ಶಿಗ್ಗಾಂವಿ ಜವಳಿ ಪಾರ್ಕ್ ಹಾಗೂ ‘ಮೆ. ಟೆಕ್ಸ್’ಪೋರ್ಟ್ ಇಂಡಸ್ಟ್ರೀಸ್ ಪ್ರೈ.ಲಿ. ಆಂಕರ್ ಸಿದ್ಧ ಉಡುಪು ಘಟಕಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ.

ಹಾವೇರಿ,ಜುಲೈ,16,2022(www.justkannada.in):  ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಹಾವೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಗ್ಗಾಂವಿ ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ‘ಶಿಗ್ಗಾಂವಿ ಜವಳಿ ಪಾರ್ಕ್’ ಹಾಗೂ ‘ಮೆ. ಟೆಕ್ಸ್’ಪೋರ್ಟ್ ಇಂಡಸ್ಟ್ರೀಸ್ ಪ್ರೈ.ಲಿ. ಆಂಕರ್ ಸಿದ್ಧ ಉಡುಪು ಘಟಕ’ ನಿರ್ಮಾಣಕ್ಕೆ ಇಂದು (ಜು.16) ಶಂಕುಸ್ಥಾಪನೆ ನೆರವೇರಿಸಲಾಯಿತು.

ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, “ಗಾರ್ಮೆಂಟ್‌ ಇಂಡಸ್ಟ್ರಿಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದ್ದು, ಹೆಣ್ಣು ಮಕ್ಕಳ ಏಳ್ಗೆಗೆ ಜವಳಿ ಕೈಗಾರಿಕೆ ಹೆಚ್ಚು ಪೂರಕವಾಗಿದೆ. ಕೇವಲ ಬೆಂಗಳೂರಿನಲ್ಲೇ 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಟೆಕ್ಸ್ಟೈಲ್‌ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಟೆಕ್ಸ್‌ ಟೈಲ್‌ ಪಾರ್ಕ್‌ ಗಳನ್ನು ನಿರ್ಮಾಣ ಮಾಡುವ ಚಿಂತನೆ ನಡೆಸಿದ್ದೇನೆ” ಎಂದರು.

ಟೆಕ್ಸ್‌ ಟೈಲ್‌ ಪಾರ್ಕ್‌ ನಿಂದ ಕನಿಷ್ಠ ಎಂದರೂ 10 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಈ ಯೋಜನೆ ಪೂರಕವಾಗಿದೆ. ರೈತರಿಗೂ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಸಿಎಂ  ಬೊಮ್ಮಾಯಿ ಹೇಳಿದರು.

ಕೈಮಗ್ಗ, ಜವಳಿ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಬ. ಪಾಟೀಲ್ ಮುನೇನಕೊಪ್ಪ ಅವರು ಮಾತನಾಡಿ, “ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕು ಕೈಗಾರಿಕಾ ಬೆಳವಣಿಗೆಗೆ ವಿಫುಲ ಅವಕಾಶ ಹಾಗೂ ಸಾಮರ್ಥ್ಯ ಹೊಂದಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ಹೇರಳವಾಗಿ ಹತ್ತಿ ಉತ್ಪಾದನೆಯಾಗುತ್ತಿದ್ದು, ಜಿನ್ನಿಂಗ್, ನೂಲಿನ ಗಿರಣಿ (ಸ್ಪಿನ್ನಿಂಗ್), ಸಂಸ್ಕರಣಾ, ಪ್ರಿಂಟಿಂಗ್ ಮತ್ತು ಸಿದ್ಧ ಉಡುಪು ಘಟಕಗಳನ್ನು ಸ್ಥಾಪಿಸಬಹುದಾಗಿರುತ್ತದೆ. ಇಲ್ಲಿ ನಿರ್ಮಾಣವಾಗಲಿರುವ ಜವಳಿ ಪಾರ್ಕ್ ನಿಂದ ಸುಮಾರು 5,000 ಜನರಿಗೆ ಉದ್ಯೋಗ ಅವಕಾಶ ದೊರೆಯಲಿದೆ” ಎಂದರು.

