ಬೆಂಗಳೂರು, ಕರ್ನಾಟಕವನ್ನ ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ-ಸಿಎಂ ಬಿಎಸ್ ವೈಗೆ ಪತ್ರ ಬರೆದು ಸಲಹೆ ನೀಡಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್….

ಬೆಂಗಳೂರು,ಜು,7,2020(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪಗೆ  ಮಾಜಿ ಸಚಿವ ಹೆಚ್.ಕೆ ಪಾಟೀಲ್ ಪತ್ರ ಬರೆದು ಕೆಲವು ಸಲಹೆಗಳನ್ನ ನೀಡಿದ್ದಾರೆ.

ಸಿಎಂ ಬಿಎಸ್ ವೈಗೆ ಪತ್ರ ಬರದಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್, ಬೆಂಗಳೂರು, ಕರ್ನಾಟಕವನ್ನ ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ. ಶಂಕಿತರು, ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ. ಉತ್ತಮ ಚಿಕಿತ್ಸೆ ಆಂಬುಲೆನ್ಸ್, ಗೌರವಯುತ ಅಂತ್ಯಸಂಸ್ಕಾರಗಳು ಮಾನವ ಹಕ್ಕುಗಳು. ಜನರ ಅಪೇಕ್ಷೆ, ನಿರೀಕ್ಷೆಗಳನ್ನು ಗಮನದಲ್ಲಿರಿಸಿ ದೃಢ ಹೆಜ್ಜೆಗಳನ್ನಿಡಿ ಎಂದು ತಿಳಿಸಿದ್ದಾರೆ.

ಕೋವಿಡ್-19 ಕೊರೋನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಭಾವನೆಗಳು ಜನಮಾನಸದಲ್ಲಿ ಗಟ್ಟಿಗೊಳ್ಳುತ್ತಿವೆ. ಕೋವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ಆಗುತ್ತಿರುವ ದೈನಂದಿನ ವೈಫಲ್ಯಗಳು ರಾಜ್ಯದಲ್ಲಿ ಒಂದು ಕರಾಳ ಅಧ್ಯಾಯವನ್ನು ಆರಂಭಿಸಿವೆ. ಸೋಂಕಿತರಿರಲಿ ಅಥವಾ ಶಂಕಿತರಿರಲಿ ಅವರಿಗೆ ಕನಿಷ್ಠ ಸೌಲಭ್ಯಗಳುಳ್ಳ ಸೇವೆ ದೊರಕುವುದು ಮರೀಚಿಕೆಯಾಗಿ ಮಾನವೀಯ ಅನುಕಂಪದ ಕ್ರಮಗಳು ಇಲ್ಲದಿರುವುದರಿಂದ ಶಂಕಿತರು ಮತ್ತು ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಹಾಗೆಯೇ ಕರೋನಾ ನಿರ್ವಹಣೆಯಲ್ಲಿ ಪ್ರತಿಯೊಂದು ಪರಿಕರದ ಖರೀದಿಯಲ್ಲಿ ಭ್ರಷ್ಠಾಚಾರದ ದೂರುಗಳು ಕೇಳಿಬಂದಿದ್ದು, ಸರ್ಕಾರ ಖರೀದಿಸಿರುವ ಉಪಕರಣಗಳು, ಪರಿಕರಗಳು, ಚಿಕಿತ್ಸಾ ಸಾಮಗ್ರಿಗಳು ಕಳಪೆಮಟ್ಟದ್ದವೆಂದು ದೂರುಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಠಾಚಾರದ ಸಂದೇಹಗಳು ಬಲವಾಗುತ್ತಿವೆ.Bangalore – Karnataka- Italy -New York-Former minister -HK Patil - CM BS yeddyurappa.

Bangalore – Karnataka- Italy -New York-Former minister -HK Patil - CM BS yeddyurappa.

Bangalore – Karnataka- Italy -New York-Former minister -HK Patil - CM BS yeddyurappa.

