ಬೆಂಗಳೂರು,ಜೂನ್,29,2026 (www.justkannada.in): ಹಾಸನ ಉದ್ದೇಶಿತ ಐಐಟಿ (IIT) ಭೂಸಂತ್ರಸ್ತರಿಗೆ ಕೋರ್ಟ್ ಆದೇಶದಂತೆ ಪರಿಹಾರ ನೀಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಾಸನ ಜಿಲ್ಲಾ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿ ಚರ್ಚಿಸಿದರು. ದೊಡ್ಡಹೊನ್ನೇನಹಳ್ಳಿ, ಕಾಚಾನಾಯಕನಹಳ್ಳಿ ಸೇರಿ 7 ಗ್ರಾಮಗಳ ಭೂಸಂತ್ರಸ್ತರ ಅಹವಾಲು ಆಲಿಸಿದರು. ಸಂಸದ ಶ್ರೇಯಸ್ ಪಟೇಲ್, ಶಾಸಕ ಶಿವಲಿಂಗೇಗೌಡ, ಮಾಜಿ ಎಂಎಲ್ ಸಿ ಗೋಪಾಲಸ್ವಾಮಿ, ಯೋಜನೆ ವ್ಯಾಪ್ತಿಯ ಏಳು ಗ್ರಾಮಗಳ ರೈತರು ಭಾಗಿಯಾಗಿದ್ದರು.
ಈ ವೇಳೆ ಎಚ್ ಡಿ ದೇವೇಗೌಡ ಎಜುಕೇಷನ್ ಟ್ರಸ್ಟ್ ಮಾಡಲು ನಮ್ಮ ಭೂಮಿ ಕಬಳಿಕೆ ಮಾಡಲಾಗುತ್ತಿದ್ದು ಎಚ್ ಡಿ ರೇವಣ್ಣ ಕುಮ್ಮಕ್ಕಿನಿಂದ ನಿವೇಶನವೂ ಇಲ್ಲ, ಪರಿಹಾರವೂ ಇಲ್ಲ. ಐಐಟಿಗೆ ಮೊದಲು 334 ಎಕರೆ ಅಂದ್ರು, ನಂತರ 1057 ಎಕರೆ ಅಂತಿದ್ದಾರೆ. ಐಐಟಿ ಧಾರವಾಡಕ್ಕೆ ಹೋಗಿದೆ, ಅದರ ಹೆಸರಲ್ಲಿ ಗೌಡರ ಕುಟುಂಬ ಭೂಕಬಳಿಸಲು ಸಂಚು ನಡೆಸಿದ್ದಾರೆ ಎಂದು ರೈತರು ಆರೋಪಿಸಿದರು.
ನಾನು ಬಿಡದಿ ರೈತರಿಗೆ ಒಂದು ನ್ಯಾಯ, ಹಾಸನ ರೈತರಿಗೆ ಮತ್ತೊಂದು ನ್ಯಾಯ ಮಾಡುವುದಿಲ್ಲ. ರೈತರ ಕೈಗೆ ಹೆಚ್ಚಿಗೆ ಹಣ ಬಂದರೆ ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವವನು ನಾನು. ಸರ್ಕಾರ ರೈತರ ಪರವಾಗಿ ಇರುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚಿಸಿ, ಸಮಸ್ಯೆಗಳ ಶೀಘ್ರ ಹಾಗೂ ಕಾನೂನುಬದ್ಧ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದರು.
ಪರಿಹಾರಧನ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ನ್ಯಾಯಾಲಯದ ಆದೇಶಗಳ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ತಮ್ಮ ಅಹವಾಲುಗಳನ್ನು ರೈತರು ಸಿಎಂ ಡಿಕೆ ಶಿವಕುಮಾರ್ ಗಮನಕ್ಕೆ ತಂದರು. ಬೌಂಡರಿ ಹೊರಗೆ 160 ಎಕರೆ ಜಾಗದಲ್ಲಿ ಬಡಾವಣೆ ಮಾಡಿ ನಿವೇಶನ ಕೊಡಿ. ನಮ್ಮದೇನೂ ಅಭ್ಯಂತರ ಇಲ್ಲ ಎಂದು ರೈತರು ತಿಳಿಸಿದರು.
ಸುಮಾರು ಇಪ್ಪತ್ತು ವರ್ಷಗಳಿಂದ ನಾವು ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಚ್ ಡಿ ರೇವಣ್ಣ ಅವರ ಕುಮ್ಮಕ್ಕಿನಿಂದ ಭೂಸ್ವಾಧೀನ ಪ್ರಕ್ರಿಯೆ ನಡೆದ ಬಳಿಕ ರೈತರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ಪರವಾಗಿ ನ್ಯಾಯಾಲಯ ತೀರ್ಪು ನೀಡಿದ್ದರೂ ಅದರ ಅನುಷ್ಠಾನವಾಗದೆ, ವಿವಿಧ ಹಂತಗಳಲ್ಲಿ ಆಡಳಿತಾತ್ಮಕ ಸಮಸ್ಯೆಗಳು ಮುಂದುವರಿದಿವೆ. ಇದರಿಂದ ನಮಗೆ ನ್ಯಾಯ ದೊರೆಯುತ್ತಿಲ್ಲ” ಎಂದು ರೈತರು ಅಳಲು ತೋಡಿಕೊಂಡರು.
