ಅಭ್ಯರ್ಥಿಗಳ ಅಪರಾಧ ವಿವರ ಬಹಿರಂಗಪಡಿಸುವಂತೆ ಸುಪ್ರೀಂ ಆದೇಶದ ಬಗ್ಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಫೆ,14,2020(www.justkannada.in): ಚುನಾವಣೆಗಳಲ್ಲಿ  ಕ್ರಿಮಿನಲ್ ಗಳನ್ನ ರಾಜಕೀಯ ಪಕ್ಷಗಳು ಸ್ಪರ್ಧೆಗೆ ನಿಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಕಠಿಣ ಆದೇಶವನ್ನ  ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಸ್ವಾಗತಿಸಿದ್ದಾರೆ.

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಕ್ರಿಮಿನಲ್‌ ಅಪರಾಧಗಳ ಕುರಿತ ಹಿನ್ನೆಲೆಯನ್ನು ಆಯಾ ರಾಜಕೀಯ ಪಕ್ಷಗಳು  ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್  ನಿನ್ನೆ ಎಲ್ಲ ರಾಜಕೀಯ ಪಕ್ಷಗಳಿಗೂ ಆದೇಶ ನೀಡಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದೊಂದಿಗೆ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿದೆ.

ಈ ಕುರಿತು ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಸುಪ್ರೀ ಕೋರ್ಟ್ ಆದೇಶವನ್ನ ನಾನು ಸ್ವಾಗತಿಸುತ್ತೇನೆ. ಇದು ಒಳ್ಳೆಯ ನಿರ್ಧಾರ. ದೇಶದ ಹಿತದೃಷ್ಟಿಯಿಂದ ಕೋರ್ಟ್ ಈ ತೀರ್ಮಾನವನ್ನ‌ ತೆಗೆದುಕೊಂಡಿದೆ. ಇದನ್ನ ಎಲ್ಲಾ ರಾಜಕೀಯ ಪಕ್ಷಗಳು ಪಾಲಿಸಬೇಕು ಹಾಗೂ ತಿಳಿದುಕೊಳ್ಳಬೇಕು. ರಾಜಕೀಯ ಹಣದಿಂದ ನಡೆಯಬಾರದು.ರಾಜಕೀಯ ಹಣದಿಂದ ನಡೆದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಮುಂದಿನ ದಿನಗಳಲ್ಲಿ ಹಣದಿಂದ ಚುನಾವಣಾ ನಡೆಯುವುದು ನಿಲ್ಲಬೇಕು. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ನಿಲುವನ್ನ ತಗೆದುಕೊಳ್ಳಬೇಕು. ಆಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥ‌ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪೌರತ್ವದ ಬಗ್ಗೆ ಶಾಲೆಯಲ್ಲಿ ನಾಟಕ ಪ್ರದರ್ಶನ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ,  ಜನರಿಗೆ ಭಯಗೊಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಪೌರತ್ವದ ಬಗ್ಗೆ ಧ್ವನಿ ಎತ್ತಿದ್ರೆ ಅವರನ್ನ ಹೀಗೆ ಹೆದರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಆ ಕುಟುಂಬದ ಜೊತೆ ಕಾಂಗ್ರೆಸ್ ಇರಲಿದೆ. ಅವರಿಗೆ ಯಾರು ಹೋಗಿ ಮಾತನಾಡಿಸಲು ಸಹ ಭಯಪಡುತ್ತಿದ್ದಾರೆ. 15ಜಿಲ್ಲಾ ಕೇಂದ್ರದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಜೈಲಿಗೆ ಹಾಕಿರೋ ಕುಟುಂಬದ ಜೊತೆ ಕಾಂಗ್ರೆಸ್ ಇರಲಿದೆ ಎಂದು ತಿಳಿಸಿದರು.

ಮೀಸಲಾತಿ ಮೂಲಭೂತ ಹಕ್ಕಲ್ಲವೆಂಬ ಕೋರ್ಟ್ ತೀರ್ಪು ವಿಚಾರ ಕುರಿತು ಮಾತನಾಡಿದ ಹೆಚ್.ಸಿ ಮಹದೆವಪ್ಪ, ಈ ವಿಚಾರ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಬೇಕು. ಆದರೆ ಈ ತೀರ್ಪಿನಿಂದ ಸಾಕಷ್ಟು ತೊಂದರೆಯಾಗುತ್ತೆ. ಇಲ್ಲದಿದ್ದರೆ ದೇಶ ವ್ಯಾಪಿ ಪ್ರತಿಭಟನೆ ಮಾಡುತ್ತೇವೆ‌. ನಾಳೆ ಮೈಸೂರಿನಲ್ಲು ಈ ವಿಚಾರವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Key words: Former minister- HC Mahadevappa – responded – Supreme Court- order -candidates’-criminal record.