ಕರ್ನಾಟಕ ಸರ್ಕಾರ ಕೋವಿಡ್-19 ಕೊರೋನಾ ವೈರಸ್ ನಿರ್ವಹಣೆಯ ನಿರ್ಲಕ್ಷ್ಯ ಮತ್ತು ತಾತ್ಸಾರ ಮನೋಭಾವದಿಂದ ನಿರ್ವಹಿಸುತ್ತಿದ್ದು, ಆಸ್ಪತ್ರಯಲ್ಲಿ ಹಾಸಿಗೆ, ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ವ್ಯವಸ್ಥೆ ಉತ್ತಮ ಗುಣಮಟ್ಟದ ಊಟ ಸಹಿತ ಒದಗಿಸದೇ ಇರುವ ಅಧಿಕಾರಶಾಹಿಯ ನಿರ್ಲಕ್ಷ್ಯ ವರ್ತನೆಯನ್ನು ಜನ ಶಪಿಸುತ್ತಿದ್ದಾರೆ ಎಂದು ಸಿಎಂ ಬಿಎಸ್ ವೈಗೆ ಎಚ್ಚರಿಸಿರುವ ಹೆಚ್.ಕೆ ಪಾಟೀಲ್ ಸರ್ಕಾರಕ್ಕೆ ಈ ಕೆಳಕಂಡ ಸಲಹೆಗಳನ್ನ ನೀಡಿದ್ದಾರೆ.

