ಕಾಂಗ್ರೆಸ್ ನಿಂದ ಗೆದ್ದು ಬೇರೆ ಪಕ್ಷದ ಪರ ಪ್ರಚಾರ: ನಾಲ್ವರು ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹ.

ರಾಯಚೂರು,ಸೆಪ್ಟಂಬರ್,5,2023(www.justkannada.in): ಕಾಂಗ್ರೆಸ್ ನಿಂದ ಗೆದ್ದು ವಿಧಾನಸಭಾ ಚುನಾವಣೆ ವೇಳೆ ಕೆಆರ್​ಪಿಪಿ ಪಕ್ಷದ  ಪರ ಪ್ರಚಾರ  ನಡೆಸಿದ್ದ ನಾಲ್ವರು ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಲಾಗಿದೆ.

ಕಾಂಗ್ರೆಸ್​ನಿಂದ ಆಯ್ಕೆಯಾಗಿ KRPP ಪರ ಪ್ರಚಾರ  ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಫಾತೀಮಾ, ಮೌಲಾಸಾಬ್, ಎ.ಪ್ರಮೋದ್ ಕುಮಾರ್, ಶರಣಪ್ಪ ಅವರ ಲಿಂಗಸುಗೂರು ಪುರಸಭೆ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾ‌ ದಂಡಾಧಿಕಾರಿಗಳ ನ್ಯಾಯಾಲಯ ತೀರ್ಪು ನೀಡಿದೆ.

ಫಾತೀಮಾ, ಮೌಲಾಸಾಬ್, ಎ.ಪ್ರಮೋದ್ ಕುಮಾರ್, ಶರಣಪ್ಪ ಎನ್ನುವವರು ಲಿಂಗಸುಗೂರು ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಙರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ವಿಧಾನಸಭೆ ಚುನಾವಣೆ ವೇಳೆ ಬಹಿರಂಗವಾಗಿ ಕೆಆರ್‌ಪಿಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು.

ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.  ಪಕ್ಷ‌ ವಿರೋಧಿ ಚಟುವಟಿಕೆ ಮೇರೆಗೆ ಇವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಮನವಿ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾ‌ ದಂಡಾಧಿಕಾರಿಗಳ ನ್ಯಾಯಾಲಯವು, ಪಕ್ಷ ವಿರೋಧಿ ಚಟುವಟಿಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಾಲ್ವರ ಸದಸ್ಯತ್ವವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.

Key words: Congress-Membership – four -municipal -councilors -disqualified.