ಊಟದ ಬಳಿಕ ಮಾವಿನ ಹಣ್ಣು ತಿಂದು ಇಬ್ಬರು ಬಾಲಕಿಯರು ಸಾವು

ಬೀದರ್,ಜೂನ್,12,2026 (www.justkannada.in): ಊಟದ ಬಳಿಕ ಮಾವಿನ ಹಣ್ಣು ತಿಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಸಹೋದರಿಯರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ  ಔರಾದ್ ತಾಲೂಕಿನ ಶೆಂಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭವಾನಿ ವೈಜಿನಾಥ್ ಮೇತ್ರೆ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟ ಬಾಲಕಿಯರು. ಶೆಂಬಳ್ಳಿ ಗ್ರಾಮದ ಇಂದುಮತಿ ಹಾಗೂ ಅವರ ಮೂವರು ಹೆಣ್ಣುಮಕ್ಕಳು ಮನೆಯಲ್ಲಿ ರಾತ್ರಿ ಊಟ  ಮಾಡಿದ ಬಳಿಕ ಮಾವಿನ ಹಣ್ಣು ತಿಂದಿದ್ದಾರೆ. ಮಾವಿನ ಹಣ್ಣು ತಿಂದ ಕೆಲವೇ ಸಮಯದಲ್ಲಿ ತಾಯಿ ಹಾಗೂ ಮೂವರು ಹೆಣ್ಣುಮಕ್ಕಳಲ್ಲಿ ತೀವ್ರ ವಾಂತಿ ಮತ್ತು ಭೇದಿಯಾಗಿದೆ. ತಕ್ಷಣವೇ ಎಲ್ಲರನ್ನೂ ಹೈದರಾಬಾದ್ ನ  ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭವಾನಿ ಮತ್ತು ಸಂಧ್ಯಾರಾಣಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಸಹೋದರಿ ವಿಜಯಶ್ರೀ ಹಾಗೂ ತಾಯಿ ಇಂದುಮತಿ ಅವರ ಸ್ಥಿತಿಯೂ ಗಂಭೀರವಾಗಿದ್ದು, ಸದ್ಯ ಹೈದರಾಬಾದ್ ನ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.

Key words: bidar, Two girls, die, eating, mango , dinner