  1. ಕೋವಿಡ್-19 ಸಂಕಷ್ಟದ ಪರಮಾವಧಿಯ ಈ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಬ್ಬ ನಾಗರೀಕರನ್ನು ಕೊರೊನಾ ವಿಮೆ ವ್ಯಾಪ್ತಿಗೆ ಸರ್ಕಾರವೇ ವಿಮಾ ಕಂಪನಿಯ ಪ್ರೀಮಿಯಂ ಭರಿಸಿ ವಿಮೆ ವ್ಯಾಪ್ತಿಗೆ ತಕ್ಷಣ ತರಬೇಕು. ಪರಿಸ್ಥಿತಿ ಹದಗೆಡುವ ಮತ್ತು ಇನ್ನಷ್ಟು ಕೈಮೀರುವ ಮುನ್ನ ಈ ನಿರ್ಣಯ ಆಗಬೇಕು.
  2. ಆಸ್ಪತ್ರೆಗಳಲ್ಲಿ ವೈದ್ಯರಿಗೆ, ಸಿಬ್ಬಂದಿಗೆ, ನರ್ಸ್‍ಗಳಿಗೆ ಸ್ವಚ್ಚತಾ ಕೆಲಸಗಾರರಿಗೆ ಮತ್ತು ಪೌರ ಕಾರ್ಮಿಕರಿಗೆ ಸೋಂಕು ತಗುಲುತ್ತಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ತೀವ್ರವಾದ ಸಿಬ್ಬಂದಿ ಕೊರತೆ ಎದುರಾಗಿದೆ. ಈ ಕೊರತೆಯನ್ನು ನೀಗಿಸಲು ಚಿಕಿತ್ಸೆಗೆ ತೊಂದರೆಯಾಗದೇ ಇರಲು ತಕ್ಷಣವೇ ಕೋವಿಡ್-19 ತುರ್ತು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ತನ್ಮೂಲಕ ಚಿಕಿತ್ಸೆಗೆ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಬೇಕು.
  3. ಆಂಬುಲೆನ್ಸ್‍ಗಳ ಕೊರತೆ ತೀವ್ರಪ್ರಮಾಣದಲ್ಲಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು 2-3 ದಿನಗಳ ವಿಳಂಬವಾಗುತ್ತಿದೆ. ಆಂಬುಲೆನ್ಸ್ ಸಿಗದೇ ಮನೆ ಬಾಗಿಲಲ್ಲಿ ಕೆಲವರು ಮೃತಪಟ್ಟಿದ್ದಾರೆ. ಕೆಲವರಂತೂ ಹಾಸಿಗೆ ಸಿಗದೇ ಆಸ್ಪತ್ರೆಯ ಆವರಣದಲ್ಲಿಯೇ ಮೃತಪಟ್ಟಿದ್ದಾರೆ. ಆಂಬುಲೆನ್ಸ್‍ಗಳನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂ.ಟಿಸಿಯ ಸಾವಿರಾರು ಬಸ್‍ಗಳು ತಮ್ಮ ದೈನಂದಿನ ಸೇವೆಯನ್ನು ನಿಲ್ಲಿಸಿ ಖಾಲಿ ನಿಂತಿರುವಾಗಿ ಆ ಬಸ್‍ಗಳನ್ನು ತಾತ್ಕಾಲಿಕವಾಗಿ ಕನಿಷ್ಠ ಸೌಲಭ್ಯದೊಂದಿಗೆ ಆಂಬುಲೆನ್ಸ್ ರೂಪದಲ್ಲಿ ಪರಿವರ್ತಿಸಿ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು.
  4. ಉತ್ತಮ ಚಿಕಿತ್ಸೆ, ಆಂಬುಲೆನ್ಸ್ ಸೇವೆ ಮತ್ತು ಗೌರವಯುತ ಅಂತ್ಯಸಂಸ್ಕಾರಗಳು ಅತ್ಯಂತ ಪ್ರಮುಖವಾದ ಮಾನವ ಹಕ್ಕುಗಳಾಗಿದ್ದು, ಈ ಹಕ್ಕುಗಳನ್ನು ದಿನನಿತ್ಯವು ನಮ್ಮ ರಾಜ್ಯದಲ್ಲಿ ಉಲ್ಲಂಘಿಸಲಾಗುತ್ತಿದೆ. ಈ ಸೇವೆಗಳನ್ನು ಒದಗಿಸುವಲ್ಲಿ ಆಗುತ್ತಿರುವ ಪ್ರಮಾದ ಮತ್ತು ಹೀನಾಯವಾದ ಪರಿಸ್ಥಿತಿಯ ಬಗ್ಗೆ ತಕ್ಷಣವೇ ಸರಿಪಡಿಸಲು ಉನ್ನತಮಟ್ಟದ ಸಮಿತಿ ನೇಮಿಸಿ ಸೂಕ್ತವಾದಂತಹ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ ಪ್ರಮುಖವಾಗಿರುವ ಈ ಮೂರು ಕೆಲಸಗಳನ್ನು ನಾವು ತಕ್ಷಣ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು.
  5. ವೈರಾಣು ಹರಡುವಿಕೆ ವ್ಯಾಪಕವಾಗಿದೆ. ತಪಾಸಣೆಗಳು ಸಮರ್ಪಕವಾಗಿಲ್ಲ ಮತ್ತು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ತಪಾಸಣೆಯಾದ ಮಾದರಿಗಳ ಪರೀಕ್ಷಾ ಫಲಿತಾಂಶ 6-8 ದಿನಗಳಾದರೂ ಲಭ್ಯವಾಗುತ್ತಿಲ್ಲ. ನನ್ನ ಮಾಹಿತಿಯ ಪ್ರಕಾರ ಇಂದಿನ

