ಯುವನಿಧಿ ಯೋಜನೆಗೆ ಹತ್ತಾರು ನಿಬಂಧನೆಗಳು: ಅರ್ಜಿ ಸಲ್ಲಿಸಲು ಪದವೀಧರರಿಂದ ನೀರಸ ಪ್ರತಿಕ್ರಿಯೆ.

ಮೈಸೂರು ,ಡಿಸೆಂಬರ್,27,2023(www.justkannada.in): ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು ಆದರೆ ಅರ್ಜಿ ಸಲ್ಲಿಕೆಗೆ  ಹತ್ತಾರು ನಿಬಂಧನೆಗಳಿರುವ ಹಿನ್ನೆಲೆ  ಮೈಸೂರಿನಲ್ಲಿ ಪದವೀಧರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಪದವೀಧರರು ಕರ್ನಾಟಕ ಒನ್ ಕೇಂದ್ರದತ್ತ ಸುಳಿಯುತ್ತಿಲ್ಲ. ಅದರ ಬದಲಾಗಿ ಗೃಹಲಕ್ಷ್ಮಿ ತಿದ್ದುಪಡಿ ಸಮಸ್ಯೆ ಹೊತ್ತು ಬರುವವರ ಸಂಖ್ಯೆಯೇ ಹೆಚ್ಚಾಗಿದೆ.

ಯುವನಿಧಿ ಸರ್ಕಾರದ ನಿಬಂಧನೆಗಳ  ಪ್ರಕಾರ ಪದವಿ ಮುಗಿದು 6 ತಿಂಗಳು ಮುಗಿದಿರಬೇಕು ಎನ್ನುವ ನಿಬಂಧನೆ ಇದೆ. ಆದರೆ 2023ರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆಗಿ ಈಗ ಎರಡು ತಿಂಗಳ ಹಿಂದೆ ಮುಗಿದಿದೆ.ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ(ಎನ್ಎಡಿ) ಯಲ್ಲಿ ಪದವೀಧರ ನೋಂದಣಿ ಆಗಿರಬೇಕು. ಕಳೆದ ಆರು ತಿಂಗಳಿಂದ ಯಾವುದೇ ಖಾಸಗಿ, ಅಥವಾ ಸ್ವಯಂ ಉದ್ಯೋಗದಲ್ಲೂ ಇರಬಾರದು ಎಂಬ ನಾನಾ ನಿಬಂಧನೆಗಳಿದ್ದು ಇದು  ಅರ್ಜಿ ಸಲ್ಲಿಕೆಗೆ ತಡೆಯಾಗಿದೆ.

ಹೀಗಾಗಿ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಇತ್ತ ಗೃಹಲಕ್ಷ್ಮಿ ಯೋಜನೆ ಅರ್ಹ ಫಲಾನುಭವಿಗಳಿಗೂ ಹಣ ಬಾರದೆ  ಮಹಿಳೆಯರು ಪರದಾಟ ನಡೆಸುತ್ತಿದ್ದಾರೆ.

ಅಲ್ಲಿ ಇಲ್ಲ ಅಂತ ಸುತ್ತಾಡಿಸುತ್ತಿದ್ದಾರೆ. ಕರ್ನಾಟಕ ಒನ್ ಗೆ ಬಂದಿದ್ದೀವಿ ಈಗ ಪಕ್ಕದ ಗ್ರಾಮ ಪಂಚಾಯತಿ ಕೇಂದ್ರಗಳಿಗೆ ಹೋಗಿ ಅಲ್ಲಿ ತಿದ್ದುಪಡಿ ಮಾಡುತ್ತಾರೆ ಎನ್ನುತ್ತಾರೆ.  ನಾವು ಎಲ್ಲಿ ಅಂತ ಹೋಗೋದು ನಮಗಂತೂ ಸುತ್ತಿ ಸುತ್ತಿ ಸಾಕಾಗೋಗಿದೆ ಎಂದು ಗೃಹಲಕ್ಷ್ಮಿ ಯೋಜನೆ ಸಿಗದೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇತ್ತ ಯುವನಿಧಿಗೂ ಹತ್ತಾರು ನಿಬಂಧನೆಗಳನ್ನಾಕಿದ್ದು,  ಹಾಗಾಗಿ ಅರ್ಜಿ ಸಲ್ಲಿಕೆಗೆ ಪದವೀಧರರು ಸೇವಾ ಸಿಂಧು ಕೇಂದ್ರಗಳತ್ತ ಬರುತ್ತಿಲ್ಲ ಎನ್ನಲಾಗಿದೆ.

Key words: Yuvanidhi scheme-Dismal- response – graduates – apply.