ಮೈಸೂರು ವಿವಿ ಶತಮಾನೋತ್ಸವದ ವೇಳೆ ವಿ.ಶ್ರೀನಿವಾಸ್ ಪ್ರಸಾದ್ ರ ಸಂಪೂರ್ಣ ಸಹಕಾರ ಸ್ಮರಿಸಿದ ಪ್ರೊ.ಕೆ.ಎಸ್ ರಂಗಪ್ಪ.

ಮೈಸೂರು,ಏಪ್ರಿಲ್,30,2024 (www.justkannada.in): ಮೈಸೂರು ವಿವಿ ಶತಮಾನೋತ್ಸವದ ವೇಳೆ ವಿ.ಶ್ರೀನಿವಾಸ್ ಪ್ರಸಾದ್  ಅವರು ಸಚಿವರಾಗಿದ್ದರು. ಆ ವೇಳೆ ಅವರು ಸಂಪೂರ್ಣ ಸಹಕಾರ ನೀಡಿದ್ದರು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಸ್ಮರಿಸಿದರು.

ನಿನ್ನೆ ಅನಾರೋಗ್ಯದಿಂದ ನಿಧನರಾದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥೀವ ಶರೀರವನ್ನ  ನಗರದ ಅಶೋಕಪುರಂನ ಎನ್ ಟಿಎಂಎಸ್ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.  ಇಲ್ಲಿಗೆ ಆಗಮಿಸಿದ ಪ್ರೊ.ಕೆ.ಎಸ್ ರಂಗಪ್ಪ ಅವರು  ವಿ.ಶ್ರೀನಿವಾಸ್ ಪ್ರಸಾದ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೊ.ಕೆ.ಎಸ್ ರಂಗಪ್ಪ, ನಾನು ವಿದ್ಯಾರ್ಥಿಯಾಗಿದ್ದಾಗ,  ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ,  ಪ್ರಾಧ್ಯಾಪಕ ಹಾಗೂ ಕುಲಪತಿ ಈ ಎಲ್ಲಾ ಹಂತಗಳಲ್ಲೂ ಶ್ರೀನಿವಾಸ್ ‍ಪ್ರಸಾದ್ ಅವರ ಜೊತೆ ಉತ್ತಮ ಒಡನಾಟ ಇತ್ತು. ನಾನು ಮೈಸೂರು ವಿವಿ ಕುಲಪತಿಯಾಗಿದ್ದಾಗ  ವಿವಿ ಶತಮಾನೋತ್ಸವ  ಸಂಭ್ರಮಾಚರಣೆ ವೇಳೆ ಶ್ರೀನಿವಾಸ್ ಪ್ರಸಾದ್ ಅವರು ಸಚಿವರಾಗಿದ್ದರು. ಈ ವೇಳೆ ಅವರು ಶತಮಾನೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಿದ್ದರು ಎಂದು ನೆನೆದರು.

ಪ್ರೊ.ಕೆ.ಎಸ್ ರಂಗಪ್ಪ ಅವರು ನಿನ್ನೆ ಅಕಾಡೆಮಿಕ್ ಮಿಟಿಂಗ್ ನಲ್ಲಿ ಭಾಗವಹಿಸಲು ಕೊಚ್ಚಿನ್ ಗೆ ತೆರಳಿದ್ದರು. ನಿನ್ನೆ ರಾತ್ರಿ ಮೈಸೂರಿಗೆ ವಾಪಸ್ ಆದ ವೇಳೆ ವಿಚಾರ ತಿಳಿದಿದ್ದು ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಆಗಮಿಸಿ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

Key words: Prof. K. S. Rangappa, condolence, V.Srinivas Prasad