ತ್ಯಾಜ್ಯ ಅನಧಿಕೃತ ವಿಲೇವಾರಿ ಮಾಡಿದ್ರೆ ದಂಡ, ಕಾನೂನಾತ್ಮಕ ಕ್ರಮ: ಬಿಬಿಎಂಪಿ ಆದೇಶ.     

ಬೆಂಗಳೂರು,ಸೆಪ್ಟಂಬರ್,19,2023(www.justkannada.in): ತ್ಯಾಜ್ಯವನ್ನ ಅನಧಿಕೃತವಾಗಿ ವಿಲೇವಾರಿ ಮಾಡಿದರೇ  ದಂಡ ವಿಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು  ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು,  ಬಿಬಿಎಂಪಿ ವ್ಯಾಪ್ತಿಯ ಹೊರಗಿನ ಪ್ರದೇಶ, ಬೆಂಗಳೂರು ನಗರದ ಹೊರವಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿಯಲ್ಲಿ, ಇಕ್ಕೆಲಗಳಲ್ಲಿ ಅನಧಿಕೃತ ಅನಾಮಧೇಯ ವ್ಯಕ್ತಿಗಳಿಂದ, ಏಜೆನ್ಸಿಗಳಿಂದ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಯು ಅತಿರೇಕವಾಗಿ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಅನ‌ಧಿಕೃತ‌ ವಿಲೇವಾರಿಯ ಈ ಪ್ರವೃತ್ತಿಯು ನಗರ ಭಾಗಕ್ಕೆ ಸಂಚರಿಸುವ ಸಾರ್ವಜನಿಕರಲ್ಲಿ ಬೆಂಗಳೂರು ನಗರದ ಸ್ವಚ್ಛತೆಯ ಕುರಿತು ಋಣಾತ್ಮಕ ಮನೋಭಾವನೆಯನ್ನುಂಟುಮಾಡುವುದಲ್ಲದೇ ನಗರದ ಘನತೆ ಕುಂದಿಸುತ್ತಿರುವುದನ್ನು ಅತೀ ಗಂಭೀರವಾಗಿ  ಪರಿಗಣಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ವೈಜ್ಞಾನಿಕ ಅಧಿಕೃತ ಸಂಗ್ರಹಣೆ, ಸಾಗಾಣೆ ಮತ್ತು ವಿಲೇವಾರಿಯ ಪ್ರಾಥಮಿಕ ಜವಾಬ್ದಾರಿಯು ತ್ಯಾಜ್ಯ ಉತ್ಪಾದಕರದ್ದಾಗಿದೆ. ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಅಧಿಕೃತವಾಗಿ ಗುರುತಿಸಿದ ಸಂಸ್ಕರಣ ಘಟಕಗಳಿಗೆ ಸಾಗಿಸಿ ವಿಲೇವಾರಿಯನ್ನು ಕೈಗೊಳ್ಳಬೇಕಾಗಿದೆ.

ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ಅನಧಿಕೃತವಾಗಿ ಎಲ್ಲೆಂದರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳ ಬದಿಯಲ್ಲಿ ಇಕ್ಕೆಲಗಳಲ್ಲಿ, ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಅಥವಾ ಕ್ವಾರಿಗಳಲ್ಲಿ ಸುರಿಯುವುದನ್ನು ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣಾ ನಿಯಮಗಳು-2016ರನ್ವಯ ನಿಷೇಧಿಸಲಾಗಿದ್ದು, ದಂಡಾರ್ಹ ಮತ್ತು ಕಾನೂನಾತ್ಮಕವಾಗಿ ಅಪರಾಧವಾಗಿದೆ.

ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಗಾಗಿ ತ್ಯಾಜ್ಯ ಉತ್ಪಾದಕರನ್ನೊಳಗೊಂಡಂತೆ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣೆ, ವಿಲೇವಾರಿದಾರರಿಗೂ ಸಹ ನಿಯಮಾವಳಿಗಳನ್ವಯ (ರೂ.10,000 ಪ್ರತಿ ಟನ್‌ಗೆ) ದಂಡವನ್ನು ವಿಧಿಸಲಾಗುವುದು ಮತ್ತು ಪರಿಸರ (ಸಂರಕ್ಷಣೆ) ಕಾಯ್ದೆ 1986ರನ್ವಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖೇನ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಹೊರವಲಯದಲ್ಲಿ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಗಾಗಿ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆಯ ಎಲ್ಲಾ ಸೂಪರವೈಸರ್/ಕಿರಿಯ ಆರೋಗ್ಯ ಪರಿವೀಕ್ಷಕರು/ವಾರ್ಡ ಮಾರ್ಷಲ್ಸ್/ ಮಾರ್ಷಲ್ ಸೂಪರವೈಸ‌ರ್ ರವರುಗಳ ಮುಖೇನ ತಪಾಸಣೆಗೆ ಒಳಪಡಿಸಿ ನಿಯಮಾವಳಿಗಳನ್ವಯ ದಂಡವನ್ನು ವಿಧಿಸಿ ಸದರಿ ವಾಹನಗಳನ್ನು ವಶಪಡಿಸಿಕೊಂಡು ಹತ್ತಿರದ ಪೋಲಿಸ್ ಠಾಣೆಯ ಸುಪರ್ದಿಗೆ ಮುಂದಿನ ಕ್ರಮಕ್ಕಾಗಿ ನೀಡಲಾಗುವುದು.

ಈ ಮೇಲಿನ ಅಂಶಗಳನ್ನು ಸಾರ್ವಜನಿಕರ ಗಮನಕ್ಕಾಗಿ/ಮಾಹಿತಿಗಾಗಿ/ಅನುಪಾಲನೆಗಾಗಿ ಹೊರಡಿಸಲಾಗಿದ್ದು, ಪರಿಸರ ಸಂರಕ್ಷಣೆಗಾಗಿ ಪಾಲಿಕೆಯೊಂದಿಗೆ ಸಹಕರಿಸುವಂತೆ  ತುಷಾರ್ ಗಿರಿನಾಥ್ ಕೋರಿದ್ದಾರೆ.

Key words: fine-legal action –unauthorized- disposal of waste- BBMP -order