ಯೋಗದಲ್ಲೂ ರಾಜಕಾರಣ! ಮೈಲೇಜ್’ಗಾಗಿ ಪ್ರತಾಪ್ ಸಿಂಹ-ಎಸ್.ಎ.ರಾಮದಾಸ್ ಪೈಪೋಟಿ

ಮೈಸೂರು, ಜೂನ್ 12, 2022 (www.justkannada.in): ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲೂ ರಾಜಕೀಯ ಶುರುವಾಗಿದೆ.

ಕಾರ್ಯಕ್ರಮದ ಮೈಲೇಜ್‌ಗಾಗಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಪೈಪೋಟಿ ಏರ್ಪಟ್ಟಿದೆ. ಇದು ಇಂದು ನಡೆದ ತಾಲೀಮಿನ ವೇಳೆ ಮಾಧ್ಯಮಗಳ ಮುಂದೆಯೇ ಬಹಿರಂಗಗೊಂಡಿದೆ.

ಅರಮನೆ ಆವರಣದಲ್ಲಿ ಯೋಗ ತಾಲೀಮು ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರತಾಪ್ ಸಿಂಹ.  ಪ್ರಧಾನಿಯೊಂದಿಗೆ ಪಾಲ್ಗೊಳ್ಳುವ ಯೋಗಪಟುಗಳ ಸಂಖ್ಯೆ ವಿಚಾರದಲ್ಲಿ ದ್ವಂದ್ವ ಏರ್ಪಟ್ಟಿದೆ.

7ರಿಂದ 8 ಸಾವಿರ ಜನರು ಭಾಗವಹಿಸುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದರೆ ಈ ವೇಳೆ ಮಧೆ ಪ್ರವೇಶಿಸಿದ ರಾಮದಾಸ್ ಈಗಾಗಲೇ 13 ಸಾವಿರ ನೋಂದಣಿ ಆಗಿದೆ ಎಂದು ಹೇಳಿದರು.

“ನಾನು ಮಾತನಾಡುತ್ತಿದ್ದೇನೆ, ರಾಮದಾಸ್‌ಜೀ ಸುಮ್ಮನಿರಬೇಕು” ಎಂದು ಪ್ರತಾಪ್ ಸಿಂಹ ಸಿಡಿಮಿಡಿಗೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದಾಸ್, ‘ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಸ್ಪಷ್ಟನೆ ವಿವರಣೆ ನೀಡಲು ಯತ್ನಿಸಿದೆ.  ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡಿದರು.