ಮೈಸೂರು,ಆಗಸ್ಟ್,6,2026 (www.justkannada.in): ಗಣಪತಿ ಸಚ್ಚಿದಾನಂದ ಆಶ್ರಮದ ಅವಧೂತ ದತ್ತ ಪೀಠದಲ್ಲಿ ಆಷಾಢ ಮಾಸ ಹಾಗೂ ಚಾತುರ್ಮಾಸ್ಯದ ಪ್ರಯುಕ್ತ ಆಯೋಜಿಸಲಾಗಿರುವ ‘ಶತಚಂಡಿಕಾ ಯಾಗ’*ಕ್ಕೆ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಈ ವೇಳೆ ತಮ್ಮ ಆಶೀರ್ವಚನ ಬೋಧಿಸಿದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ವಿಶ್ವ ಶಾಂತಿಯ ಸಂಕಲ್ಪ ಸಕಲರ ಒಳಿತಿಗಾಗಿ, ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಮಾತೆ ಮತ್ತು ಚಾಮುಂಡೇಶ್ವರಿಯಲ್ಲಿ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.
ಆಶ್ರಮದಲ್ಲಿ ಸತತ ನಾಲ್ಕನೇ ವರ್ಷ ಈ ಶತಚಂಡಿಕಾ ಯಾಗವನ್ನು ಆಯೋಜಿಸಲಾಗಿದ್ದು, ಇದೇ ರೀತಿ ಹತ್ತು ವರ್ಷಗಳ ಕಾಲ ಮುಂದುವರಿಸಿ, ತದನಂತರ ಬೃಹತ್ ‘ಸಹಸ್ರ ಚಂಡಿಕಾ ಯಾಗ’ವನ್ನು ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು ತಿಳಿಸಿದರು.
ಪೂಜ್ಯ ಗುರುದೇವ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಚಂಡಿಕಾ ಹೋಮವೆಂದರೆ ಅತ್ಯಂತ ಪ್ರೀತಿ. ನವರಾತ್ರಿಯ ಮಹಾನವಮಿಯ ದಿನ ಸ್ವತಃ ಶ್ರೀಗಳೇ ಅಮ್ಮನವರ ರೂಪದಲ್ಲಿ ಬಂದು ಯಾಗದ ಪೂರ್ಣಾಹುತಿ ಸಮರ್ಪಿಸುವ ದೃಶ್ಯ ಕಣ್ಮನ ಸೆಳೆಯುವಂತಿರುತ್ತದೆ ಎಂದು ಸ್ಮರಿಸಿದರು.
ಶತಚಂಡಿಕಾಯಾಗದ ವೇಳೆ ಮುಡಾ ಮಾಜಿ ಅಧ್ಯಕ್ಷ ಎಚ್. ವಿ. ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ. ಪ್ರಕಾಶ್, ವಿಕಾಸ್ ಶಾಸ್ತ್ರಿ, ಕಲ್ಯಾಣ್ ಹಾಗೂ ಆಶ್ರಮದ ಇತರ ಪ್ರಮುಖರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
Key words: Shatachandika Yaga, Avadhuta Datta Peetha, Mysore






