Thursday, August 6, 2026

BDA Apartments

Home Front Page ರಾಜ್ಯದ ಹಿತಾಸಕ್ತಿ ಕಾಪಾಡುವುದಕ್ಕಿಂತ ಕೇಂದ್ರದ ವಿರುದ್ದ ಆರೋಪ ಮಾಡುವುದೇ ಸಿಎಂಗೆ ದೊಡ್ಡ ಕೆಲಸವಾದಂತಿದೆ- ಆರ್.ಅಶೋಕ್ ಕಿಡಿ.

ರಾಜ್ಯದ ಹಿತಾಸಕ್ತಿ ಕಾಪಾಡುವುದಕ್ಕಿಂತ ಕೇಂದ್ರದ ವಿರುದ್ದ ಆರೋಪ ಮಾಡುವುದೇ ಸಿಎಂಗೆ ದೊಡ್ಡ ಕೆಲಸವಾದಂತಿದೆ- ಆರ್.ಅಶೋಕ್ ಕಿಡಿ.

ಬೆಂಗಳೂರು,ಡಿಸೆಂಬರ್,18,2023(www.justkannada.in): ರಾಜ್ಯದ ಹಿತಾಸಕ್ತಿ ಕಾಪಾಡುವುದಕ್ಕಿಂತ ಕೇಂದ್ರದ ವಿರುದ್ದ ಆರೋಪ ಮಾಡುವುದೇ ಸಿಎಂ ಸಿದ್ದರಾಮಯ್ಯ ಅವರಿಗೆ ದೊಡ್ಡ ಕೆಲಸವಾದಂತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಆರ್.ಅಶೋಕ್, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಒಬ್ಬ ಜವಾಬ್ದರಿಯುತ ಮುಖ್ಯಮಂತ್ರಿಗೆ ಇರಬೇಕಾದ ಪ್ರಮುಖ ಲಕ್ಷಣ ಮಾತ್ರವಲ್ಲ ಅದು ಕರ್ತವ್ಯ ಕೂಡ ಹೌದು .

ಆದರೆ ಮುಖ್ಯಮಂತ್ರಿ  ಸಿದ್ದರಾಮಯ್ಯನವರಿಗೆ ರಾಜ್ಯದ ಹಿತಾಸಕ್ತಿ ಕಾಪಾಡುವುದಕ್ಕಿಂತ ಪ್ರಧಾನ ಮಂತ್ರಿಗಳ ಮೇಲೆ, ಕೇಂದ್ರ ಸರ್ಕಾರದ ಮೇಲೆ ಇಲ್ಲಸಲ್ಲದ, ರಾಜಕೀಯ ಪ್ರೇರಿತ ಆರೋಪ ಮಾಡುವುದೇ ದೊಡ್ಡ ಕೆಲಸವಾದಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೊನ್ನೆ ಸದನದಲ್ಲಿ ಪ್ರಧಾನಿ ಮೋದಿ ಅವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋರಿದ ರೋಷಾವೇಶ ಗಮನಿಸಿದರೆ ರಾಜ್ಯದ ಜನತೆಯ ಹಿತರಕ್ಷಣೆಗಿಂತ ತಮ್ಮ ಹೈಕಮಾಂಡ್ ಅನ್ನು ಮೆಚ್ಚಿಸುವುದೇ ಅವರ ಉದ್ದೇಶವೆಂದು ಅನ್ನಿಸುತ್ತದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ತಮ್ಮದೇ ಆದ ಸಂವಿಧಾನ ಬದ್ಧ ಜವಾಬ್ದಾರಿಗಳಿವೆ. 12 ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಪ್ರಧಾನಿ ಮೋದಿ ಅವರಿಗೆ ರಾಜ್ಯ ಸರ್ಕಾರಗಳ ಇತಿಮಿತಿಗಳು, ಅಗತ್ಯತೆಗಳು, ಅಪೇಕ್ಷೆಗಳ ಬಗ್ಗೆ ಇರುವಷ್ಟು ಅರಿವು, ಅವಗಾಹನೆ, ಸಂವೇದನೆ ಬಹುಶಃ ಹಿಂದಿನ ಬೇರೆ ಯಾವ ಪ್ರಧಾನಮಂತ್ರಿಗೂ ಇರಲಿಲ್ಲ.

ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅವರ ಭೇಟಿಗೆ ಸಮಯ ಸಿಕ್ಕಿರುವಾಗ ತಮ್ಮ ಕ್ಷುಲ್ಲಕ ರಾಜಕೀಯ ಬದಿಗಿಟ್ಟು, ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ, ಕನ್ನಡ ನಾಡಿನ ಆರೂವರೆ ಕೋಟಿ ಜನತೆಯ ಹಿತರಕ್ಷಣೆಯ ದೃಷ್ಟಿಯಿಂದ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಮಾನ್ಯ ಸಿದ್ದರಾಮಯ್ಯನವರು ತಮ್ಮ ಮುತ್ಸದ್ಧಿತನ ಪ್ರದರ್ಶಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಟ್ವೀಟ್ಟರ್ ನಲ್ಲಿ ಆರ್.ಅಶೋಕ್ ತಿಳಿಸಿದ್ದಾರೆ.

Key words: accusations- against – center CM-Siddaramaiah- R.Ashok