ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021ಗೆ ರಾಜ್ಯಪಾಲರ ಅಂಕಿತ

ಬೆಂಗಳೂರು, ಅಕ್ಟೋಬರ್ 25, 2021 (www.justkannada.in): ರಾಜ್ಯದಲ್ಲಿ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ-2021 ಜಾರಿಗೆ ಜಾರಿಗೆ ಬಂದಿದೆ.

ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಕಾಯ್ದೆ-2021 ಮಸೂದೆಗೆ ರಾಜ್ಯಪಾಲ ಥಾವರ್​ ಚಂದ್‌ ಗೆಹ್ಲೋಟ್​​​ ಅಂಕಿತ ಹಾಕಿದ್ದಾರೆ.

ರಾಜ್ಯದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು, ನ್ಯಾಯಾಲಯ, ನ್ಯಾಯಮಂಡಳಿ, ಪ್ರಾಧಿಕಾರದ ಯಾವುದೇ ತೀರ್ಪು ಅಥವಾ ಆದೇಶ ಇದ್ದರೂ ಕಾಯ್ದೆ ಜಾರಿಯಾದ ದಿನದವರೆಗೆ ಅಸ್ತಿತ್ವದಲಿರುವ ಧಾರ್ಮಿಕ ಕಟ್ಟಡಗಳನ್ನು (ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ, ಬೌದ್ಧ ವಿಹಾರ, ಮಜರ್ ಇತರೆ) ಸಂರಕ್ಷಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರವು ಭವಿಷ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಪರವಾನಗಿ ಇಲ್ಲದೆ ಅವಕಾಶ ನೀಡುವಂತೆ ಇಲ್ಲ.

ಆದರೆ ಕಾನೂನು ಹಾಗೂ ಸರ್ಕಾರ ಆಗಾಗ ವಿಧಿಸುವ ಷರತ್ತುಗಳಿಗೆ ಒಳಪಟ್ಟಂತೆ ಸಂರಕ್ಷಿತ ಕಟ್ಟಡಗಳಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬಹುದು.