ನಿಮ್ಮನ್ನ ಸಿಎಂ ಮಾಡಿದ ಅನರ್ಹ ಶಾಸಕರನ್ನ ಕೈಬಿಟ್ಟು ತಬ್ಬಲಿ ಮಾಡಬೇಡಿ- ವ್ಯಂಗ್ಯವಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್

ಬೆಂಗಳೂರು,ಜು,29,2019(www.justkannada.in):  ನಿಮ್ಮನ್ನ ಮುಖ್ಯಮಂತ್ರಿ ಮಾಡಿದ ಅನರ್ಹ ಶಾಸಕರನ್ನ ಕೈಬಿಡಬೇಡಿ ಅವರನ್ನ ತಬ್ಬಲಿ ಮಾಡಬೇಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪಗೆ ಹೇಳುವ ಮೂಲಕ ಮಾಜಿ  ಸಚಿವ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್,  ಸಿಎಂ ಬಿಎಸ್ ಯಡಿಯೂರಪ್ಪಗೆ ಸಲಹೆ ಕೊಡೊದಕ್ಕೆ ಬಯಸುತ್ತೇನೆ.   ನಿಮ್ಮನ್ನ ಸಿಎಂ ಮಾಡಿದ ಅನರ್ಹ ಶಾಸಕರನ್ನ ಕೈ ಬಿಡಬೇಡಿ. ಅವರನ್ನ ತಬ್ಬಲಿ ಮಾಡಬೇಡಿ. ಅವರಿಗೆ ಏನೇನು ಕೊಡ್ತೀವಿ ಅಂತಾ ತಿಳಿಸಿದ್ದೀರಿ ಅದೆಲ್ಲವನ್ನ  ಕೊಡಿ. ಸಚಿವ ಸ್ಥಾನ ಏನೇನು ಕೊಡಬೇಕು ಅಂದಿದ್ರಿ ಅದನ್ನ ಕೊಡಿ.  ಅವರಿಗೂ ನಿಮ್ಮ ಜತೆಯೇ ಪ್ರತಿಜ್ಞಾವಿಧಿ ಬೋಧನೆ ಮಾಡಿ ಎಂದು ಲೇವಡಿ ಮಾಡಿದರು.

ಹಾಗೆಯೇ ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದ್ರಿ.  ಈಗ ನೋಡಿ ಅನರ್ಹ ಶಾಸಕರನ್ನ. ಅವರನ್ನ ಕೈಬಿಡಬೇಡಿ  ಎಂದು ಡಿ.ಕೆ ಶಿವಕುಮಾರ್ ಕಿಚಾಯಿಸಿದರು.

ಸಮ್ಮಿಶ್ರ ಸರ್ಕಾರದ ವಿರುದ್ದ ಸಿಡಿದೆದ್ದು ರಾಜೀನಾಮೆ ನೀಡಿದ್ದ 17 ಮಂದಿ ಅತೃಪ್ತ ಶಾಸಕರನ್ನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿ ನಿನ್ನೆ ಆದೇಶ ಹೊರಡಿಸಿದ್ದರು.

Key words: Don’t- give up – Disqualification -legislator – DK Shivakumar-bangalore