್ತಿರುವಾಗಲೇ ಈ ಭಾಗದಲ್ಲಿ ಸಾಕಷ್ಟು ಓಡಾಡಿದ್ದ ಎಂಜಿನಿಯರ್ ರಾಜಶೇಖರ್ ‘ಅಲ್ಲಿ ನೋಡ್ರಿ ಘಟಪ್ರಭಾ’ ಎಂದರು.
ನಾನು, ಶೇಕರಪ್ಪ, ರಾಮಚಂದ್ರಪ್ಪ, ನಿಂಗಣ್ಣನವರ್ ಎಲ್ಲರೂ ಓಡುತ್ತಿದ್ದ ಗಾಡಿಯಿಂದ ಕತ್ತು ಹೊರಚಾಚಿ ನೋಡಿದೆವು.
ಸುರಿದ ಮಳೆಯನ್ನೆಲ್ಲಾ ಒಡಲಲ್ಲಿಟ್ಟುಕೊಂಡು ಘಟಪ್ರಭಾ ಉದ್ದೋ ಉದ್ದಕ್ಕೆ ಓಡುತ್ತಿತ್ತು ‘ಇದರ ಅವಳಿ ಸಹೋದರಿಯೇ ಮಲಪ್ರಭಾ’ ಎಂದರು.
ಆ ಕ್ಷಣಕ್ಕೆ ನನ್ನೊಳಗೆ ಒಂದು ನೋವಿನ ಎಳೆ ಹಾಯ್ದು ಹೋಯ್ತು.
ಈ ಮಲಪ್ರಭೆಯ ತೆಕ್ಕೆಯಲ್ಲಿರುವುದೇ ನರಗುಂದ, ನವಲಗುಂದ, ಸವದತ್ತಿ..
ಇನ್ನೂ ಮೀಸೆ ಮೂಡುತ್ತಿದ್ದ ದಿನಗಳಲ್ಲಿ ನಾನು ನರಗುಂದದ ಆ ಕಪ್ಪು ಮಣ್ಣಿನ ಮೇಲೆ ಎಷ್ಟು ಬಾರಿ ಹೆಜ್ಜೆ ಹಾಕಿದ್ದೇನೋ. ಕೃಷಿ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದ ಅಣ್ಣನ ಕಾರಣದಿಂದಾಗಿ ಆ ನರಗುಂದ ನನಗೆ ಮತ್ತೆ ಮತ್ತೆ ಧಕ್ಕಿತ್ತು.
ನರಗುಂದದ ಆ ಬಾಬಾ ಸಾಹೇಬ ಬ್ರಿಟಿಷರ ವಿರುದ್ಧ ಸೆಟೆದೆದ್ದು, ಅವರ ರುಂಡ ಚಂಡಾಡಿ, ಊರ ಅಗಸೆಯ ಬಾಗಿಲಿಗೆ ನೇತಾಡಿಸಿದ್ದ ಎಂದು ಕೇಳಿ ಸಾಕಷ್ಟು ಸಲ ಆ ಅಗಸೆಯ ಬಾಗಿಲಿಗೆ ಹೋಗಿ ಕತ್ತೆತ್ತಿ ನೋಡಿದ್ದೆ.
ಬಾಬಾಸಾಹೇಬನ ಧೀರತನದ ಬಗೆಗಿನ ಲಾವಣಿಗಳು ಊರೂರಿನಲ್ಲಿ ಸ್ವಾಭಿಮಾನದ ಬೀಜ ಬಿತ್ತುತ್ತಾ ಸಾಗಿದ್ದನ್ನು ಕಂಡಿದ್ದೆ.
ನರಗುಂದ ನನಗೆ ಕೇವಲ ಮತ್ತೊಂದು ಊರು ಆಗಿರಲಿಲ್ಲ. ಅದು ಒಡಲಾಳದ ಕಿಚ್ಚಿನ ಪಾಠ ಕಲಿಸಿದ ಊರಾಗಿತ್ತು.
ಅದೇ ಊರಿನಲ್ಲಿದ್ದಾಗಲೇ ನನಗೆ ‘ನೆಲಮನೆ ಪ್ರಕಾಶನ’ದ ಪುಸ್ತಕಗಳ ಪರಿಚಯವಾಗಿದ್ದು. ಆ ಕಾರಣಕ್ಕಾಗಿಯೇ ಲಂಕೇಶ್, ದೇವನೂರು, ಬೆಸಗರಹಳ್ಳಿ ರಾಮಣ್ಣ ಪರಿಚಯವಾಗಿದ್ದರು.
ಅದೇ ಊರಿನಲ್ಲಿಯೇ ನನಗೆ ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ‘ಹೋರಾಟದ ಹಾಡು’ ಕೈಗೆ ಸಿಕ್ಕಿತ್ತು. ಅದೇ ಊರಿನಲ್ಲಿಯೇ ಕೃಷ್ಣ ಆಲನಹಳ್ಳಿ ತನ್ನ ಕಥೆಗಳ ಮೂಲಕ ನನ್ನೊಳಗೆ ತಾರುಣ್ಯದ ಬಿಸಿ ಹೆಚ್ಚಿಸಿದ್ದ. ಹಾಗಾಗಿ ಇದು ನನಗೆ ಒಂದು ನೋಟವನ್ನು ತಂದುಕೊಟ್ಟ ಊರೂ ಆಗಿತ್ತು.