ದಿನಾಂಕಕ್ಕೆ 40,000-50,000 ತಪಾಸಣಾ ಫಲಿತಾಂಶಗಳು ಲಭ್ಯವಾಗಿಲ್ಲ. ಕೋವಿಡ್-19ರ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾದಷ್ಟು ಬೇಗ ತಪಾಸಣೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಿದ್ದೇವೆ. ಆದರೆ ಈ ತಪಾಸಣೆಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ದಕ್ಷಿಣ ಕೋರಿಯಾ ರಾಷ್ಟ್ರದಲ್ಲಿ ಸಾಮೂಹಿಕ ತಪಾಸಣೆ (Mass Testing)ಗಳನ್ನು ನಡೆಸಿ ತ್ವರಿತಗತಿ  (Rapid test)  ತಪಾಸಣೆಯನ್ನು ಕೈಗೊಳ್ಳಲಾಯಿತು. ಈ ತಪಾಸಣೆಗಳ ಫಲಿತಾಂಶವು ಶೇ. 85 ರಷ್ಟು ನಿಖರವಾಗಿರುತ್ತದೆ ಮತ್ತು 10 ನಿಮಿಷದಲ್ಲಿ ವರದಿ ಕೈಗೆ ಲಭ್ಯವಾಗುತ್ತದೆ. ಈಗ ಈ ತಪಾಸಣಾ ಕಿಟ್‍ಗಳು ICMR ಅನುಮೋದಿತವಾಗಿ ಲಭ್ಯವಾಗುತ್ತಿವೆ. ಕೋವಿಡ್-19 ಮಹಾಮಾರಿಯ ಹರಡುವಿಕೆಯನ್ನು ಸಂಪೂರ್ಣ ಅರಿಯಲು ಹಾಗೂ ಸೂಕ್ತ ಕ್ರಮ ವಹಿಸಲು ಇದರಿಂದ ಸಾಧ್ಯವಾಗುತ್ತದೆ. ಈ ಕಿಟ್‍ಗಳನ್ನು ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಒದಗಿಸುವುದು ಸೂಕ್ತ.

  1. ಜೀವರಕ್ಷಕ ಸಾಧನಗಳಾದ ಸೂಕ್ತವಾದ ಔಷಧಿ ಸಕಾಲಕ್ಕೆ ಲಭ್ಯಗೊಳಿಸುವುದು, ಅಗತ್ಯವಿದ್ದಲ್ಲಿ ಐ.ಸಿ.ಯು ಮತ್ತು ವೆಂಟಿಲೇಟರ್‍ಗಳನ್ನು ಅಗತ್ಯಕ್ಕೆ ತಕ್ಕಷ್ಟು ಸುಸಜ್ಜಿತ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಮತ್ತು ಹೊಸ ವ್ಯವಸ್ಥೆಯನ್ನು ರೂಪಿಸುವುದು ಇಂದಿನ ಅಗತ್ಯಗಳಾಗಿವೆ. ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳನ್ನು ಮತ್ತು ಸೌಲಭ್ಯ ಹೊಂದಿರುವ ತಾರಾ ಹೊಟೇಲ್‍ಗಳನ್ನು ಮತ್ತು ಆಸ್ಪತ್ರೆಯ ಅಗತ್ಯ ಪರಿಕರಗಳನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಳ್ಳಬೇಕೆಂದು ನಾನು ಹಲವಾರು ಸಂದರ್ಭಗಳಲ್ಲಿ ತಮ್ಮನ್ನು ಕೋರಿದ್ದೇನೆ.

ಈ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳಿ. ಇಲ್ಲದಿದ್ದರೆ ಬೆಂಗಳೂರನ್ನು, ಕರ್ನಾಟಕವನ್ನು ಇಟಲಿ ಅಥವಾ ನ್ಯೂಯಾರ್ಕ್‍ನಂಥ ಹೀನಾಯ ಸ್ಥಿತಿಗೆ ದೂಡಿದ್ದಕ್ಕಾಗಿ ಜನರ ಆಕ್ರೋಶಕ್ಕೆ ಬಲಿಯಾಗುತ್ತೀರಿ. ದಯವಿಟ್ಟು ತುರ್ತಾದ ಇಂಥ ಸಂದರ್ಭದಲ್ಲಿ ಸೂಕ್ತವಾದಂಥ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಂಡು ಜನರ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಗಮನದಲ್ಲಿರಿಸಿ ಎಂದು ಹೆಚ್.ಕೆ ಪಾಟೀಲ್ ಒತ್ತಾಯಿಸಿದ್ದಾರೆ.

Key words: Bangalore – Karnataka- Italy -New York-Former minister -HK Patil – CM BS yeddyurappa.