ಸಿಜೆಪಿ ಜೊತೆ ಕೇಂದ್ರ ಸಚಿವರ ಸಭೆ:ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ನಾಳೆ ನಿಲುವು ಪ್ರಕಟ

ನವದೆಹಲಿ, ಜುಲೈ, 24.2026 (www.justkannada.in): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ತೀವ್ರ ಆಗ್ರಹ ಕೇಳಿ ಬಂದಿದ್ದು ಇಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಪ್ರತಿನಿಧಿಗಳ ಜೊತೆ ಕೇಂದ್ರ ಸಚಿವರಿಬ್ಬರು ಸಭೆ ನಡೆಸಿ ಚರ್ಚಿಸಿದ್ದಾರೆ.

ಇಂದು   ‘ಕಾನ್​ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ದಲ್ಲಿ ಸಭೆ ನಡೆದಿದ್ದು,  ಸರ್ಕಾರದ ಪರವಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಭಾಗವಹಿಸಿದ್ದರು.  ಸಿಜೆಪಿ ಪರವಾಗಿ ರಾಷ್ಟ್ರೀಯ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಪಾಲ್ಗೊಂಡಿದ್ದರು.

ಇನ್ನು ಸಭೆಯಲ್ಲಿ ಕೇಂದ್ರ ಸಚಿವರ ಎದುರ ಸಿಜೆಪಿ ಮೂರು ಬೇಡಿಕೆ ಇಟ್ಟಿತು.  ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಜೀನಾಮೆ ನೀಡಬೇಕು.  ಮೃತ ವಿಧ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ. ವಿದ್ಯಾರ್ಥಿಗಳ ಮೇಲಿನ  ಎಫ್ ಐಆರ್ ರದ್ದುಗೋಳಿಸಬೇಕು ಎಂದು ಬೇಡಿಕೆ ಇಟ್ಟರು.  ಈ ಮಧ್ಯೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕುರಿತು ನಾಳೆ ಮಧ್ಯಾಹ್ನ ತಮ್ಮ ನಿಲುವು ತಿಳಿಸುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ ಎನ್ನಲಾಗಿದೆ.

ಸಭೆ ಬಳಿಕ ಈ ಕುರಿತು ಮಾತನಾಡಿದ ಸಿಜೆಪಿ ನಾಯಕ ಅಶುತೋಷ್ ರಾಂಕಾ,  “ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಾಳೆ ಮಧ್ಯಾಹ್ನದವರೆಗೆ ಸಮಯ ಕೇಳಿದೆ. ಸರ್ಕಾರ ಅವರನ್ನು ಶೀಘ್ರದಲ್ಲೇ ಹುದ್ದೆಯಿಂದ ತೆಗೆದುಹಾಕುತ್ತದೆ ಎಂಬ ಭರವಸೆ ನಮಗಿದೆ. ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಒದಗಿಸುವುದು ಮತ್ತು ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಾಗೂ ಕಾನೂನು ಪ್ರಕರಣಗಳನ್ನು ಹಿಂಪಡೆಯುವ ಎರಡು ಬೇಡಿಕೆಗಳಿಗೆ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ” ಎಂದು ಹೇಳಿದ್ದಾರೆ.

Key words: Union Ministers, meeting, CJP, Dharmendra Pradhan, resignation