ಒಂದು ಬಂಡಾಯದ ಕುಡಿ ಈ ಊರೊಳಗೆ ಶಾಲ್ಮಲೆಯಂತೆ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇತ್ತು.
ಇಡೀ ನರಗುಂದ ಬಂಡಾಯವನ್ನು ಮೊದಲಿನಿಂದ ಕೊನೆಯವರೆಗೆ ನೋಡಿದ ಬಿ ಎಸ್ ಸೊಪ್ಪಿನ ಅವರ ‘ಮಲಪ್ರಭೆಯ ಸಿಡಿದೆದ್ದ ರೈತ’ ಕೃತಿ ಹಿಡಿದು ಕುಳಿತಿದ್ದೇನೆ.
ಒಂದು ನೋವಿನ ಓಣಿಯಲ್ಲಿ ಓಡಾಡಿದ ಅನುಭವ.
ಮಲಪ್ರಭೆಗೆ ನವಲಗುಂದದ ನವಿಲುತೀರ್ಥ ಎಂಬಲ್ಲಿ ಅಣೆಕಟ್ಟೆ ಕಟ್ಟಲು ಹೊರಟದ್ದೇ ಅದು ಬರೀ ನೀರನ್ನಲ್ಲ, ಕಣ್ಣೀರನ್ನೂ ಹೊತ್ತು ತರುತ್ತದೆ ಎಂದು ಯಾರಿಗೆ ಗೊತ್ತಿತ್ತು?
ಕಪ್ಪು ಮಣ್ಣು, ಬಿರಿದ ಭೂಮಿಯಲ್ಲಿ ನಡೆಯುವ ಕಾಲುವೆ ಕಾಮಗಾರಿ ಎಷ್ಟು ಪಕ್ಕಾ ಆಗಿರಬೇಕೆಂದರೆ ಒಂದು ಹನಿ ನೀರೂ ಸೋರದಂತಿರಬೇಕು ಆದರೆ ಎಲ್ಲೆಡೆಯಂತೆ ಅಲ್ಲಿ ಆದದ್ದೂ ‘ಸರ್ಕಾರಿ’ ಕಾಮಗಾರಿ. ಒಂದೇ ಕಾಮಗಾರಿಯಲ್ಲಿ ಕಾರು ಖರೀದಿಸಿಬಿಡಬೇಕೆಂಬ ಹಂಬಲದವರು ಅಲ್ಲಿಯೂ ಇದ್ದರು.
ನೀರಾವರಿಗೆ ಹೇಗೆ ಹೊಂದಿಕೊಳ್ಳಬೇಕು ಎಂದು ಗೊತ್ತಾಗದೆ ಚಡಪಡಿಸುತ್ತಿದ್ದ, ಕೃಷಿಯ ಅರ್ಥಶಾಸ್ತ್ರ ಬದಲಾಗುತ್ತಿರುವುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದ ರೈತನ ಮುಂದೆ ಎದ್ದು ನಿಂತದ್ದು ಸರ್ಕಾರದ ನೋಟೀಸುಗಳು..
ಹರಿಸದ ನೀರಿಗೂ ತೆರಿಗೆ ಪಾವತಿಸುವಂತೆ ಹೇಳಿದಾಗ ರೈತ ಸಿಡಿದೆದ್ದು ನಿಂತ.
‘ನಿನ್ನೆ ದಿನ, ನನ್ನ ಜನ, ಬೆಟ್ಟದಂತೆ ಬಂದರು’ ಎನ್ನುವ ಸಾಲುಗಳ ಅರ್ಥ ಏನು ಎಂದು ಗೊತ್ತಾಗಬೇಕಿದ್ದರೆ ಆ ನರಗುಂದ ಬಂಡಾಯವನ್ನು ನೋಡಬೇಕಿತ್ತು.
‘ಕಪ್ಪು ಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು’ ಎನ್ನುವಂತೆಯೇ ಇದ್ದ ನರಗುಂದ ನವಲಗುಂದ ಸವದತ್ತಿಯ ರೈತರು ಬೆಸೆದುಕೊಳ್ಳುತ್ತಾ ಸಾಗಿದರು
ಬಿ ಎಸ್ ಸೊಪ್ಪಿನ, ಎಸ್ ಎಚ್ ಕಪ್ಪಣ್ಣನವರ್, ವಿ ಎನ್ ಹಳಕಟ್ಟಿ, ಬಿ ಆರ್ ಯಾವಗಲ್, ಶಿವದೇವ ಗೌಡ ಪಾಟೀಲ್, ಬಿ ಬಿ ಗಾಣಿಗೇರ, ಎಸ್ ಎನ್ ಈರೇಶನವರ.. ಹೀಗೆ ಹಲವಾರು ಮುಖಂಡರು ಹಳ್ಳಿ ಹಳ್ಳಿ ಸುತ್ತಿದರು. ರೈತರನ್ನು ಸಂಘಟಿಸಿದರು
ಆಕ್ರೋಶ ಹೊತ್ತ ರೈತರು ೨೧ನೆಯ ದಿನ ರಾಜಧಾನಿಯನ್ನು ಪ್ರವೇಶಿಸಿದಾಗ ಬೆಂಗಳೂರಿನಲ್ಲಿ ಹೋರಾಟದ ಹಾಡುಗಳದ್ದೇ ಪಲ್ಲವಿ.
