ಮೂರೇ ದಿನಗಳಲ್ಲಿ ಕಬ್ಬು ಬೆಳೆಗಾರರ 26.26 ಕೋಟಿ ಬಾಕಿ ಹಣ ಸರ್ಕಾರಕ್ಕೆ ಜಮೆ- ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ.

ಬೆಂಗಳೂರು,ಅಕ್ಟೋಬರ್ ,5,2021(www.justkannada.in):  ನಾನು ಸಚಿವನಾದ ಬಳಿಕ ಸಭೆ ನಡೆಸಿ ಕಬ್ಬುಬೆಳೆಗಾರರ ಬಾಕಿ ಹಣವನ್ನ ನೀಡುವಂತೆ ಮಾಲೀಕರಿಗೆ ಸೂಚನೆ ನೀಡಿದ್ಧೆ. 3 ದಿನಗಳ ಒಳಗೆ 26.26 ಕೋಟಿ ಹಣ ಸರ್ಕಾರಕ್ಕೆ ತುಂಬಿದ್ದಾರೆ ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ,  ಕಬ್ಬು ಬೆಳೆಗಾರರಿಗೆ ದುಡ್ಡು ಕೊಡಲಿಲ್ಲ ಅಂತ ನೋವಿತ್ತು. ನಾನು ಸಚಿವ ಆದ ಮೇಲೆ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಸಭೆ ಮಾಡಿದ್ದೇನೆ. ಎಲ್ಲಾ ಕಾರ್ಖಾನೆ ಮಾಲೀಕರ ಜತೆ ಸಭೆ ಮಾಡಿ  ಬಾಕಿ ಹಣ ನೀಡುವಂತೆ ಸೂಚನೆ ನೀಡಿದ್ದೆ. ಕಬ್ಬುಬೆಳೆಗಾರರಗೆ ಒಟ್ಟು 47.17 ಕೋಟಿ ಬಾಕಿ ಇತ್ತು. ಇದೀಗ 3 ದಿನಗಳ ಒಳಗೆ 26.26 ಕೋಟಿ ಹಣ ಸರ್ಕಾರಕ್ಕೆ ತುಂಬಿದ್ದಾರೆ. ಇನ್ನು 15.91 ಕೋಟಿ ಮಾತ್ರ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು. ಬಸವೇಶ್ವರ ಶುಗರ್, ಕೋರ್ ಬೀನ್ ಶುಗರ್ಸ್ ಬಾಕಿ ಹಣ ಕೊಟ್ಟಿಲ್ಲ.  ಹೀಗಾಗಿ ಎರಡು ಕಾರ್ಖಾನೆಗೆ ರಿಕವರಿ ನೊಟೀಸ್ ನೀಡಿದ್ದೇವೆ. ಆದಷ್ಟು ಬೇಗ ಅವ್ರು ಕೂಡಾ ಬಾಕಿ ಹಣ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಕ್ರಮವಹಿಸುತ್ತೇವೆ ಎಂದು ತಿಳಿಸಿದರು.

2020-21 ನೇ ಸಾಲಿನಲ್ಲಿ ಮಾತ್ರ ಹಣ ಬಾಕಿ ಇತ್ತು. 2020 ಹಿಂದಿನ ಯಾವುದೇ ಕಾರ್ಖಾನೆ ಬಾಕಿ ಉಳಿಸಿಕೊಂಡಿಲ್ಲ. ರೈತ ಕಬ್ಬು ಕೊಟ್ಟಾಗ ಕಾರ್ಖಾನೆಗಳು ಹಣ ಕೊಡಬೇಕು. ರೈತರ ಹಿತ ಕಾಪಾಡೋದು ನಮ್ಮ ಸರ್ಕಾರದ ಉದ್ದೇಶ ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು.

ಕಬ್ಬು ದರ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಈ ಬಗ್ಗೆ ಕೇಂದ್ರದ ಮಂತ್ರಿಗಳ ಜತೆ ಎರಡು ಬಾರಿ ಭೇಟಿಯಾಗಿ ಮಾತಾಡಿದ್ದೇನೆ. ಈ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡಿ ಹೆಚ್ವಳ ಬಗ್ಗೆ ನಿರ್ಧಾರ  ಮಾಡುತ್ತೇವೆ ಎಂದು ನುಡಿದರು.

ರೈತರ ಪ್ರತಿಭಟನೆ ವಿಚಾರ ಸಂಬಂಧ ನಾವು ರೈತರ ಪ್ರತಿಭಟನೆಯನ್ನ ನಾವು  ಹತ್ತಿಕ್ಕುವುದಿಲ್ಲ. ಅವರು ಅವರ ಬೇಡಿಕೆ ಕೇಳೋದು ತಪ್ಪಲ್ಲ. ವಿಧಾನಸೌಧದಕ್ಕೆ ಬಂದರೆ ನಾನೇ ಸರ್ಕಾರ ಪರ ಹೋಗಿ ಮನವಿ ಸ್ವೀಕಾರ  ಮಾಡುತ್ತೇನೆ. ರೈತರ ಪರ ಈ ಸರ್ಕಾರ ಇದೆ. ಅವ್ರಿಗೆ ಅನುಕೂಲ ಮಾಡಿಕೊಡೋದು ನಮ್ಮ ಸರ್ಕಾರದ ಆದ್ಯತೆ ಎಂದು ಸಚಿವರು ತಿಳಿಸಿದರು.

