ಇಡೀ ದೇಶದ ಜನರ ಮತ್ತು ಪಕ್ಷದ ಕಾರ್ಯಕರ್ತರ ಭರವಸೆಯನ್ನು ರಾಜ್ಯದ ಫಲಿತಾಂಶ ಹೆಚ್ಚಿಸಿದೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್,14,2023(www.justkannada.in):  ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶದ ಜನರ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್  ಕಾರ್ಯಕರ್ತರ ಭರವಸೆಯನ್ನು ಹೆಚ್ಚಿಸಿ ಸಂಚಲನ ಮೂಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕೆಪಿಸಿಸಿ ಕಚೇರಿಯ ಇಂದಿರಾಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ಕಡೆ RSS ಹಿಡನ್ ಅಜೆಂಡಾ ಜಾರಿಗೊಳಿಸುತ್ತಾ ಮತ್ತೊಂದು ಕಡೆ ಬೆಲೆ ಏರಿಕೆ, ಹಣದುಬ್ಬರ, ಭ್ರಷ್ಟಾಚಾರ, ದುರಾಡಳಿತದಿಂದ ನಾಡಿನ, ದೇಶದ ಜನತೆಯನ್ನು ವಿಪರೀತ ಸಂಕಷ್ಟಕ್ಕೆ ಸಿಲುಕಿಸಿದ್ದರು. ನಾಡಿನ ಜನ ಈ ಎಲ್ಲಾ ದುಷ್ಟಾಚಾರವನ್ನು ಸಮರ್ಥವಾಗಿ ಧಿಕ್ಕರಿಸಿ ಸೋಲಿಸಿದ್ದಾರೆ ಎಂದರು.

ಮನುಸ್ಮೃತಿಯ ಜಾತಿ ಆಧಾರಿತ ಶೋಷಿತ ನ್ಯಾಯಪದ್ಧತಿಯನ್ನು ಜಾರಿಗೆ ತರುವ ಮನಸ್ಥಿತಿಯವರು ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಾ ಸಂವಿಧಾನವನ್ನು ಮುಗಿಸಲು ಯತ್ನಿಸುತ್ತಿದ್ದಾರೆ.

ಸಂವಿಧಾನ ಬದಲಾವಣೆ ಆದರೆ ದೇಶದ ಶೇ 90 ಕ್ಕೂ ಹೆಚ್ಚು ಸಂಖ್ಯೆಯ ಜನರ ದುಡಿಯುವ ಮತ್ತು ಬದುಕಿನ ಅವಕಾಶಗಳು ನಾಶವಾಗುತ್ತದೆ. ಆದ್ದರಿಂದ ಸಂವಿಧಾನವನ್ನು ಉಳಿಸಿ ದೇಶದ ದುಡಿಯುವ ಜನ ವರ್ಗಗಳ ಬದುಕಿನ ಅವಕಾಶಗಳನ್ನು ಕಾಪಾಡುವ ಬಹಳ ದೊಡ್ಡ ಜವಾಬ್ದಾರಿ ದೇಶದ ಜನರ ಮೇಲಿದೆ. ಕಾಂಗ್ರೆಸ್ ಗೆ ನಾಡಿನ ಮತ್ತು ದೇಶದ ದುಡಿಯುವ ವರ್ಗಗಳು ಈ ಜವಾಬ್ದಾರಿಯನ್ನು ನೀಡಿದ್ದಾರೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಜನರ ಜೇಬಿನಲ್ಲಿರುವ ಹಣವನ್ನು ಕಿತ್ತು ಸಾವಿರಾರು ಕೋಟಿ ಒಡೆಯರಾಗಿರುವ ಶ್ರೀಮಂತರಿಗೆ ನೀಡುವುದು ಅವರ ಆರ್ಥಿಕತೆ. ನಮ್ಮ ರಾಜ್ಯಕ್ಕೆ ಬರಬೇಕಾದ ತೆರಿಗೆ ಮತ್ತು ಆರ್ಥಿಕತೆಯ ನೆರವನ್ನೂ ನೀಡದೆ ಇಡಿ ನಾಡಿನ ಜನತೆಗೆ ಬಿಜೆಪಿ ವಂಚಿಸಿದೆ. ಆದರೆ, ನಾವು ಜನರ ಜೇಬಿನಲ್ಲಿ ಹಣ ಉಳಿಯುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಆಯವ್ಯಯವನ್ನು ನಾವು ಮಂಡಿಸಿದ್ದೇವೆ. ಕರ್ನಾಟಕ ಮಾದರಿಯ ಈ ಅಭಿವೃದ್ಧಿಯನ್ನು ದೇಶದ ಎಲ್ಲಾ ರಾಜ್ಯಗಳೂ ಅಧ್ಯಯನ ನಡೆಸಿ ಅಳವಡಿಸಿಕೊಳ್ಳಲು ಮುಂದಾಗಿವೆ. ಇದು ಕರ್ನಾಟಕದ ಜನತೆಗೆ ನಮ್ಮ ಸರ್ಕಾರ ಮತ್ತು ನಮ್ಮ ಪಕ್ಷ ನೀಡಿರುವ ಅಭಿವೃದ್ಧಿಯ ಕೊಡುಗೆ ಎಂದು ಸಿದ್ಧರಾಮಯ್ಯ ತಿಳಿಸಿದರು . .

