ಕೆಪಿಎಸ್ ಸಿಯಲ್ಲಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆ.

ಬೆಂಗಳೂರು, ಮಾರ್ಚ್​, 30,2024 (www.justkannada.in): ಕರ್ನಾಟಕ ಲೋಕಸೇವಾ ಆಯೋಗದ(KPSC) ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆಯಾಗಿದ್ದು ಈ ಸಂಬಂಧ ಕೆಪಿಎಸ್​ಸಿ ಅಧಿಕಾರಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.

ಕೆಪಿಎಸ್‌ಸಿಯ  ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಿರಿಯ ಎಂಜಿನಿಯರ್‌ ನೇಮಕಾತಿ ಆಯ್ಕೆ ಪಟ್ಟಿಯ ಕಡತವೇ ನಾಪತ್ತೆಯಾಗಿದೆ. 2016 ರಲ್ಲಿ ಕೊಳಗೇರಿ‌ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷೆ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಇದನ್ನ ಪ್ರಶ್ನಿಸಿ  ಹೈಕೋರ್ಟ್ ಮೊರೆ ಹೋಗಲಾಗಿತ್ತು.

ಬಳಿಕ ಹೈಕೋರ್ಟ್ ಆದೇಶದಂತೆ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. ಕೆಪಿಎಸ್​ಸಿ ಗೌಪ್ಯ ಶಾಖೆ-3 ರಲ್ಲಿ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. ಜನವರಿ 22 ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರ ಮಾಡಲಾಯಿತು. ಆ ಬಳಿಕ ಕಡತ ನಾಪತ್ತೆ ಎಂದು ದೂರು ದಾಖಲಿಸಲಾಗಿದೆ.

ಕೆಪಿಎಸ್​ಸಿ ಯ‌ ಎಲ್ಲಾ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ನಡೆಸಲಾಗಿದೆ. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2ಕ್ಕೆ‌ ಹಿಂದಿರುಗಿಸುವಂತೆ ಕೆಪಿಎಸ್​ಸಿ ಜ್ಞಾಪನ ಹೊರಡಿಸಿತ್ತು. ಬಳಿಕ‌ ಕೆಪಿಎಸ್​ಸಿ ಸಿಬ್ಬಂದಿಯಿಂದ ಕಡತಕ್ಕಾಗಿ ಎಲ್ಲೆಡೆ ಶೋಧ ನಡೆದಿದೆ. ಅಧಿಕಾರಿ, ಸಿಬ್ಬಂದಿ ಸುಮಾರು ಒಂದು ತಿಂಗಳು ಶೋಧ ನಡೆಸಿದ್ದು,  ಆದರೆ ಕಡೆತ ಎಲ್ಲೂ ಸಿಕ್ಕಿಲ್ಲ. ಹೀಗಾಗಿ ಕಡತ ನಾಪತ್ತೆ ಬಗ್ಗೆ ಕೆಪಿಎಸ್​ಸಿ ಸಹಾಯಕ ಕಾರ್ಯದರ್ಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Key words:  selection list, missing , KPSC