ಕೋವಿಡ್ ನಡುವೆ ದಸರಾ, ಇಂದು ನಿರ್ಧಾರ: ಮೈಸೂರಿಗೆ ಬಂದ ಸಲಹಾ ಸಮಿತಿ

ಮೈಸೂರು, ಅಕ್ಟೊಬರ್,09,2020 (www.justkannada.in): ದಸರಾ ಆಚರಣೆ ಪೂರ್ವಸಿದ್ದತೆ ಹಾಗೂ ಕೋವಿಡ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಪರಿಶೀಲನೆಗಾಗಿ ಇಂದು ಮೈಸೂರಿಗೆ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ತಂಡ ಆಗಮಿಸಿದೆ.

ಡಾ.ಸುಧಾಕರ್ ನೇತೃತ್ವದ ತಂಡದಿಂದ ಪರಿಶೀಲನೆ ನಡೆಯಲಿದ್ದು, ಪರಿಶೀಲನೆ ಬಳಿಕ ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆಯೊಂದಿಗೆ ವರದಿಯನ್ನು ಈ ತಂಡ ನೀಡಲಿದೆ.

ಜಿಲ್ಲಾಡಳಿತವು ತಾಂತ್ರಿಕ ಸಲಹಾ ಸಮಿತಿಗೆ ಅಗತ್ಯ ಮಾಹಿತಿ ನೀಡಲು ನಾಲ್ವರು ಜಿಲ್ಲಾಮಟ್ಟದ ಅಧಿಕಾರಿಗಳನ್ನು ನಿಯೋಜಿಸಿದೆ. ತಾಂತ್ರಿಕ ಸಲಹಾ ತಂಡದ ವರದಿ ಬಳಿಕವಷ್ಟೇ ದಸರಾ ಆಚರಣೆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

ಈ ತಂಡ ಮೊದಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಅರಮನೆ ಸೇರಿದಂತೆ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಲಿದೆ. ಬಳಿಕ ಅಂತಿಮವಾಗಿ ಎಲ್ಲವನ್ನೂ ಪರಿಶೀಲಿಸಿ ಸರಕಾರಕ್ಕೆ ವರದಿ ನೀಡಲಿದೆ.