ಗಣಿ ಭೂವಿಜ್ಞಾನ ಇಲಾಖೆಗೆ ಮೇಜರ್‌ ಸರ್ಜರಿ: ದಶಕಗಳಿಂದ ಬೀಡು ಬಿಟ್ಟಿದ್ದ ಅಧಿಕಾರಿಗಳ ಎತ್ತಂಗಡಿ

ಬೆಂಗಳೂರು, ಜುಲೈ ,21,2026 (www.justkannada.in): ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ, ಅದರಲ್ಲೂ ಸ್ವಂತ ಅಥವಾ ನೆರೆಯ ಜಿಲ್ಲೆಗಳಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳ ವರ್ಗಾವಣೆ ಮೂಲಕ ಇಲಾಖೆಯಲ್ಲಿ ವ್ಯಾಪಕ ಆಡಳಿತಾತ್ಮಕ ಪುನರ್‌ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಇಲಾಖೆಯ ಒಟ್ಟು 160 ಅಧಿಕಾರಿಗಳನ್ನು ವರ್ಗಾವಣೆಗೊಳಿಸುವ ಆದೇಶ ಹೊರಡಿಸಲಾಗಿದೆ. ಒಟ್ಟಾರೆಯಾಗಿ ಇಲಾಖೆಯ ಶೇಕಡಾ 80% ರಷ್ಟು ಸಿಬ್ಬಂದಿಗಳ ವರ್ಗಾವಣೆ ಮಾಡಲಾಗಿದ್ದು, ಇಲಾಖೆಯ ಇತಿಹಾಸದಲ್ಲೇ ಇದೊಂದು ಅತ್ಯಂತ ದೊಡ್ಡ ಆಡಳಿತಾತ್ಮಕ ಪುನರ್‌ವ್ಯವಸ್ಥೆಯಾಗಿದೆ.

ಈ ಬೃಹತ್ ವರ್ಗಾವಣೆ ಪ್ರಕ್ರಿಯೆಯಲ್ಲಿ:

-131 ಭೂವಿಜ್ಞಾನಿಗಳು (Geologists)

– 23 ಹಿರಿಯ ಭೂವಿಜ್ಞಾನಿಗಳು (Senior Geologists)

– 6 ಉಪನಿರ್ದೇಶಕರು (Deputy Directors)

ವರ್ಗಾವಣೆಗೊಂಡಿದ್ದಾರೆ.

ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಹತ್ವದ ನಿರ್ಧಾರ

ಜುಲೈ 1ರಂದು ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಹಲವು ಅಧಿಕಾರಿಗಳು ದೀರ್ಘಕಾಲ ಒಂದೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು, ವಿಶೇಷವಾಗಿ ಸ್ವಂತ ಅಥವಾ ನೆರೆಯ ಜಿಲ್ಲೆಗಳಲ್ಲೇ ಸೇವೆ ಸಲ್ಲಿಸುತ್ತಿರುವುದರಿಂದ ಆಡಳಿತಾತ್ಮಕ ಸವಾಲುಗಳು ಎದುರಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಇಲಾಖೆಯಲ್ಲಿ ಸಮಗ್ರ ವರ್ಗಾವಣೆ ಪ್ರಕ್ರಿಯೆ ಕೈಗೊಂಡು, ಆಡಳಿತಾತ್ಮಕ ದಕ್ಷತೆ ಹಾಗೂ ಪಾರದರ್ಶಕತೆಯನ್ನು ಬಲಪಡಿಸುವಂತೆ ಸೂಚನೆ ನೀಡಿದ್ದರು.

ಸ್ಥಳೀಯ ಪ್ರಭಾವಕ್ಕೆ ಕಡಿವಾಣ

ದೀರ್ಘಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುವುದರಿಂದ ಸ್ಥಳೀಯ ಪ್ರಭಾವ ಹಾಗೂ ಹಿತಾಸಕ್ತಿ ಸಂಘರ್ಷದ ಸಾಧ್ಯತೆಗಳು ಹೆಚ್ಚಾಗುವುದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಮರುಹಂಚಿಕೆ ಮಾಡಲಾಗಿದೆ.

ಸಾರ್ವಜನಿಕರಿಂದ ದೂರುಗಳು ಬಂದಿದ್ದ ಹಾಗೂ ಆಡಳಿತಾತ್ಮಕವಾಗಿ ಸೂಕ್ಷ್ಮ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಅಧಿಕಾರಿಗಳನ್ನು ಸೂಕ್ಷ್ಮವಲ್ಲದ (Non-Sensitive) ಹುದ್ದೆಗಳಿಗೆ ನಿಯೋಜಿಸಲಾಗಿದೆ.

ಅನಧಿಕೃತ ಗಣಿಗಾರಿಕೆ ನಿಯಂತ್ರಣಕ್ಕೆ ಮತ್ತಷ್ಟು ಬಲ

ರಾಜ್ಯದಲ್ಲಿ ಅನಧಿಕೃತ ಗಣಿಗಾರಿಕೆ ಹಾಗೂ ಖನಿಜ ಸಂಪತ್ತಿನ ಅಕ್ರಮ ದುರ್ಬಳಕೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವ ಉದ್ದೇಶದಿಂದ ಆಡಳಿತಾತ್ಮಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ಈ ವರ್ಗಾವಣೆ ಪ್ರಕ್ರಿಯೆಯಿಂದ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ, ಕಟ್ಟುನಿಟ್ಟಿನ ಕಾನೂನು ಜಾರಿ ಹಾಗೂ ಕ್ಷೇತ್ರ ಮಟ್ಟದ ಮೇಲ್ವಿಚಾರಣೆ ಬಲಗೊಳ್ಳುವ ನಿರೀಕ್ಷೆ ಇದೆ. ಜೊತೆಗೆ ರಾಜ್ಯದ ಗಣಿ ಆದಾಯ ಸಂಗ್ರಹಣೆಗೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಸಮರ್ಪಕ ಯೋಜನೆಯೊಂದಿಗೆ ಈ ವರ್ಗಾವಣೆಗಳನ್ನು ಜಾರಿಗೊಳಿಸಲಾಗಿದೆ.

ಆದಾಯ ಹೆಚ್ಚಳಕ್ಕೂ ಒತ್ತು

ಇಲಾಖೆಯಲ್ಲಿ ಕೈಗೊಂಡಿರುವ ಈ ವ್ಯಾಪಕ ಆಡಳಿತಾತ್ಮಕ ಪುನರ್‌ ವ್ಯವಸ್ಥೆಯಿಂದ ಕಾನೂನುಬದ್ಧ ಗಣಿಗಾರಿಕೆ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತಷ್ಟು ಪರಿಣಾಮಕಾರಿಯಾಗಲಿದ್ದು, ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವ ಮೂಲಕ ಸರ್ಕಾರದ ಆದಾಯವನ್ನು ಹೆಚ್ಚಿಸುವ ಗುರಿಯನ್ನೂ ಹೊಂದಲಾಗಿದೆ.

Key words: Major surgery, Mining Geology, Department : officials, Transfer