ಇನ್ಮುಂದೆ ರಾಜ್ಯದಲ್ಲಿ ಏಕ ಕಾಲಕ್ಕೆ ಕಬ್ಬಿನ ಕಾರ್ಖಾನೆ ಪ್ರಾರಂಭ ಮಾಡಬೇಕು…

ಇನ್ಮುಂದೆ ರಾಜ್ಯದಲ್ಲಿ ಏಕ ಕಾಲಕ್ಕೆ ಕಬ್ಬಿನ ಕಾರ್ಖಾನೆ ಪ್ರಾರಂಭ ಮಾಡಬೇಕು. ಈ‌ ಬಗ್ಗೆ ಈಗಾಗಲೇ  ಎಲ್ಲಾ ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಮಾತಾಡಿದ್ದೇನೆ. ಕೆಲವರು ತಮಗೆ ಬೇಕಾದ ಸಮಯದಲ್ಲಿ ಕಾರ್ಖಾನೆ ಪ್ರಾರಂಭ ಮಾಡ್ತಾರೆ. ಇದರಿಂದ ಅನೇಕ ಸಮಸ್ಯೆ  ಆಗುತ್ತಿದೆ. ಹೀಗಾಗಿ ಎಲ್ಲಾ ಕಾರ್ಖಾನೆಗಳಿಗೆ ಏಕ ಕಾಲಕ್ಕೆ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಮತ್ತೊಂದು ಸಭೆ ಮಾಡಿ ಈ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ತಿಳಿಸಿದರು.

ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗೋದು ಬೇಡ.

ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗೋದು ಬೇಡ. ಇಂದು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡ್ತೇನೆ. ರೈತರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆ ಪರಿಹರಿಸುವ ಕೆಲಸ  ಮಾಡುತ್ತೇನೆ. ಎಫ್ ಆರ್ ಪಿ ದರ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಬೇಕಾಗುತ್ತದೆ. ನಾನು ಸಚಿವನಾದ ಮೇಲೆ ಎರಡು ಬಾರಿ ಕೇಂದ್ರ ಸಕ್ಕರೆ ಸಚಿವರೊಂದಿಗೆ ಮಾತುಕತೆ ಮಾಡಿದ್ದೇನೆ. ನಾನು ಸಚಿವನಾದ ಮೇಲೆ ಮೊದಲ ಹೆಜ್ಜೆ ಇಟ್ಟಿದ್ದೇನೆ, ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ಸರ್ಕಾರ ನೊಟೀಸ್ ಕೊಟ್ಟ ಮೇಲೆ 5 ಫ್ಯಾಕ್ಟರಿ ಗಳು ಬಾಕಿ ಹಣ ಪೂರ್ತಿ ನೀಡಿವೆ. ಸಕ್ಕರೆ ಉದ್ಯಮ ನಷ್ಟದಲ್ಲೇನೂ ಇಲ್ಲ ಈಗ ಎಂದು ಮಾಹಿತಿ ನೀಡಿದರು.

ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ರೈತರ ಹಿತ ಕಾಪಾಡಲು ಸಿದ್ಧ.

ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ರೈತರ ಹಿತ ಕಾಪಾಡುತ್ತೇವೆ. ಕೆಲವರಿಗೆ ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಪ್ರತಿಷ್ಟೆಗೆ ಬಿದ್ದಿದ್ದಾರೆ. ಕೆಲವರು ಖಾಸಗಿಯವರಿಗೆ ಕೊಡಿ ಅಂತ ಒತ್ತಾಯ ಮಾಡಿದ್ದಾರೆ. ಮತ್ತೆ ಕೆಲವರು ಸರ್ಕಾರವೇ ನಡೆಸಲಿ ಅಂತ ಒತ್ತಾಯ ಮಾಡಿದ್ದಾರೆ. ಇದುವರೆಗೆ ಮೈಶುಗರ್ ಸಕ್ಕರೆ ಕಾರ್ಖಾನೆಗೆ 550 ರೂ.  ಕೋಟಿ ಹಣ ನೀಡಲಾಗಿದೆ.ಅದೆಲ್ಲ ಲೆಕ್ಕ ಬರಬೇಕು. ಕ್ಯಾಬಿನೆಟ್ ನಲ್ಲಿ ಇಟ್ಟು ಚರ್ಚೆ ಮಾಡಿ ನಿರ್ಧಾರ ಮಾಡಬೇಕಿದೆ. ಕೆಲವು ಆಂತರಿಕ ವಿಚಾರ ಚರ್ಚೆ ಮಾಡಿ ಮುಂದೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಬೇಕಿದೆ. ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಸಿಎಂಗಳು ಹಣ ನೀಡಿದ್ದಾರೆ. ಆದರೂ ರೈತರ ಹಿತಕ್ಕಾಗಿ ನಾವು ಕೆಲಸ ಮಾಡ್ತೀವಿ. ಕೆಲ ರಾಜಕೀಯ ನಾಯಕರು ಪ್ರತಿಷ್ಠೆಗೆ ಬಿದ್ದಿದ್ದಾರೆ. ಇದನ್ನ ಮೊದಲು ಬಿಡಬೇಕು. ಶೀಘ್ರವೇ ಸಿಎಂ ಜೊತೆ ಸಭೆ ಮಾಡಿ ಈ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಸಚಿವ ಶಂಕರಪಾಟೀಲ್ ಮುನೇನಕೊಪ್ಪ ತಿಳಿಸಿದರು.

Key words: Sugarcane -growers – Rs 26.26 crore – government -three days-Minister -Shankara Patil munenakoppa