ರಷ್ಯಾದಲ್ಲಿ ಕರ್ನಾಟಕದ ಯುವಕರನ್ನ ಯುದ್ದಕ್ಕೆ ಬಳಕೆ : ರಕ್ಷಣೆಗೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ.

ಬೆಂಗಳೂರು, ಫೆಬ್ರವರಿ,22,2024(www.justkannada.in):   ಉದ್ಯೋಗದ ಹೆಸರಿನಲ್ಲಿ ಕರೆಸಿಕೊಂಡು ನಮ್ಮ ರಾಜ್ಯದ ಕಲಬುರಗಿ ಜಿಲ್ಲೆಯ ಯುವಕರನ್ನು ರಷ್ಯಾದಲ್ಲಿ ಯುದ್ಧಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ವಿದೇಶದಲ್ಲಿ ಕೆಲಸ ಮಾಡುವ ಆಸೆಯಿಂದ ಏಜೆಂಟ್​ ಮೂಲಕ ರಷ್ಯಾಗೆ ತೆರಳಿದ ಕಲಬುರಗಿ ಮೂಲದ ಮೂರು ಯುವಕರನ್ನು ಅಲ್ಲಿ ಯುದ್ಧಕ್ಕೆ ಬಳಕೆ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ,  ನಮ್ಮ ಜಿಲ್ಲಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿ ಇದೆ. ರಷ್ಯಾ ಸೇನೆ ಅಮಾಯಕ ಯುವಕರನ್ನು ಯುದ್ಧಕ್ಕೆ ಬಳಸಿದ ಮಾಹಿತಿ ಇದೆ. ರಷ್ಯಾದಲ್ಲಿ ನಮ್ಮ ಯುವಕರನ್ನು ಸೇನೆಗೆ ಬಳಸಿಕೊಂಡ ಮಾಹಿತಿ ನಮ್ಮ ಜಿಲ್ಲಾಧಿಕಾರಿ ನೀಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ, ಉತ್ತರಭಾರತದ ಯುವಕರು ಸಿಲುಕಿರುವ ಮಾಹಿತಿ ಇದೆ. ಈ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಮನಕ್ಕೆ ತಂದಿದ್ದು, ವಿದೇಶಾಂಗ ಸಚಿವರ ಜೊತೆ ಮಾತನಾಡುವಂತೆ ಮನವಿ ಮಾಡಿದ್ದೇನೆ  ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಉತ್ತರ ಭಾರತದಲ್ಲಿ ಇಂಥದ್ದು ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಅವರನ್ನ ರಕ್ಷಣೆ ಮಾಡಬೇಕಿದೆ ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

Key words: Use –Karnataka- youth – war – Russia-minister -Priyank Kharge