ರೈತರು ಹೋದೆಡೆಯೆಲ್ಲಾ ಜನರಿಂದ ಹೂವಿನ ಸುರಿಮಳೆ.
‘ಇವರೆಲ್ಲಾ ಬಾಡಿಗೆ ರೈತರು’ ಎಂದು ಮುಖ್ಯಮಂತ್ರಿ ಗುಂಡೂರಾವ್ ಜರಿದರು.
ಅಷ್ಟೇ ಸಾಕಿತ್ತು. ರೈತರು ಪೋಲೀಸರ ಕೋಟೆಯನ್ನೂ ದಾಟಿಕೊಂಡು ವಿಧಾನೌಧದ ಮೆಟ್ಟಿಲ ಮೇಲೆ ತಾವು ಹೊತ್ತು ತಂದಿದ್ದ ಹುತಾತ್ಮ ಜ್ಯೋತಿಯನ್ನು ಸ್ಥಾಪಿಸಿಯೇ ಬಿಟ್ಟರು.
ನರಗುಂದದಿಂದ ಹೊರಟಾಗ ರೈತರು ‘ಈಗ ಮಾಡೀವಿ ಆರಂಭ, ವಿಧಾನಸೌಧದಿ ರಣಗಂಭ’ ಎಂದು ಸಾರಿದ್ದರು.
ರೈತರ ಸಿಟ್ಟೇ ಒಟ್ಟಾಗಿ ಅಲ್ಲಿಯವರೆಗೂ ಕರ್ನಾಟಕದಲ್ಲಿ ಭದ್ರವಾಗಿದ್ದ ಕಾಂಗ್ರೆಸ್ ಸರ್ಕಾರ ಅದುರಿಹೋಯಿತು
ಈ ರೈತ ಬಂಡಾಯ ಎಷ್ಟೊಂದು ಜನರನ್ನು ಬದಲಿಸಿತು. ರೈತರನ್ನು, ಕಾರ್ಮಿಕರನ್ನು, ದೇಶವನ್ನು, ನನ್ನನ್ನೂ ಬದಲಿಸಿತು.
ಅವರೊಬ್ಬರಿದ್ದರು ನಿತ್ಯಾನಂದಸ್ವಾಮಿ.
ಸವದತ್ತಿಯಲ್ಲಿ ಆಶ್ರಮ ನಡೆಸುತ್ತಿದ್ದ ಕಾವಿಧಾರಿ. ಕಾವಿ ಧರಿಸಿಯೇ ಹೋರಾಟದ ಜೊತೆ ಹೆಜ್ಜೆ ಹಾಕಿದ್ದರು. ರೈತ ಬಂಡಾಯ ಅವರನ್ನೂ ಬದಲಿಸಿತು. ಕಾವಿ ಕಳಚಿ, ತಮ್ಮ ನೀಳ್ಗೂದಲನ್ನು ಕತ್ತರಿಸಿ ಹೋರಾಟದ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡರು
‘ರಂಗಶಂಕರ’ದಲ್ಲಿ ಅದೇ ನನ್ನ ಪ್ರೀತಿಯ ಕಂಬಾರರ ಉತ್ಸವವಿತ್ತು. ಬಿಡುವಿನ ನಡುವೆ ಊಟ ಮಾಡಲು ಎದುರಿಗಿದ್ದ ಹೋಟೆಲ್ ನಲ್ಲಿ ಕುಳಿತಿದ್ದೆ.
ಪಕ್ಕ ತಿರುಗಿ ನೋಡುತ್ತೇನೆ. ಅದೇ ಹಳಕಟ್ಟಿ. ರೈತ ಬಂಡಾಯಕ್ಕೆ ಕಿಡಿ ಹೊತ್ತಿಸಿದವರಲ್ಲೊಬ್ಬರಾದ ವಿ ಎನ್ ಹಳಕಟ್ಟಿ.
ನನಗೆ ಅರಿವಿಲ್ಲದೇ ನಾನು ಎದ್ದು ನಿಂತಿದ್ದೆ. ಮತ್ತೆ ಕೂಡಲು ಸಾಧ್ಯವಾಗಲಿಲ್ಲ.
ನರಗುಂದದ ಆ ಬಂಡಾಯದ ಬಿಸಿಯುಸಿರು ಇನ್ನೂ ನನ್ನೊಳಗೆ ಆಡುತ್ತಿತ್ತು.