ಮೊದಲ ಹಂತದ ಸಿಡಿಮದ್ದು ತಾಲೀಮು: ಬೆದರಿದ ಎರಡು ಆನೆಗಳು.

ಮೈಸೂರು, ಅಕ್ಟೋಬರ್,11,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನ ನಾಲ್ಕು ದಿನಗಳು ಬಾಕಿ ಇದ್ದು ಸಿದ‍್ಧತಾ ಕಾರ್ಯಗಳು ನಡೆಯುತ್ತಿವೆ. ಈ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ  ಹೆಜ್ಜೆಹಾಕುವ ಗಜಪಡೆ ಆನೆಗಳಿಗೆ ತಾಲೀಮು ಮುಂದುವರೆದಿದೆ.

ಈ ಮಧ್ಯೆ  ಇಂದು ಮೈಸೂರು ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಆವರಣದಲ್ಲಿ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ನಡೆಯಿತು. ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿನ ಕುಶಾಲತೋಪು ಸಿಡಿಸುವ ವೇಳೆ ಆನೆಗಳು ಅಶ್ವಗಳು ಬೆದರದಂತೆ  ತಾಲೀಮು ನಡೆಸಲಾಗುತ್ತದೆ. ಅಂತೆಯೇ ಇಂದು ಕುಶಾಲತೋಪು ಸಿಡಿಸುವ ತಾಲೀಮು ನಡೆಯಿತು.

ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಿ ಅಭ್ಯಾಸ ನಡೆಸಲಾಯಿತು. ತಾಲೀಮಿನಲ್ಲಿ 43 ಕುದುರೆಗಳು ಚಿನ್ನದ ಅಂಬಾರಿ ನೇತೃತ್ವ ವಹಿಸಿರುವ ಅಭಿಮನ್ಯು ನೇತೃತ್ವದ 14 ಆನೆಗಳು, ಪೋಲಿಸರು, ಅಶ್ವಾರೋಹಿ ದಳ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.

ಕುಶಾಲತೋಪು ಸಿಡಿಸುವ ವೇಳೆ ಸುಗ್ರೀವ ಹಾಗೂ ಹಿರಣ್ಯ ಆನೆ ಸ್ವಲ್ಪ ವಿಚಲಿತರಾಗಿ ಬೆದರಿದ ಘಟನೆ ನಡೆಯಿತು.  ಮೊದಲ ಬಾರಿ ಹಿರಣ್ಯ  ಆನೆ,  ಎರಡನೇ ಬಾರಿ ಸುಗ್ರೀವ ಆನೆ ದಸರಾದಲ್ಲಿ ಭಾಗಿಯಾಗುತ್ತಿದೆ.

ತಾಲೀಮು ಕುರಿತು ಮಾತನಾಡಿದ ಅರಣ್ಯಧಿಕಾರಿ ಸೌರಭ್ ಕುಮಾರ್,  ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳಿಗೆ ಮೊದಲ ಹಂತದ ಸಿಡಿಮದ್ದು ತಾಲಿಮು ನೀಡಲಾಯಿತು. ಎಲ್ಲಾ ಆನೆಗಳು ಸಿಡಿಮದ್ದಿನ ತಾಲೀಮಿನಲ್ಲಿ ಬೆದರಿಲ್ಲ. ಹೊಸದಾಗಿ ಬಂದಿರುವ ಒಂದೆರಡು ಆನೆಗಳು ಬೆದರಿವೆ. ನಾವು ತಾಲೀಮನ್ನ ನೀಡುವುದು ಇದೆ ಉದ್ದೇಶದಿಂದ. ಹಳೆ ಆನೆಗಳನ್ನ ಮುಂದಿನ ಸಾಲಿನಲ್ಲಿ ಹಾಕಿದ್ದೆವು. ಹೊಸ ಆನೆಗಳನ್ನ ಎರಡನೇ ಸಾಲಿನಲ್ಲಿ ನಿಲ್ಲಿಸಿದ್ದೆವು. ಎಲ್ಲಾ ಆನೆಗಳ ಅರೋಗ್ಯವು ಉತ್ತಮವಾಗಿದೆ. ಎಲ್ಲಾ ಹಂತದ ತಾಲೀಮನ್ನ ಯಶಸ್ವಿಯಾಗಿ ಮುಗಿಸುತ್ತಿವೆ. ಎರಡನೇ ಹಂತದ ಸಿಡಿಮದ್ದು ತಾಲೀಮನ್ನ ಅಕ್ಟೋಬರ್ 13ರಂದು ನಡೆಸುತ್ತೇವೆ ಎಂದು ತಿಳಿಸಿದರು.

Key words: mysore dasara-workout- gajapade-elephants