ಅಪಘಾತದಲ್ಲಿ ನವವಿವಾಹಿತೆ ಬಲಿ: ಮೊಮ್ಮಗಳ ಸಾವಿನ ಸುದ್ದಿ ಕೇಳಿ ಅಜ್ಜಿಯೂ ಮೃತ

ಬೆಂಗಳೂರು,ಆಗಸ್ಟ್,9,2025 (www.justkannada.in):  ವರಮಹಾಲಕ್ಷ್ಮಿ ಹಬ್ಬದಂದು ನಾದಿನಿ ಮನೆಗೆ ಕುಂಕುಮಕ್ಕೆಂದು  ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಬೈಕ್ ಗೆ ಲಾರಿ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

ಲಗ್ಗೆರೆ ನಿವಾಸಿ ಗೀತಾ (23) ಮೃತ ಮಹಿಳೆ. ಮೊಮ್ಮಗಳ ಸಾವಿನ ಸುದ್ದಿ ಕೇಳಿ  ಆಘಾತದಿಂದ ಗೀತಾ ಅವರ ಅಜ್ಜಿ ಠಾಕಮ್ಮ ಅವರೂ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಗೀತಾ ಪತಿ ಸುನೀಲ್ ​ಗೆ ಗಾಯಗಳಾಗಿವೆ.

ದಂಪತಿ ಕಳೆದ 3 ತಿಂಗಳ ಹಿಂದೆ ಮದುವೆಯಾಗಿದ್ದು,  ಲಗ್ಗೆರೆ ಬಳಿ 1 ವಾರದ‌ ಹಿಂದಷ್ಟೇ ಮನೆ ಮಾಡಿಕೊಂಡಿದ್ದರು. ಕಳೆದ ಭಾನುವಾರ ಹಾಲು ಉಕ್ಕಿಸಿದ್ದ ಪತಿ-ಪತ್ನಿ ಸಂಭ್ರಮಿಸಿದ್ದರು. ವರಮಹಾಲಕ್ಷ್ಮೀ ಹಬ್ಬಕ್ಕೆ ತವರು ಮನೆಗೆಂದು ಪತ್ನಿಯನ್ನ ಚಂದ್ರ ಲೇಔಟ್​ನಲ್ಲಿರುವ ಅವರ ಅಮ್ಮನ ಮನೆಗೆ ಪತಿ ಕರೆತಂದಿದ್ದರು.

ಈ ನಡುವೆ  ಹಬ್ಬದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ನಾದಿನಿ ಮನೆಗೆ ಕುಂಕುಮಕ್ಕಾಗಿ ಹೋಗುತ್ತಿದ್ದರು. ಈ ವೇಳೆ ಲಗ್ಗೆರೆ ಬಳಿ ಲಾರಿ ಡಿಕ್ಕಿಯಾಗಿ  ತಲೆಗೆ ಗಂಭೀರ ಗಾಯವಾದ ಕಾರಣ ಪತ್ನಿ ಗೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

Key words: Woman, dies, accident, Bangalore