ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಪ್ರಯತ್ನ: ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ-  ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…

ಮೈಸೂರು,ಡಿ,22,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾವು ನಡೆಸುತ್ತಿರುವ ಪ್ರತಿಭಟನೆಯನ್ನ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ.  ಕೇಂದ್ರ‌ ಸರ್ಕಾರ ಈ ಕಾಯ್ದೆಯನ್ನ ಹಿಂಪಡೆಯುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ  ಇಂದು ಮಾತನಾಡಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ನಾವು ಇವತ್ತು ಪ್ರತಿಭಟನೆಗೆ ಮುಂದಾಗಿದ್ವಿ, ಆದ್ರೆ ಪೊಲೀಸರು ತಡೆದಿದ್ದಾರೆ. ನಾವು ಹಿಂದೆ ಪ್ರತಿಭಟನೆ ಮಾಡಲು ಮುಂದಾದಾಗ 144 ಸೆಕ್ಷನ್ ಜಾರಿ ಮಾಡಿದ್ರು. ಈಗಲೂ ಸಹ ಅದನ್ನೆ ಮಾಡಿದ್ದಾರೆ. ಯಾವಾಗ ನಿಷೇದಾಜ್ಞೆ ತೆರವು ಮಾಡುತ್ತಿರೀ ಎಂದರೇ ಅವರ ಬಳಿ ಉತ್ತರವಿಲ್ಲ. ಇದು ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಪ್ರಯತ್ನ ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಪ್ರತಿಭಟನೆ ನಡೆದರೂ ಕೂಡಾ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಮೈಸೂರಿಗೆ 144 ಸಕ್ಷನ್ ಅವಶ್ಯಕತೆ ಇಲ್ಲ. ಪ್ರತಿಭಟನೆ ಮಾಡುವವರೆಲ್ಲಾ ಹಿಂಸಾಚಾರಿಗಳಲ್ಲ, ರೌಡಿ ಶೀಟರ್ ಗಳಲ್ಲ. ಇದು ನಮ್ಮ‌ ಪ್ರಜೆಗಳಿಗೆ ಮಾಡುತ್ತಿರುವ ಅವಮಾನ. ಇದು ನೂರಕ್ಕೆ ನೂರರಷ್ಟು ರಾಜಕೀಯ ಹುನ್ನಾರ ಎಂದು ಯತೀಂದ್ರ ಸಿದ್ಧರಾಮಯ್ಯ ಆರೋಪಿಸಿದರು.

ಕೇವಲ ಮೂರು ದೇಶಗಳಿಗೆ ಮಾತ್ರ ಪೌರತ್ವ ಕಾಯ್ದೆ ಜಾರಿ ಮಾಡಿದ್ದಾರೆ. ಬೇರೆಲ್ಲೂ ಮುಸ್ಲೀಂಯೇತರ ನಿರಾಶ್ರಿತರು ಇಲ್ಲವೇ ಎಂದು ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

Key words: Fight -until – repeal – Citizenship Amendment Act-MLA Dr- Yatindra Siddaramaiah