ಜೆಡಿಎಸ್ ಗೆ ಸಹಕಾರ ನೀಡದ ಆರೋಪ: ಹೆಚ್.ಡಿ ದೇವೇಗೌಡರ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್.

ಮಂಡ್ಯ,ಏಪ್ರಿಲ್,26, 2024 (www.justkannada.in):  ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಜೆಡಿಎಸ್ ಗೆ ಸಹಕಾರ ನೀಡಿಲ್ಲ ಎಂಬ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹೇಳಿಕೆಗೆ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್,  ದೇವೇಗೌಡರು ಮಾಹಿತಿ ಇಲ್ಲದೆ  ಹೇಳಿರಬಹುದು. ದೇವೇಗೌಢರಿಂದ  ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ.  ನನ್ನ ಸೀಟು ತ್ಯಾಗ ಮಾಡಿದಾಗಲೂ ನನಗೆ ಬೇಸರವಾಗಿಲ್ಲ. ಆದರೆ  ಹೆಚ್.ಡಿ ದೇವೇಗೌಡರ ಹೇಳಿಕೆ ನನಗೆ ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನಿಲ್ಲದೆ ಅವರು ಚುನಾವಣೆ ಮಾಡಿಕೊಳ್ಳುತ್ತೇವೆ ಎಂಬ ಭಾವನೆ ಇರಬಹುದು. ಅವರು ಹೇಳಿಕೆ ನೀಡಿದ ನಂತರ ನಿನ್ನೆಯಿಂದ ನನಗೆ ಒಂದಷ್ಟು ಕರೆ ಬಂದವು. ನನ್ನ ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತರ ನನಗೆ ಒಂದು ಪೋನ್ ಸಹ ಕರೆ ಮಾಡಿ ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ. ಇಷ್ಟು ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಅನ್ನೋದು ನನಗೆ ಬೇಸರವಾಯಿತು. ಸೋತ ಸೀಟನ್ನೇ ಬಿಡಲ್ಲ ಅಂತಹುದರಲ್ಲಿ ನಾನು ಗೆದ್ದ ಸೀಟು ಬಿಟ್ಟು ಕೊಟ್ಟಿದ್ದೇನೆ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಆದ್ರೆ ಅವರು ನನ್ನ ಪ್ರಚಾರಕ್ಕೆ ಕರೆದಿಲ್ಲ. ಪಕ್ಷ‌ ಸೂಚನೆ ನೀಡಿದ ಕಡೆ ಹೋಗಿ ನಾನು ಪ್ರಚಾರಕ್ಕೆ ಹೋಗಿದ್ದೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

Key words: mandya, HD Deve Gowda, Sumalatha Ambarish