140ಕ್ಕೂ ಹೆಚ್ಚು ವಿಪಕ್ಷ ಸಂಸದರ ಅಮಾನತನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ.

ವದೆಹಲಿ,ಡಿಸೆಂಬರ್,21,2023(www.justkannada.in):  ಸಂಸತ್ ಚಳಿಗಾಲದ ಅಧಿವೇಶನದಲ್ಲಿ 140ಕ್ಕೂ ಹೆಚ್ಚು ವಿಪಕ್ಷ ಸಂಸದರನ್ನ ಅಮಾನತು ಮಾಡಿರುವುದನ್ನ ಖಂಡಿಸಿ ಇಂದು ಇಂಡಿಯಾ ಮೈತ್ರಿಕೂಟದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಹಳೆ ಸಂಸತ್ ನಿಂದ ಮಧ್ಯ ದಿಲ್ಲಿಯ ವಿಜಯ್ ಚೌಕ್‌ ವರೆಗೆ ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ದೊಡ್ಡ ಬ್ಯಾನರ್ ಮತ್ತು ಸಂಸತ್ ಪಂಜರದಲ್ಲಿ, ಪ್ರಜಾಪ್ರಭುತ್ವ ಹೊರಹಾಕಲಾಗಿದೆ ಎಂಬ ಫಲಕಗಳನ್ನು ಹಿಡಿದು ವಿಪಕ್ಷ ಸಂಸದರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸುಮಾರು ಮೂರನೇ ಎರಡರಷ್ಟು ಪ್ರತಿಪಕ್ಷಗಳ ಸದಸ್ಯರನ್ನು ಹೊರಹಾಕಿದ್ದಾರೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.

ಲೋಕಸಭೆಯಲ್ಲಿ ಭದ್ರತಾ ವೈಫಲ್ಯವನ್ನು ಖಂಡಿಸಿ ಸಂಸತ್ ನಲ್ಲಿ ಪ್ರತಿಭಟನೆ ನಡೆಸಿದ 140ಕ್ಕೂ ಹೆಚ್ಚು ವಿಪಕ್ಷಗಳ ಸಂಸದರನ್ನ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.

Key words: Protest – condemning – suspension – more than 140 -opposition MPs.