ನಾಳೆ ಬೆಂಗಳೂರಿನಲ್ಲಿ ಯು.ಪಿ.ಎ ಕೂಟಗಳ 2ನೇ ಸುತ್ತಿನ ಮಹತ್ವದ ಸಭೆ

ಮೈಸೂರು, ಜುಲೈ 16, 2023 (www.justkannada.in): ನಾಳೆ ಬೆಂಗಳೂರಿನಲ್ಲಿ ಯು.ಪಿ.ಎ ಕೂಟಗಳ ಎರಡನೆ ಸುತ್ತಿನ ಸಭೆ ನಡೆಯಲಿದೆ.

ಬಿಹಾರದಲ್ಲಿ ನಡೆದಂತೆ ರಾಜ್ಯದಲ್ಲಿ ಎರಡು ದಿನಗಳ ಕಾಲ ವಿಪಕ್ಷಗಳ ಮಹತ್ವದ ಸಭೆ ನಡೆಯಲಿದ್ದು, ಭಾರಿ ಕುತೂಹಲ ಮೂಡಿಸಿದೆ.

ಕೇಂದ್ರದಲ್ಲಿ ಆಡಳಿತ ರೂಡ ಬಿಜೆಯನ್ನ  ಕಟ್ಟಿಹಾಕಲು ಒಗ್ಗಟ್ಟಿನ ಮಂತ್ರ ಜಪಿಸಲಾಗತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ  ಎನ್.ಡಿ.ಎ ಕೂಟವನ್ನ ಮಣಿಸಲು ಯು.ಪಿ.ಎ ರಣತಂತ್ರ ರೂಪಿಸುತ್ತಿದೆ. ಬೆಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಮಹತ್ವದ ಸಭೆ ನಡೆಯಲಿದ್ದು, ಸಾಕಷ್ಟು ಗಮನ ಸೆಳೆಯುತ್ತಿದೆ.

ಯುಪಿಎ ಕೂಟದ 24 ಕ್ಕೂ ಹೆಚ್ಚು ಮಿತ್ರಪಕ್ಷಗಳ ಮುಖಂಡರು ಭಾಗಿ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಗೆ ಕರ್ನಾಟಕದಿಂದಲೇ ರಣಕಹಳೆ ಹೂಡಲು ರಾಹುಲ್ ಗಾಂಧಿ ಸಿದ್ಧರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬಗ್ಗು ಬಡಿಯಲು ರೂಪರೇಷೆ ಸಿದ್ದಪಡಿಸಲು ಯುಪಿಎ ಮೈತ್ರಿ ಪಕ್ಷಗಳು ಮುಂದಾಗಿವೆ.

ಬೆಂಗಳೂರಿನ  ತಾಜ್ ವೆಸ್ಟ್ ಹೋಟಲ್ ನಲ್ಲಿ ನಡೆಯುವ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವು ಯುಪಿಎ ಮುಖಂಡರು ಭಾಗಿಯಾಲಿದ್ದಾರೆ. ಇತ್ತ ಯು.ಪಿ.ಎ ಮೈತ್ರಿಗೆ ಸೆಡ್ಡು ಹೊಡೆಯಲು ಎನ್‌.ಡಿ.ಎ ಪ್ರತಿತಂತ್ರ ರೂಪಿಸುತ್ತಿದೆ.

ಜುಲೈ 18 ರಂದು ಎನ್.ಡಿ.ಎ ಮೈತ್ರಿ ಪಕ್ಷಗಳಿಂದಲೂ ಸಭೆ ನಡೆಯಲಿದೆ. ಯುಪಿಎ ತಂತ್ರಕ್ಕೆ ಪ್ರತಿತಂತ್ರಕ್ಕೆ  ಎನ್.ಡಿ.ಎ. ಮುಂದಾಗಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟಗಳ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕರೆ ನೀಡಿದ್ದಾರೆ. ವಿಪಕ್ಷಗಳು ಒಂದಾಗುತ್ತಿರುವ ಬೆನ್ನಲ್ಲೇ ಎನ್.ಡಿ.ಎ. ಅಲರ್ಟ್ ಆಗಿದ್ದು, ಎನ್.ಡಿ.ಎ ಮೈತ್ರಿ ಪಕ್ಷಗಳ ಮುಖಂಡರಿಗೆ ಸಭೆಗೆ ಆಹ್ವಾನಿಸಲಾಗಿದೆ.

ಲೋಕಸಭೆ ಚುನಾವಣೆ ಗೆಲ್ಲಲು ಯುಪಿಎ,ಎನ್‌ಡಿಎ ಭರ್ಜರಿ ತಯಾರಿ ನಡೆಸುತ್ತಿವೆ. ಜಂಗಿಕುಸ್ತಿಗೆ ಯು.ಪಿ.ಎ ಮತ್ತು ಎನ್.ಡಿ.ಎ ಉಭಯ ಕೂಟಗಳು ರೆಡಿಯಾಗುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಯ ಗೆಲುವು ಯಾರ ತೆಕ್ಕೆಗೆ ಎಂಬ ಕುತೂಹಲದಲ್ಲಿ ದೇಶದ ಜನತೆ ಇದ್ದಾರೆ.