ರಾಜ್ಯದಲ್ಲೇ ಪ್ರಥಮ ಬಾರಿಗೆ ಆಂಕರ್ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾಗಲಿದ್ದು, ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಒಡೆತನದಲ್ಲಿರಲಿದೆ. ಇಲ್ಲಿ ಸಿದ್ಧ ಉಡುಪು ಘಟಕಗಳು ಹಾಗೂ ಜವಳಿ ಘಟಕಗಳ ಸ್ಥಾಪನೆಗೆ ಪೂರಕ ಮೂಲಸೌಲಭ್ಯಗಳನ್ನು 2 ಹಂತಗಳಲ್ಲಿ ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅವಶ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಆಂಕರ್ ಪ್ರವರ್ತಕರಾದ ಮೆ. ಟೆಕ್ಸ್ಪೋರ್ಟ್ ಇಂಡಸ್ಟ್ರೀಸ್ ಪ್ರೈ. ಲಿ. 45 ಕೋಟಿ ರೂ. ವೆಚ್ಚದಲ್ಲಿ ಸಿದ್ಧ ಉಡುಪು ಘಟಕವನ್ನು ಸ್ಥಾಪಿಸಿ ಅಂದಾಜು 3,000 ಉದ್ಯೋಗಗಳನ್ನು ನೀಡಲಿದ್ದಾರೆ. ಈ ಪಾರ್ಕ್ ಪೂರ್ಣಗೊಳ್ಳುವ ವೇಳೆಗೆ 200 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 5,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಲಭ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.

“ಜವಳಿ ಕ್ಷೇತ್ರದ ಬೆಳವಣಿಗೆಗಾಗಿ ರಾಜ್ಯ ಸರ್ಕಾರವು ಯಾವಾಗಲೂ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದು, ಸರ್ಕಾರವು ಪ್ರಕಟಿಸಿದ್ದ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ಪ್ರಸ್ತುತ ಜಾರಿಯಲ್ಲಿರುತ್ತದೆ. ಇತ್ತೀಚಿನ ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಎದುರಾದ ಆರ್ಥಿಕ ಸವಾಲನ್ನು ಸಮರ್ಪಕವಾಗಿ ಎದುರಿಸಲು ಹಾಗೂ ಸಮತೋಲನಗೊಳಿಸಲು ಸರ್ಕಾರವು ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಈ ತಿದ್ದುಪಡಿಯಿಂದಾಗಿ, ಜವಳಿ ನೀತಿಯನ್ನು ವಿಸ್ತೃತಗೊಳಿಸುವ ಮೂಲಕ ಜವಳಿ ಹಾಗೂ ಸಿದ್ಧ ಉಡುಪು ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಆ ಮೂಲಕ ಈ ಸಂಕಷ್ಟ ಸಮಯದಲ್ಲಿ ಜವಳಿ ಉದ್ಯಮಕ್ಕೆ ಸಹಾಯ ಹಸ್ತ ಚಾಚಲು ಉದ್ದೇಶಿಸಲಾಗಿದೆ” ಎಂದು ಸಚಿವರು ಹೇಳಿದರು.

ತಿದ್ದುಪಡಿಗಳಲ್ಲಿ – 1. ಬಡ್ಡಿ ಸಹಾಯಧನ ಯೋಜನೆಯನ್ನು ಬೃಹತ್ ಕೈಗಾರಿಕೆಗಳ ಜೊತೆಗೆ ಮದ್ಯಮ ಕೈಗಾರಿಕೆಗಳಿಗೂ ವಿಸ್ತರಿಸುವುದು; 2. ರಿಯಾಯಿತಿ ಹಾಗೂ ಪ್ರೋತ್ಸಾಹಧನಗಳ ಮೇಲಿನ ಮಿತಿಯನ್ನು ಶೇ.100 ರವರೆಗೆ ವಿಸ್ತರಿಸುವುದು; 3. ಜವಳಿ ಪಾರ್ಕ್ ಮೂಲಭೂತ ಸೌಕರ್ಯಗಳಿಗಾಗಿ ಪ್ರತ್ಯೇಕ ಉದ್ಯಮಿಗೆ ಎಸ್.ಪಿ.ವಿ. ಮಾದರಿಯಲ್ಲಿರುವ ಯೋಜನಾ ಮೊತ್ತದ ಮೇಲೆ ಶೇ.40 ಅಥವಾ 40 ಕೋಟಿ ರೂ. ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಒದಗಿಸುವುದು; 4. ಕಲ್ಯಾಣ ಕರ್ನಾಟಕ ಪ್ರದೇಶ ಭಾಗದಲ್ಲಿ ಸ್ಥಾಪಿತವಾಗುವ ಸಿದ್ಧ ಉಡುಪು ಘಟಕಗಳಲ್ಲಿನ ಪ್ರತಿ ಕಾರ್ಮಿಕರಿಗೆ ರೂ.3,000 ಗಳವರೆಗೆ ವೇತನ ಸಹಾಯಧನವನ್ನು ನೀಡುವುದು ಹಾಗೂ ಕಲ್ಯಾಣ ಕರ್ನಾಟಕ ಅಲ್ಲದ ಪ್ರದೇಶಗಳಲ್ಲಿ ಸ್ಥಾಪಿತವಾಗುವ ಸಿದ್ಧ ಉಡುಪು ಘಟಕಗಳಿಗೆ ರೂ.2,000 ಗಳವರೆಗೆ ವೇತನ ಸಹಾಯಧನವನ್ನು ಒದಗಿಸುವುದು.ಒಳಗೊಂಡಿರಲಿದ್ದು, ಇವುಗಳನ್ನು ಈಗಾಗಲೇ ಒದಗಿಸಲಾಗುತ್ತಿರುವ ಸಾಲಾಧಾರಿತ ಬಂಡವಾಳ ಸಹಾಯಧನ, ಜವಳಿ ವಲಯದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರೋತ್ಸಾಹ, ಮುದ್ರಾಂಕ ಶುಲ್ಕ ವಿನಾಯಿತಿ, ಇಎಸ್‌ಐ/ಇಪಿಎಫ್ ಸಹಾಯಧನ ಹಾಗೂ ವಿದ್ಯುಚ್ಛಕ್ತಿ ಮರುಪಾವತಿ ಸಹಾಯಧನಗಳೊಂದಿಗೆ ನೀಡಲಾಗುವುದು ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ವಿವರಿಸಿದರು.

