ಮೈಸೂರು, ಜುಲೈ, 27,2026 (www.justkannada.in): ಕ್ರೀಡಾ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿನಿಯರು ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸಾವಿರಾರು ಯುವ ಜನರಿಗೆ ಮಾದರಿಯಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್ ಅನುಚೇತ್ ಅವರು ತಿಳಿಸಿದರು.
ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿನಿಲಯಕ್ಕೆ ಎಂ.ಎನ್ ಅನುಚೇತ್ ಇಂದು ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ವಸತಿನಿಲಯಗಳಲ್ಲಿ ದೊರಕುತ್ತಿರುವ ಆಹಾರ, ತರಬೇತಿ ಹಾಗೂ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು. ವಿದ್ಯಾರ್ಥಿನಿಯರೊಂದಿಗೆ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು.
ವಸತಿ ನಿಲಯದಲ್ಲಿ ಸರ್ಕಾರ ನಿಗಧಿಪಡಿಸಿರುವ ರೀತಿ ಪ್ರತಿದಿನ ಉಪಹಾರ ಹಾಗೂ ಊಟದ ವ್ಯವಸ್ಥೆ ಇರಬೇಕು, ಕ್ರೀಡೆಯಲ್ಲಿ ಭಾಗವಹಿಸಲು ಊಟ ಹಾಗೂ ತರಬೇತಿ ಎರಡು ಮುಖ್ಯ ಅಂಶವಾಗಿರುತ್ತದೆ. ಯಾವುದೇ ರೀತಿಯ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಕ್ರೀಡಾ ವೈಜ್ಞಾನಿಕ ತರಬೇತಿ ಕೇಂದ್ರವನ್ನು ಸದುಪಯೋಗಪಡಿಸಿಕೊಳ್ಳಿ
ಕ್ರೀಡಾ ವಿಜ್ಞಾನ ಕ್ರೀಡಾಪಟುಗಳು ಅವರು ಆಯ್ಕೆ ಮಾಡುವ ಕ್ರೀಡೆಯಲ್ಲಿ ಅವರ ದೇಹವನ್ನು ಹೆಚ್ಚು ಶಕ್ತಿಶಾಲಿ ಮಾಡುವ ರೀತಿ ಉಪಯುಕ್ತವಾಗಿದೆ. ಕ್ರೀಡಾ ವೈಜ್ಞಾನಿಕ ತರಬೇತಿ ಕೇಂದ್ರದಲ್ಲಿ ಕ್ರೀಡಾಪಟುಗಳನ್ನು ಅವರ ಕ್ರೀಡೆಯ ಆಧಾರದ ಮೇಲೆ ಪರೀಕ್ಷಿಸಿ ಅವರ ದೇಹದ ಯಾವ ಭಾಗಕ್ಕೆ ಹೆಚ್ಚಿನ ವ್ಯಾಯಮ ಬೇಕು ಎಂಬುದನ್ನು ತಿಳಿದುಕೊಂಡು 3 ತಿಂಗಳ ಕಾಲ ತರಬೇತಿ ನೀಡಿ ಅವರ ದೇಹವನ್ನು ಬಲಿಷ್ಠಗೊಳಿಸುತ್ತದೆ. ಕ್ರೀಡಾ ವೈಜ್ಞಾನಿಕ ಕೇಂದ್ರವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಹೆಚ್ ಸೇರಿದಂತೆ ಕ್ರೀಡಾ ತರಬೇತಿದಾರರು ಉಪಸ್ಥಿತರಿದ್ದರು.
Key words: Sportspersons, role models, young people, M.N. Anucheth






