2021 ಕೂಡ ವೈದ್ಯರು, ಅರೆ ವೈದ್ಯ ಸಿಬ್ಬಂದಿಗೆ ಸವಾಲಿನ ವರ್ಷ –ಡಿಸಿಎಂ  ಅಶ್ವಥ್ ನಾರಾಯಣ್…

ಬೆಂಗಳೂರು,ಜನವರಿ,22,2021(www.justkannada.in):  ಕೋವಿಡ್‌-19 ಸಂಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ 2021ರಲ್ಲಿ ಮತ್ತಷ್ಟು ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು.jk

ಬೆಂಗಳೂರಿನ ಹೊಸಕೋಟೆ ಸಮೀಪದ ಎಂವಿಜೆ ವೈದ್ಯಕೀಯ ಕಾಲೇಜಿನ 12ನೇ ಘಟಿಕೋತ್ಸವದಲ್ಲಿ ಶುಕ್ರವಾರ  ಮಾತನಾಡಿದ  ಡಿಸಿಎಂ ಅಶ್ವಥ್ ನಾರಾಯಣ್, ಮುಂದಿನ ದಿನಗಳು ಹೆಚ್ಚು ಸವಾಲಿನಿಂದ ಕೂಡಿವೆ. ಯಾರೂ ಆ ಸಮಸ್ಯೆಗೆ ಬೆನ್ನು ತಿರುಗಿಸಬಾರದು. ಎಲ್ಲರೂ ಒಟ್ಟಾಗಿ ಹೋರಾಟ ಮಾಡದಿದ್ದರೆ ವೈರಸ್‌ ಮಾರಿಯನ್ನು ಗೆಲ್ಲಲು ಸಾಧ್ಯವಿಲ್ಲ. ವ್ಯಾಕ್ಸಿನ್‌ ಬಂದಿದ್ದರೂ ನಾವು ಸದಾ ಎಚ್ಚರದಿಂದ ಇರಬೇಕು ಎಂದರು.

ನಾನೂ ಒಬ್ಬ ವೈದ್ಯನಾಗಿ ಸಂಕಷ್ಟ ಕಾಲದಲ್ಲಿ ವೈದ್ಯರು ಎದುರಿಸುವ ಸಮಸ್ಯೆಗಳನ್ನು ಬಲ್ಲೆ. ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಹೊತ್ತಿನಲ್ಲಿ ಸೋಂಕಿನ ಭೀತಿಯಿಂದ ಬಾಡಿಗೆ ಮನೆ, ವಸತಿ ಸಮುಚ್ಛಯಗಳಲ್ಲಿ ವಾಸವಿದ್ದ ವೈದ್ಯರು, ಅರೆವೈದ್ಯ ಸಿಬ್ಬಂದಿಯನ್ನು ಖಾಲಿ ಮಾಡಿಸಿದ ಅಮಾನವೀಯ ಘಟನೆಗಳು ನಡೆದಿವೆ. ಈ ಬಗ್ಗೆ ನನಗೆ ನೋವಿದೆ. ಆದರೆ, ಇವರೆಲ್ಲರೂ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಜನರ ಸೇವೆ ಮಾಡಿದರು. ಜೀವದ ಹಂಗು ತೊರೆದು ಕ್ವಾರಂಟೈನ್‌ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದರು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದರು.2021-also-challenging-year-doctors-paramedics-dcm-ashwath-narayan

ವೈದ್ಯಸೇವೆ ಎಂದರೆ ಹಣ ಮಾಡುವುದಲ್ಲ. ಸೇವಾ ಮನೋಭಾವ ಇಲ್ಲದಿದ್ದರೇ ಇದಕ್ಕೆ ಅರ್ಥವೇ ಇಲ್ಲ. ಇಂಥ ಸೇವಾ ತತ್ಪರತೆಯನ್ನು ನಾನು ಕೋವಿಡ್ ಕಾಲದಲ್ಲಿ ನೋಡಿದ್ದೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

 ವಿದ್ಯಾರ್ಥಿಗಳಿಗೆ ಕಿವಿಮಾತು…

ತಮ್ಮ ಘಟಿಕೋತ್ಸವ ಭಾಷಣದಲ್ಲಿ ಮುಖ್ಯವಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಹಾಗೂ ಕರ್ತವ್ಯನಿಷ್ಠೆಯ ಪಾಠ ಮಾಡಿದ ಡಾ.ಅಶ್ವತ್ಥನಾರಾಯಣ್; ಪ್ರತಿಯೊಬ್ಬರಿಗೂ ವಿದ್ಯಾರ್ಥಿ ಜೀವನ ಬಹಳ ಮುಖ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ತಮ್ಮ ಗುರಿ ಏನು? ನಮಗಾಗಿ ನಮ್ಮ ಪೋಷಕರು ಎಷ್ಟೆಲ್ಲ ತ್ಯಾಗ ಮಾಡಿದ್ದಾರೆ ಎಂಬುದನ್ನು ಮರೆಯಬಾರದು. ಕ್ಯಾಂಪಸ್‌ನಿಂದ ಹೊರಡುವಾಗ ನಮ್ಮ ಗುರಿಯನ್ನು ಸಾಧಿಸಿಕೊಂಡೇ ಹೊರಬೀಳಬೇಕು ಎಂದು ಕಿವಿಮಾತು ಹೇಳಿದರು.

ನೀವು ಈಗ ನಿಮ್ಮ ಜೀವನದ ಬಹುದೊಡ್ಡ ತಿರುವಿನಲ್ಲಿ ನಿಂತಿದ್ದೀರಿ ಹಾಗೂ ಮುಂದೆ ನಿರ್ಧಾರಗಳನ್ನು ಕೈಗೊಳ್ಳುವ ಹಂತಕ್ಕೆ ಹೋಗುತ್ತಿದ್ದೀರಿ. ದೊಡ್ಡ ದೊಡ್ಡ ವ್ಯವಸ್ಥೆಗಳ ಭಾಗವಾಗುತ್ತೀರಿ ಎಂಬುದನ್ನು ಮನಗಾಣಬೇಕು. ನಾನೊಬ್ಬ ವೈದ್ಯಕೀಯ ವಿದ್ಯಾರ್ಥಿಯಾಗಿಯೂ ನಿಮಗೆ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ,‌ ಎಂವಿಜೆ ಮೆಡಿಕಲ್‌ ಕಾಲೇಜ್‌ ಮತ್ತು ಆಸ್ಪತ್ರೆಯ ಅಧ್ಯಕ್ಷ  ಡಾ.ಎಂ.ಜೆ.ಮೋಹನ್, ಸಿಇಒ ಡಾ.ಎಂ.ಧರಣಿ ಹಾಗೂ ಪ್ರಾಂಶುಪಾಲ ಡಾ.ಡಾ.ಬಿ.ರವಿಚಂದರ್‌ ಮತ್ತಿತರರು ಹಾಜರಿದ್ದರು.

Key words: 2021 – also – challenging year – doctors – paramedics- DCM- Ashwath Narayan.