ಸಣ್ಣ ಮತ್ತು ಅತೀ ಸಣ್ಣ (ಎಸ್ ಎಂ ಇ) ಘಟಕಗಳನ್ನು ಪ್ರಾರಂಭಿಸಲು ಉತ್ತೇಜಿಸುವ ಸಲುವಾಗಿ ನೇಕಾರರ ಪ್ಯಾಕೇಜ್‌ ಯೋಜನೆ- ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಗಳಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತೀ ಸಣ್ಣ ಘಟಕಗಳ ಸ್ಥಾಪನೆಗೆ ಸರ್ಕಾರದಿಂದ ಗರಿಷ್ಠ 2 ಕೋಟಿ ರೂ. ಗಳ ಸಹಾಯಧನ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದೂ ಸಚಿವರು ಹೇಳಿದರು.

ಶಿಗ್ಗಾಂವಿ ಜವಳಿ ಪಾರ್ಕ್ ವೈಶಿಷ್ಟ್ಯಗಳು:

ಕೈಮಗ್ಗ ಹಾಗೂ ಜವಳಿ ಇಲಾಖೆಯಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಆಂಕರ್ ಪ್ರವರ್ತಕರ ಮಾದರಿಯಲ್ಲಿ, ಉತ್ಕೃಷ್ಟ ಮೂಲಭೂತ ಸೌಕರ್ಯಗಳ, 59.34 ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಾಣ.

ಸಿದ್ದ ಉಡುಪು ಘಟಕಗಳು ಹಾಗೂ ಜವಳಿ ಘಟಕಗಳ ಸ್ಥಾಪನೆಗೆ ಮೂಲ ಸೌಲಭ್ಯಗಳನ್ನು 2 ಹಂತಗಳಲ್ಲಿ ಕಲ್ಪಿಸಲಾಗುವುದು.

ಮೊದಲ ಹಂತದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಜವಳಿ ಪಾರ್ಕ್ ಅವಶ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ.

ಆಂಕರ್ ಪ್ರವರ್ತಕರಾದ ಮೆ. ಟೆಕ್ಸ್‌ ಪೋರ್ಟ್ ಇಂಡಸ್ಟ್ರೀಸ್ ಪ್ರೈ. ಲಿ. ವತಿಯಿಂದ ರೂ 45 ಕೋಟಿ ವೆಚ್ಚದಲ್ಲಿ ಸಿದ್ಧ ಉಡುಪು ಘಟಕದ ಸ್ಥಾಪನೆ, 3,000 ಉದ್ಯೋಗ ಸೃಷ್ಟಿ.

ಪಾರ್ಕ್ ಪೂರ್ಣಗೊಳ್ಳುವ ವೇಳೆಗೆ ರೂ. 200 ಕೋಟಿ ಬಂಡವಾಳ ಹೂಡಿಕೆ.

5,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ.

ಈ ಸಂದರ್ಭದಲ್ಲಿ ಸಚಿವರಾದ ಶಿವರಾಮ ಹೆಬ್ಬಾರ, ಬಿ ಸಿ ಪಾಟೀಲ್,ಮತ್ತು ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು.

Key words: Shiggamvi -Textile Park – CM Bommai- lays- foundation -stone