ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೀನಿ ಅಂದಿದ್ದು ಚುನಾವಣೆಗೆ ನಿಲ್ಲಲು ಅಲ್ಲ- ಮಾಜಿ ಸಿಎಂ ಹೆಚ್.ಡಿಕೆ ಸ್ಪಷ್ಟನೆ.

ರಾಮನಗರ,ಫೆಬ್ರವರಿ,13,2022(www.justkannada.in):  ಮುಂದಿನ ಚುನಾವಣೆಗೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೇನೆ ಎಂದು ಹೇಳಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೀನಿ ಅಂದಿದ್ದು ಚುನಾವಣೆಯಲ್ಲಿ ನಿಲ್ಲೋಕೆ ಅಲ್ಲ ಎಂದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ದೇವೇಗೌಡರ ಕುಟುಂಬಕ್ಕೂ ರಾಮನಗರ ಕ್ಷೇತ್ರಕ್ಕೂ ತಾಯಿ ಮಗುವಿನ ಸಂಬಂಧ ಇದೆ. ನನ್ನ ಕಾರ್ಯಕರ್ತರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರು ಜೆಡಿಎಸ್​ ನಾಯಕರು? ಎಂದರು. ಅದಕ್ಕೆ ‘ನಾನೇ ಬರ್ತೀನಿ ನಡೆಯಿರಿ’ ಎಂದು ಹೇಳಿದೆ ನಾನೇ ಬರ್ತೀನಿ ನಡೆಯಿರಿ ಅಂದ್ರೆ ಚುನಾವಣೆಗೆ ನಿಲ್ಲಲು ಅಲ್ಲ. ಈ ಹಿಂದೆ ಹೇಗೆ ಚುನಾವಣೆ ನಡೆಸಿದೆ, ಹಾಗೆಯೇ ಈ ಭಾರಿಯೂ ಚುನಾವಣೆ ನಡೆಸಲು ಬರ್ತೀನಿ ಅಂತಾ ಹೇಳಿದೆ ಎಂದರು.

ಇನ್ನು ನಾಳೆಯಿಂದ ಪ್ರೌಢ ಶಾಲೆ ತರಗತಿಗಳು ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಶಾಲೆ ತೆರೆಯಲಿ. ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡಬಾರದು ಮತ್ತೆ ಗಲಾಟೆಯಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಮತ್ತು ಶಾಲಾ ಆಡಳಿತ ಮಂಡಳಿಗೆ ಸಲಹೆ ನೀಡಿದರು.

Key words: Chamundeshwari-constituency-HDK