ಮೈಸೂರಿನಲ್ಲಿ ಭೀಕರ ಅಪಘಾತ ; ಮೀಸಲು ಪಡೆ ಪೇದೆಗಳಿಬ್ಬರು ದುರ್ಮರಣ.

ಮೈಸೂರು,ಆಗಸ್ಟ್,14,2023(www.justkannada.in): ಭಾನುವಾರ ರಾತ್ರಿ ನಗರದ ಲಲಿತಮಹಲ್ ಹೋಟೆಲ್ ಸಮೀಪದ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ ಇಬ್ಬರು ಪೇದೆಗಳು ಸಾವಿಗೀಡಾಗಿದ ಘಟನೆ ನಡೆದಿದೆ.

ರಾಜ್ಯ ಮೀಸಲು ಪೊಲೀಸ್ ಪಡೆಗೆ ಸೇರಿದ ಮೈಸೂರಿನ 5ನೇ ಬೆಟಾಲಿಯನ್ ನ ಪೇದೆಗಳಾದ ಮೈಸೂರಿನ ಕುಂಬಾರಕೊಪ್ಪಲು ಬಡಾವಣೆ ನಿವಾಸಿ ಪಿ.ಮಹೇಶ್ (23) ಹಾಗೂ ಬಿಜಾಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಮರನಾಥ ತಾಳಿಕೋಟೆ (24) ಮೃತಪಟ್ಟವರು.

ನಗರದ ಸಿದ್ದಾರ್ಥ ಬಡಾವಣೆ ಸಮೀಪದ ಫುಡ್ ಸ್ಟ್ರೀಟ್ ನಲ್ಲಿ ಊಟ ಸೇವಿಸಿದ ಬಳಿಕ ತಮ್ಮ ಪಲ್ಸರ್ ಬೈಕಿನಲ್ಲಿ ಕೆಎಸ್ ಆರ್ ಪಿ ಬೆಟಾಲಿಯನ್ ಕೇಂದ್ರದತ್ತ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಮಹೀಂದ್ರ ಥಾರ್ ವಾಹನ ಪೇದೆಗಳಿದ್ದ ಬೈಕಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಪಲ್ಸರ್ ಬೈಕ್ ಸುಮಾರು ಹತ್ತು ಮೀಟರ್ ದೂರ ಹೋಗಿ ಬಿದ್ದಿದ್ದರೆ, ಇಬ್ಬರೂ ಪೇದೆಗಳು ಮೇಲೆಕ್ಕೆ ಎಗರಿ ನೆಲಕ್ಕೆ ಅಪ್ಪಳಿಸಿದ್ದಾರೆ. ಇದರಿಂದಾಗಿ ಇಬ್ಬರ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.

ಘಟನೆ ಬಳಿಕ ಅಪಘಾತ ನಡೆಸಿದ ಮಹೀಂದ್ರ ಥಾರ್ ವಾಹನ ಸವಾರ ತನ್ನ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಅಷ್ಟರಲ್ಲಿ ಎಚ್ಚೆತ್ತುಕೊಂಡ ಸಾರ್ವಜನಿಕರು ಆತನ‌ ವಾಹನ ಬೆಂಬತ್ತಿ ಆಲನಹಳ್ಳಿ ಸಮೀಪದ ರಿಂಗ್ ರಸ್ತೆ ಬಳಿ ವಾಹನಕ್ಕೆ ಅಡ್ಡಲಾಗಿ ನಿಂತು ತಡೆದು ಆರೋಪಿಯನ್ನು ಹಿಡಿದಿದ್ದಾರೆ.

ನಂತರ ವಿಚಾರ ತಿಳಿದ ಸಿದ್ದಾರ್ಥನಗರ ಸಂಚಾರಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಇಬ್ಬರೂ ಪೇದೆಗಳ ಮರಣೋತ್ತರ ಪರೀಕ್ಷೆ ಸೋಮವಾರ ಬೆಳಗ್ಗೆ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ನಡೆದ ಬಳಿಕ ಸರ್ಕಾರಿ ಗೌರವ ಸಲ್ಲಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಅಮರನಾಥ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಜಮಖಂಡಿಗೆ ಕಳುಹಿಸಲಾಗಿದ್ದು, ಇದಕ್ಕಾಗಿ ಓರ್ವ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿದೆ ಎಂದು ರಾಜ್ಯ ಮೀಸಲು ಪೊಲೀಸ್ ಪಡೆಗೆ 5ನೇ ಬಟಾಲಿಯನ್ ಕಮಾಂಡೆಂಟ್ ಜನಾರ್ದನ್ ತಿಳಿಸಿದ್ದಾರೆ.

ಮಹೇಶ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ನಡೆಯಿತು. ಅಮರನಾಥ್ ತಾಳೀಕೋಟೆ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ.

ಮಹೇಶ್ ಹಾಗೂ ಅಮರನಾಥ ತಾಳಿಕೋಟೆ ಅವರು 2017ನೇ ಬ್ಯಾಚ್ ನವರಾಗಿದ್ದಾರೆ. ಅವರಿಗೆ ಸರ್ಕಾರದಿಂದ ಸಲ್ಲಬೇಕಾದ ಎಲ್ಲಾ ಸವಲತ್ತುಗಳು ತಲುಪಲಿವೆ.‌ ಕುಟುಂಬದ ಒಬ್ಬರಿಗೆ ಉದ್ಯೋಗ, ಕರ್ತವ್ಯ ನಿರತರಾಗಿದ್ದ ವೇಳೆ ಸಂಭವಿಸುವ ಅಪಘಾತದಲ್ಲಿ ಮೃತರಾದರೆ ನೀಡುವ 20 ಲಕ್ಷ ವಿಮೆ ಹಣ, ಸರ್ಕಾರದಿಂದ 25ರಿಂದ 30 ಲಕ್ಷ ರೂಪಾಯಿ ಪರಿಹಾರ, ರಜೆ ಪರಿಹಾರ, ಕೆಜೆಐಡಿ ಹಣ ಅವರ ಪಾಲಿಗೆ ಸಿಗಲಿದೆ ಎಂದು ರಾಜ್ಯ ಮೀಸಲು ಪೊಲೀಸ್ ಪಡೆ  , 5ನೇ ಬೆಟಾಲಿಯನ್ ಕಮಾಂಡೆಂಟ್ ಜನಾರ್ದನ್ ತಿಳಿಸಿದ್ದಾರೆ.

Key words: accident – Mysore-Two -reserve -police -constables -died