‘ಕೈ’ ಸಾಧನಾ ಸಮಾವೇಶಕ್ಕೆ ವ್ಯಂಗ್ಯ: ದೇವೇಗೌಡರ ಒಡನಾಟ ಸ್ಮರಿಸಿ ಜನ್ಮದಿನದ ಶುಭ ಕೋರಿದ ಹೆಚ್. ವಿಶ್ವನಾಥ್.

ಮೈಸೂರು,ಮೇ,18,2026 (www.justkannada.in): ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ದೇವೇಗೌಡರ ಒಡನಾಟವನ್ನು ಸ್ಮರಿಸಿದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಜನ್ಮದಿನದ ಶುಭ ಕೋರಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್. ವಿಶ್ವನಾಥ್, ಈ ದೇಶದಲ್ಲಿ ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ಗೆ ಹೋಗಿ ಪ್ರಧಾನಿಯಾದವರು ತುಂಬಾ ವಿರಳ. ದೇವೇಗೌಡರು ಕರ್ನಾಟಕದ ಗೌರವ ಎಂದು ನುಡಿದರು.

ಯಾವ ಸಾಧನೆ ಮಾಡಿದ್ದಾರೆ ಎಂದು ಸಮಾವೇಶ ಮಾಡಲು ಹೊರಟಿದ್ದಾರೆ..?

ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರದ  ಮೂರು ವರ್ಷದ ಸಾಧನಾ ಸಮಾವೇಶ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಯಾವ ಸಾಧನೆ ಮಾಡಿದ್ದಾರೆ ಎಂದು ಸಮಾವೇಶ ಮಾಡಲು ಹೊರಟಿದ್ದಾರೆ..? ಸರ್ಕಾರಗಳು ಸಾಧನೆ ಮಾಡಿದೆ ಎಂದು ಜನ ಕೊಂಡಾಡಿಬೇಕು. ಅದನ್ನು ಬಿಟ್ಟು ನಿಮಗೆ ನೀವೆ ಹೊಗಳಿಕೊಳ್ಳಬಾರದು ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿಗಳಿಗೋಸ್ಕರ ಎಲ್ಲದರ ಬೆಲೆಗಳನ್ನು ಹೆಚ್ಚು ಮಾಡಿದ್ದೀರಿ..?

ಸಾಧನಾ ಸಮಾವೇಶ ಜಾಹೀರಾತಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂಸಾರಕ್ಕೆ ಗ್ಯಾರಂಟಿಗಳನ್ನು ನೀಡಬೇಕಿತ್ತು. ಹೇ ಮಹದೇವಪ್ಪ ನಿನ್ನ ಹೆಂಡ್ತಿಗೂ ಫ್ರೀ, ನನ್ನ ಹೆಂಡ್ತಿಗೂ ಫ್ರೀ ಎಂದು ಎಲ್ಲರಿಗೂ ಗ್ಯಾರಂಟಿ ಕೊಟ್ಟರು. ಗ್ಯಾರಂಟಿಗಳಿಗೋಸ್ಕರ ಎಲ್ಲದರ ಬೆಲೆಗಳನ್ನು ಹೆಚ್ಚು ಮಾಡಿದ್ದೀರಿ..? ಒಂದು ಬಿಯರ್ ಬೆಲೆ 250 ರೂಪಾಯಿ ಮಾಡಿದ್ದಾರೆ. 50 ರೂಪಾಯಿ ಕೊಟ್ಟರೆ ಒಂದು ಪ್ಯಾಕೆಟ್ ಗಾಂಜಾ ಸಿಗುತ್ತೆ. ಇದರಿಂದ ಯುವಕರು ಗಾಂಜಾ ವ್ಯಸನಕ್ಕೆ ಮೊರೆ ಹೋಗುತ್ತಿದ್ದಾರೆ. ಮೈಸೂರು ಗಾಂಜಾ, ಅಫೀಮು ಕೇಂದ್ರವಾಗುತ್ತಿದೆ ಎಂದು ಹೆಚ್.ವಿಶ್ವನಾಥ್ ಹರಿಹಾಯ್ದರು.

ರಾಜ್ಯದ ತೆರಿಗೆ ಹಣವನ್ನು ಸಿದ್ದರಾಮಯ್ಯ ಪೋಲು ಮಾಡುತ್ತಿದ್ದಾರೆ.

ನಾರಾಯಣಮೂರ್ತಿ, ಸುಧಾಮೂರ್ತಿ ಅಂತಹ ಇನ್ಫೋಸಿಸ್ ಸಂಸ್ಥಾಪಕರೇ ವಿಮಾನದಲ್ಲಿ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಸಿದ್ದರಾಮಯ್ಯ ಡೆಲ್ಲಿಗೋದರೂ ಸ್ಪೆಷಲ್ ಫ್ಲೈಟ್, ಮೈಸೂರಿಗೆ ಬಂದರೂ ಸ್ಪೆಷಲ್ ಫ್ಲೈಟ್. ರಾಜ್ಯದ ತೆರಿಗೆ ಹಣವನ್ನು ಸಿದ್ದರಾಮಯ್ಯ ಪೋಲು ಮಾಡುತ್ತಿದ್ದಾರೆ ಎಂದು ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.

Key words: MLC, H. Vishwanath, Congress government, Sadhana convention