ಪರಿಹಾರ ತಗೊಳ್ಳಿ ಅಂತ ವರ್ಷಕ್ಕೆ ಎರಡೂ ಬಾರಿ ನೋಟೀಸ್ ಕಳಿಸ್ತಾರೆ. ಅಲ್ಲಿಗೆ ಹೋದರೆ, ಹಾಸನಕ್ಕೆ ಹೋಗಿ, ಮೈಸೂರಿಗೆ ಹೋಗಿ ಅಂತ ಅಲೆದಾಡಿಸುತ್ತಿದ್ದಾರೆ. ಪರಿಹಾರ ಬರೀ ಪೇಪರ್ ಮೇಲೆ ಉಳಿದಿದೆ ಅಷ್ಟೇ. ರೇವಣ್ಣನವರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಸೈಟ್ ಕೊಡಿ ಅಂತ ಕೇಳಿದ್ರೆ ನಿವೇಶನ ಲಭ್ಯ ಇಲ್ಲ ಅಂತ ಹಿಂಬರಹ ಕೊಡ್ತಾರೆ. ಆದರೆ ಪರಿಹಾರ ದುಡ್ಡು ತಗೊಳ್ಳಿ ಅಂತ ನೋಟೀಸ್ ಕೊಟ್ಟು, ಅಲ್ಲಿಗೆ ಹೋದರೆ ಪರಿಹಾರ ಕೊಡದೇ ಅಲೆದಾಡಿಸುತಿದ್ದಾರೆ.
2007 ರಲ್ಲಿ ಎಕರೆಗೆ 15 ರಿಂದ 25 ಲಕ್ಷ ರೂ. ಪರಿಹಾರ ಫಿಕ್ಸ್ ಮಾಡಿದ್ದಾರೆ. ಅಭಿವೃದ್ಧಿ ಪಡಿಸಿದ ಜಾಗವನ್ನು 50:50 ಕೊಟ್ರೆ ರೆಡಿ ಇದ್ದೀವಿ. ಕೇಸ್ ಹಾಕಿದ್ವಿ. ಸೈಟು, ದುಡ್ಡು ಎರಡೂ ಕೊಡ್ತಿವಿ ಅಂತ ವಾಪಸ್ ತೆಗೆಸಿದ್ರು. ಆದರೆ ಈಗ ನಿವೇಶನ ಲಭ್ಯ ಇಲ್ಲ ಅಂತ ಆಟ ಆಡಿಸ್ತಾ ಇದ್ದಾರೆ ಎಂದು ರೈತರು ದೂರಿದರು.
ಭೂಸ್ವಾಧೀನ ಜಾಗದ ಪಕ್ಕದಲ್ಲೇ ಇರುವ ಜಮೀನುಗಳಲ್ಲಿ ರೇವಣ್ಣ ಸೇರಿ ಜೆಡಿಎಸ್ ಮುಖಂಡರು ಕೈಗಾರಿಕೆಗಳನ್ನು ಮಾಡಲು ಹೊರಟಿದ್ದಾರೆ. ಅಡಿಗೆ 7-8 ಸಾವಿರ ರೂ. ದರ ಇದೆ. ಎಕರೆಗೆ ಕೋಟ್ಯಂತರ ರೂಪಾಯಿ ಆಗ್ತದೆ. ಹೀಗಿರುವಾಗ ಎಕರೆಗೆ 25 ಲಕ್ಷ ರೂಪಾಯಿ ತಗೊಂಡು ಏನು ಮಾಡೋಣ. ನಮ್ಮ ಜಮೀನು ನಮಗೆ ವಾಪಾಸ್ ಕೊಡಿಸಿ ಎಂದು ರೈತರು ಮನವಿ ಮಾಡಿದರು.
ಕೋರ್ಟ್ ನಿರ್ದೇಶನದ ಪ್ರಕಾರ 50:50 ಶೇರಿಂಗ್ ಕೊಡಬೇಕಿತ್ತು. ಆದರೆ ಕೊಟ್ಟಿಲ್ಲ. ನ್ಯಾಯಾಂಗದ ತೀರ್ಮಾನ ಉಲ್ಲಂಘನೆ ಆಗಿದೆ. ಆ ಜಾಗ ರಾಷ್ಟ್ರೀಯ ಹೆದ್ದಾರಿಗೆ (NH) ಹೊಂದಿಕೊಂಡಂತೆ ಇದೆ. ಆ ಜಾಗ ರೈತರಿಗೆ ಹೋಗುತ್ತದೆ ಅಂತ ಅದನ್ನು ದೋಚಲು ಹೋಗಿದ್ದಾರೆ. ಹಾಸನಕ್ಕೆ ಐಐಟಿ ತಂದರೆ 350 ಎಕರೆ ಕೊಡಿಸುತ್ತೀವಿ. ರೈತರ ಕೈಕಾಲು ಹಿಡಿತೀವಿ ಎಂದು ಶಾಸಕ ಶಿವಲಿಂಗೇಗೌಡ ಇದೇ ವೇಳೆ ತಿಳಿಸಿದರು.
ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಿ ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿತ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ನಿರ್ದೇಶನ ನೀಡಿದರು.
ಸರ್ಕಾರ ರೈತರ ಹಿತಾಸಕ್ತಿಯನ್ನು ಕಾಪಾಡಲು ಬದ್ಧವಾಗಿದ್ದು, ಬಾಕಿ ಉಳಿದಿರುವ ವಿಷಯಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಹಾಸನದಲ್ಲಿ ಐಐಟಿ ಸ್ಥಾಪಿಸಲಾಗುವುದು ಎಂದು ನೆಪ ಹೇಳುತ್ತಾ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಭೂಮಿ ಕಳೆದುಕೊಂಡ ರೈತರು ಜೀವಭಯದಲ್ಲಿ ಇರುವ ವಾತಾವರಣವಿದೆ. ಹಾಸನದಲ್ಲಿ ಐಐಟಿ ಆಗುವುದಾದರೆ ನಾವು ಸ್ವಾಗತಿಸುತ್ತೇವೆ. ಐಐಟಿಗೆ ನಾವು ವಿರೋಧಿಸುವುದಿಲ್ಲ. ಆದರೆ ಐಐಟಿ ನೆಪದಲ್ಲಿ ರೈತರ ಬದುಕಿಗೆ ಬೆದರಿಕೆ ಒಡ್ಡುವುದನ್ನು ನಾವು ಇನ್ನೂ ಎಷ್ಟು ವರ್ಷ ಅನುಭವಿಸಬೇಕು ಎಂದು ಸಿಎಂ ಬಳಿ ನಿವೇದಿಸಿಕೊಂಡ ರೈತರು. ನಮಗೆ ಪರಿಹಾರದ ಸೈಟೂ ಬೇಡ. ಪರಿಹಾರವೂ ಬೇಡ. ನಮ್ಮ ಜಮೀನು ನಮಗೆ ವಾಪಾಸ್ ಕೊಡಿಸಿಬಿಡಿ, ಡಿನೋಟಿಫೈ ಮಾಡಿ ಎಂದ ರೈತರು.
ರೈತರನ್ನು ರೈತರ ವಿರುದ್ಧವೇ ಎತ್ತಿ ಕಟ್ಟಿ ನಮ್ಮನ್ನು ಒಡೆದು ಆಳುವ ಆಟವನ್ನು ಜೆಡಿಎಸ್ ನವರಿಂದ ಆಡಿಸುತ್ತಿದ್ದಾರೆ. ಕ್ಲಾಸ್ ಒನ್ ಕಂಟ್ರಾಕ್ಟರ್ ಗಳನ್ನು ಮುಂದೆ ಬಿಟ್ಟು ಅವರಿಂದ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಹೆಚ್.ಡಿ.ರೇವಣ್ಣ ಅವರೇ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಿರುಕುಳ ಕೊಡಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕು. ನಿಮ್ಮ ಅವಧಿಯಲ್ಲೇ ಸಮಸ್ಯೆ ಬಗೆಹರಿಸಿ ಎಂದು ರೈತರು ಗೋಳು ತೋಡಿಕೊಂಡರು.
ರೈತರ ಮತ್ತು ಜಮೀನು ಕಳೆದುಕೊಂಡವರ ಅಹವಾಲುಗಳನ್ನು ಆಲಿಸಿ, ರೈತರ ಸಮ್ಮುಖದಲ್ಲೇ ಅಧಿಕಾರಿಗಳಿಂದ ನಕ್ಷೆ ಮತ್ತು ದಾಖಲಾತಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ ಸಿಎಂ ಡಿಕೆ ಶಿವಕುಮಾರ್, ಅಧಿಕಾರಿಗಳು ನನಗೆ ವಾಸ್ತವ ಸಂಗತಿಗಳನ್ನು ವಿವರಿಸಿದ್ದಾರೆ. ಅವರ ಜತೆ ಮತ್ತೊಂದು ಸುತ್ತು ಚರ್ಚಿಸಿ ಪರಿಹಾರ ಮಾರ್ಗಗಳನ್ನು ಕಂಡುಹಿಡಿಯಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.
Key words: Compensation, IIT, land, dispute, Hassan,Farmer, CM DK Shivakumar