ರಾಜ್ಯದ ಜನರ ಹಸಿವು ನೀಗಿಸಲು ಅಕ್ಕಿ ಕೊಡಿ ಎಂದರೆ ಕೊಡಲು ಒಪ್ಪದ ಬಿಜೆಪಿಯವರು ಈಗ ಆ ಸಾವಿರಾರು ಟನ್ ಅಕ್ಕಿ ಹಾಳು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕೈಯಲ್ಲಿರುವ ಅಕ್ಕಿಗೆ ಹುಳು ಹಿಡಿಯುತ್ತಿದೆ. ಜನರು ಉಪವಾಸ ಇದ್ದರೂ ಪರ್ವಾಗಿಲ್ಲ, ಅಕ್ಕಿ ಹಾಳಾದರೂ ಪರ್ವಾಗಿಲ್ಲ ಆದರೆ ಹಸಿದವರಿಗೆ ಅಕ್ಕಿ ಕೊಡಬಾರದು ಎನ್ನುವುದು ಬಿಜೆಪಿಯ ಅತ್ಯಂತ ಅನಾಗರಿಕ ಮತ್ತು ಅಮಾನವೀಯ ಮನಸ್ಥಿತಿ ಎಂದು ವ್ಯಂಗ್ಯವಾಡಿದರು.

ಬಿಜೆಪಿಯ ಬೇಳೆಕಾಳು ಗೊತ್ತಾಗ್ತದೆ

ದೇಶದ ಜನ‌ ನೆಮ್ಮದಿಯಾಗಿ, ಸಂತೋಷದಿಂದ ಇದ್ದರೆ ಬಿಜೆಪಿಗೆ ನೆಮ್ಮದಿ ಹಾಳಾಗುತ್ತದೆ. ಹೊಟ್ಟೆಕಿಚ್ಚು ಹೆಚ್ಚಾಗುತ್ತದೆ. ಈಗ ನಾವು ಬಿಜೆಪಿ ಕಾಲದ ಎಲ್ಲಾ ಹಗರಣಗಳು, ಭ್ರಷ್ಟಾಚಾರದ ತನಿಖೆ ಆರಂಭಿಸಿದ್ದೇವೆ. ಸದ್ಯದಲ್ಲೇ ಬಿಜೆಪಿ ಬೇಳೆಕಾಳು ಹೊರಗೆ ಬರುತ್ತದೆ ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.

ಕನಿಷ್ಠ 20 ಲೋಕಸಭಾ ಸ್ಥಾನ ಗೆಲ್ಲುತ್ತೇವೆ.

ವಿಧಾನಸಭಾ ಚುನಾವಣೆ ಬಳಿಕ ನಮ್ಮ ಕಾರ್ಯಕರ್ತರು ರಿಲಾಕ್ಸ್ ಆಗಬಾರದು. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ತೀವಿ ಎಂದು ಹೈಕಮಾಂಡ್ ಗೆ ಭರವಸೆ ನೀಡಿದ್ದೀನಿ. ಇದಕ್ಕೂ ಹೆಚ್ಚು ಸೀಟು ಗೆಲ್ಲುತ್ತೀವಿ ಎಂದರು.

ಉತ್ಪ್ರೇಕ್ಷೆ ಅಲ್ಲ: ಕೇಂದ್ರದಲ್ಲಿ ಬಿಜೆಪಿ ಸೋಲುತ್ತದೆ

ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಹೇಳುತ್ತೇನೆ. 2024 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸೋಲುತ್ತದೆ. ಈ ಪ್ರಧಾನಿ ಮೋದಿ ಪಾರ್ಲಿಮೆಂಟ್ ಗೆ ಸರಿಯಾಗಿ ಹೋಗಲ್ಲ, ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲ್ಲ. ಬರೀ ಮನ್ ಕಿ ಬಾತ್. ಆ ಬಾತ್ ನಲ್ಲೂ ದೇಶದ ಜನ ಇರೋದಿಲ್ಲ ಎಂದರು.

ಹಿಟ್ ಆಂಡ್ ರನ್ ಗಿರಾಕಿ

ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷವನ್ನು ಮರೆತುಬಿಟ್ಟಿದ್ದಾರೆ. ಬಿಜೆಪಿ ವಕ್ತಾರರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರೊಂಥರಾ ಹಿಟ್ ಆಂಡ್ ರನ್ ಗಿರಾಕಿ. ಖಾಲಿ ಪೆನ್ ಡ್ರೈವ್ ಜೇಬಿಂದ ತೆಗೆಯೋದು ಒಳಗಿಟ್ಟುಕೊಂಡು ಹೋಗೋದು. ಇದೇ ಆಗೋಗಿದೆ ಅಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

Key words: State -result – hopes – -people – party workers-CM- Siddaramaiah