ಬೆಂಗಳೂರು,ಜೂನ್,23,2026 (www.justkannada.in): ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರಕ್ಕೆ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ಜಟಾಪಟಿ, ಸವಾಲು ಪ್ರತಿಸವಾಲು ಮುಂದುವರೆದಿದೆ.
ಬಿಡದಿ ಟೌನ್ ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಬರುವಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಕಿದ್ದ ಸವಾಲು ಸ್ವೀಕರಿಸಿದ್ದ ಸಿಎಂ ಡಿಕೆ ಶಿವಕುಮಾರ್ ಜೂನ್ 26 ರಂದು ವಿಧಾನಸೌಧದ ಕಚೇರಿಯಲ್ಲಿ ಚರ್ಚೆಗೆ ಬರಲು ಆಹ್ವಾನ ನೀಡಿದ್ದರು.
ಆದರೆ ಇದೀಗ ಮತ್ತೆ ಕೇಂದ್ರ ಸಚಿವ ಹೆಚ್ ಡಿಕೆ ಪ್ರತಿಸವಾಲು ಹಾಕಿದ್ದು ಜೂನ್ 27 ರಂದು ಬೈರಮಂಗಲದಲ್ಲಿ ನೊಂದ ಅನ್ನದಾತರ ಸಮ್ಮುಖದಲ್ಲಿ ಸಭೆ ಆಯೋಜಿಸಿದರೇ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿಕೆ, ಬಿಡದಿ ನೂತನ ಟೌನ್’ಶಿಪ್ ಬಗ್ಗೆ ಚರ್ಚಿಸಲು ಬನ್ನಿ’ ಎಂದು ಮಾನ್ಯ ಮುಖ್ಯಮಂತ್ರಿಗಳು ನನ್ನನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದಾರೆ.
ಸಮಸ್ಯೆ ನನ್ನೊಬ್ಬನದ್ದಲ್ಲ, ಇದು ಸಾವಿರಾರು ರೈತರ ಬದುಕಿನ ಪ್ರಶ್ನೆ. ನಾಲ್ಕು ಗೋಡೆಗಳ ನಡುವೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ನೊಂದ ರೈತರು ಹಗಲಿರುಳು ಪ್ರತಿಭಟನೆ ನಡೆಸುತ್ತಿರುವ ಬೈರಮಂಗಲದಲ್ಲಿ ಬಹಿರಂಗವಾಗಿ ಚರ್ಚೆ ನಡೆಯುವುದು ನ್ಯಾಯೋಚಿತ. ಇದನ್ನೇ ಪತ್ರ ಮುಖೇನ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ.
ದಿನಾಂಕ 26-06-2026ರ ಬೆಳಗ್ಗೆ 11 ಗಂಟೆಗೆ ನನ್ನನ್ನು ಚರ್ಚೆಗೆ ಕರೆದಿದ್ದಾರೆ. ಅಂದು ಪೂರ್ವನಿಗದಿತ ಕಾರ್ಯಕ್ರಮಗಳಿವೆ. ದಿನಾಂಕ 27-06-2026 ರಂದು ಯಾವುದೇ ಸಮಯಕ್ಕೆ ಬೈರಮಂಗಲದಲ್ಲಿ ನೊಂದ ಅನ್ನದಾತರ ಸಮ್ಮುಖದಲ್ಲಿ ಸಭೆ ಆಯೋಜಿಸಿದರೆ ಬರಲು ಸಿದ್ಧನಿದ್ದೇನೆ. ಮುಖ್ಯಮಂತ್ರಿಗಳು ಆ ದಿನ ಸಮಯ ನಿಗದಿ ಮಾಡಿ ತಿಳಿಸುತ್ತಾರೆಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
Key words: debate, Bidadi town ship, Bairamangala – HDK, challenges, CM DK Shivakumar






