ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ: ಸಿಎಂ ಬಿಎಸ್ ವೈಗೆ ಪತ್ರ ಬರೆದು ಕೆಲ ಸಲಹೆಗಳನ್ನ ನೀಡಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್….

ಬೆಂಗಳೂರು,ಜೂ,26,2020(www.justkannada.in): ರಾಜ್ಯದಲ್ಲಿ ಕೊರೋನಾ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಕೊರೋನಾ ಸೋಂಕಿತರಿಗೆ ಚಿಕಿತ್ಸೆ, ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸರ್ಕಾರದ ದರ ನಿಗದಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದು ಕೆಲ ಸಲಹೆಗಳನ್ನ ನೀಡಿದ್ದಾರೆ.

ಈ ಕುರಿತು ಸಿಎಂಗೆ ಪತ್ರ ಬರೆದಿರುವ ಮಾಜಿ ಸಚಿವ ಹೆಚ್. ಕೆ ಪಾಟೀಲ್, ವಿಶ್ವದಾದ್ಯಂತ ಮಹಾಮಾರಿ ಕೊರೋನ ವೈರಸ್ (ಕೋವಿಡ್-19)ರಿಂದ ಅತ್ಯಂತ ಗಂಭೀರ, ಕಳವಳಕಾರಿ ಹಾಗೂ ಆತಂಕದ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೊಣೆಗಾರಿಕೆಯನ್ನು ಮತ್ತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಈ ಜವಾಬ್ದಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸರ್ಕಾರ ಪಾರದರ್ಶಕ, ಭ್ರಷ್ಠಾಚಾರ ಮುಕ್ತ ಮತ್ತು ಸಮಯೋಚಿತ ಜನಪರ ನಿರ್ಧಾರಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ.

ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19)ರಿಂದಾಗಿ ಪರಿಸ್ಥಿತಿ ಆಘಾತಕಾರಿ ಹಂತ ತಲುಪುತ್ತಿದೆ. ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಅತ್ಯಂತ ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ಅವಕಾಶ ಕಲ್ಪಿಸಿ ದಿನಾಂಕ 23.6.2020 ರಂದು ಸರ್ಕಾರಿ ಅಧಿಸೂಚನೆ ಸಂಖ್ಯೆ: ಹೆಚ್.ಎಫ್.ಡಬ್ಲ್ಯೂ 228:ಎಸಿಎಸ್ 2020 ರ ಅನ್ವಯ ಚಿಕಿತ್ಸಾ ದರಗಳನ್ನು ಅಂತಿಮಗೊಳಿಸಿ  ರಾಜ್ಯ ಸರ್ಕಾರದಿಂದ ಪ್ರಕಟಿಸಲಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಈ ದರಗಳನ್ನು ಒಪ್ಪಿಕೊಂಡಿರುವುದಿಲ್ಲ. ಇಂಥ ತುರ್ತು, ಅನಿವಾರ್ಯ, ಗಂಭೀರ ಪರಿಸ್ಥಿತಿಯ ಸಂದರ್ಭದಲ್ಲಿ ಸಂಘರ್ಷಕ್ಕೆ ಕಾಲವಲ್ಲ. ತಕ್ಷಣವೇ ಭಾರತೀಯ ವೈದ್ಯ ಸಂಘ IMA (Indian Medical Association) ಜೊತೆಗೆ ಸಭೆ ಏರ್ಪಡಿಸಿ ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳನ್ನು ಕರೆದು ತಕ್ಷಣವೇ ಬಗೆಹರಿಸಿ ಬಿಡಬೇಕು. ಇಲ್ಲದಿದ್ದರೆ ಗಂಡಾಂತರಕಾರಿ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೆಚ್.ಕೆ ಪಾಟೀಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈಗಿರುವ ಹಾಸಿಗೆ ಸಾಮರ್ಥ್ಯ 10 ಪಟ್ಟು ಹೆಚ್ಚಿಸಿ….

ಹಾಗೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳೆಲ್ಲವೂ ಭರ್ತಿಯಾಗಿವೆ ಎಂಬ ಮಾಹಿತಿ ಇದೆ. ಇದು ಬೆಂಗಳೂರು ಮಾತ್ರವಲ್ಲ ರಾಜ್ಯದ ಇತರೆಡೆಗಳಲ್ಲಿಯೂ ಸಹ ಇದೇ ಸನ್ನಿವೇಶ ಎದುರಾಗಿದೆ. ಈಗ ಲಭ್ಯವಿರುವ ಹಾಸಿಗೆಗಳಿಗಿಂತ 10 ಪಟ್ಟು ಹೆಚ್ಚಿಗೆ ಹಾಸಿಗೆಗಳನ್ನು ಸಿದ್ದಪಡಿಸಿಕೊಳ್ಳುವ ಅವಶ್ಯಕತೆ/ಅನಿವಾರ್ಯತೆ ಇದೆ. ಹಾಸಿಗೆಗಳನ್ನು ಸಿದ್ದಪಡಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು. ಈಗಿರುವ ಹಾಸಿಗೆ ಸಾಮರ್ಥ್ಯ 10 ಪಟ್ಟು ಹೆಚ್ಚಿಸಿ ಎಂದು ಹೆಚ್ ಕೆಪಿ ಸಲಹೆ ನೀಡಿದ್ದಾರೆ.Corona- Increase -Former minister- HK Patil –letter- CM BS yeddyurappa

 

5 ಸ್ಟಾರ್ ಮತ್ತು ತ್ರಿಸ್ಟಾರ್ ಹೋಟೆಲ್ ವಶಕ್ಕೆ ಪಡೆದು ಚಿಕಿತ್ಸಾ ಕೇಂದ್ರಗಳಾಗಿ ಪರಿವರ್ತಿಸಿ…..

ರಾಜ್ಯಾದ್ಯಂತ ಲಭ್ಯವಿರುವ 5 Star ಮತ್ತು 3 Star ಆಸ್ಪತ್ರೆಗಳು ಹಾಗೂ ಹೋಟೆಲ್‍ಗಳನ್ನು ಸರ್ಕಾರ ಆದೇಶ ಅಥವಾ ಸುಗ್ರೀವಾಜ್ಞೆಯ ಮೂಲಕ ತಕ್ಷಣವೇ ತನ್ನ ವಶಕ್ಕೆ  ತೆಗೆದುಕೊಂಡು ಅವುಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಕೋವಿಡ್-19 ಚಿಕಿತ್ಸಾ ಕೇಂದ್ರ ಅಥವಾ ಆಸ್ಪತ್ರೆಗಳನ್ನಾಗಿ ಪರಿವರ್ತಿಸಬೇಕು ಎಂದು ಹೆಚ್.ಕೆ ಪಾಟೀಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

Key words: Corona- Increase -Former minister- HK Patil –letter- CM BS yeddyurappa